ಚುನಾವಣೆ ಬಂದಾಗಷ್ಟೆ ಕಾಂಗ್ರೆಸ್ ಬಡತನ ನಿರ್ಮೂಲನೆ ಬಗ್ಗೆ ಮಾತಾಡುತ್ತದೆ: ಮೋದಿ
ಸೋನೆಪುರ್ (ಒಡಿಸ್ಸಾ), ಏಪ್ರಿಲ್ 06: ಕಾಂಗ್ರೆಸ್ ಘೋಷಿಸಿರುವ ಕನಿಷ್ಠ ಆದಾಯ ಯೋಜನೆ (NYAY)ಯನ್ನು ಮೊದಲ ಬಾರಿಗೆ ಟೀಕಿಸಿರುವ ಪ್ರಧಾನಿ ಮೋದಿ, ಆ ಯೋಜನೆಯಿಂದ ದೇಶದಲ್ಲಿ ಹಣದುಬ್ಬರ ಉಂಟಾಗುತ್ತದೆ ಎಂದು ಹೇಳಿದರು.
ಒಡಿಸ್ಸಾದಲ್ಲಿ ಆಯೋಜಿಸಿದ್ದ ಚುನಾವಣಾ rally ಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೇವಲ ಒಂದು ಭರವಸೆಯನ್ನು ಮಾತ್ರವೇ ಚುನಾವಣೆ ಸಂದರ್ಭದಲ್ಲಿ ನೀಡುತ್ತದೆ, ಅದೆಂದರೆ ಬಡತನ ನಿರ್ಮೂಲನೆ ಎಂದು ಮೋದಿ ಲೇವಡಿ ಮಾಡಿದರು.
ಕಾಂಗ್ರೆಸ್ ದಶಕಗಳಿಂದ ಬಡತನ ನಿರ್ಮೂಲನೆ ಬಗ್ಗೆ ಹೇಳುತ್ತಲೇ ಬರುತ್ತಿದೆ, ಆದರೆ ಕಾಂಗ್ರೆಸ್ ಸಚಿವರು, ಮುಖಂಡರ ಬಡತನ ನಿರ್ಮೂಲನೆ ಆಗಿ ಶ್ರೀಮಂತರಾಗುತ್ತಿದ್ದಾರೆ ಎಂದು ಮೋದಿ ಹೇಳಿದರು. ಒಡಿಸ್ಸಾದ ಆಡಳಿತಾರೂಢ ಸರ್ಕಾರ ಬಿಜೆಡಿ ವಿರುದ್ಧವೂ ಮೋದಿ ವಾಗ್ದಾಳಿ ನಡೆಸಿದರು.
ಒಡಿಸ್ಸಾದಲ್ಲಿ ನಾನು ರೈಲ್ವೆ ಹಳಿ ಅಭಿವೃದ್ಧಿಪಡಿಸಿ 24 ಲಕ್ಷ ಜನರಿಗೆ ಉದ್ಯೋಗ ನೀಡಿದಾಗಲೆ, ಇಲ್ಲಿನ ಜನರಿಗೆ ನನ್ನ ಮೇಲೆ ನಂಬಿಕೆ ಬಂದಿದೆ, ಕಾಂಗ್ರೆಸ್ ಮತ್ತು ಬಿಜೆಡಿ ಅವರಿಗೆ ಬಡವರು ಕೇವಲ ಮತಬ್ಯಾಂಕ್ ಅಷ್ಟೆ, ಹಾಗಾಗಿಯೇ ಅವರಿಗೆ ಅಭಿವೃದ್ಧಿ ಇಷ್ಟವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ನೇತೃತ್ವದಲ್ಲಿ ಒಡಿಸ್ಸಾ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸರ್ಕಾರಗಳು ರಚನೆ ಆಗಲಿ, ವಲಸಿಗರ ಸ್ವರ್ಗ ಎನಿಸಿಕೊಳ್ಳುತ್ತಿರುವ ಅಸ್ಸಾಂ ಅನ್ನು ಪ್ರವಾಸೋದ್ಯಮದ ನಾಡಾಗಿ ಪರಿವರ್ತನೆ ಮಾಡುತ್ತೇವೆ ಎಂದು ಮೋದಿ ಭರವಸೆ ನೀಡಿದರು.