ಸರ್ಜಿಕಲ್ ಸ್ಟ್ರೈಕ್ ವಿಡಿಯೋ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ನವದೆಹಲಿ, ಜೂನ್ 28: 'ದಯವಿಟ್ಟು ಸೈನಿಕರ ಬಲಿದಾನವನ್ನು ನಿಮ್ಮ ಮತಗಳಿಕೆಯ ಸಾಧನವನ್ನಾಗಿ ಬಳಸಿಕೊಳ್ಳಬೇಡಿ...' ಇದು ಸರ್ಜಿಕಲ್ ಸ್ಟ್ರೈಕ್ ವಿಡಿಯೋಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ.
ವಿವಿಧ ಚಾನೆಲ್ ಗಳಲ್ಲಿ ಪ್ರಸಾರವಾದ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, 'ಆಡಳಿತ ಪಕ್ಷಕ್ಕೆ ಗೊತ್ತಿರಲಿ, ಅವರು ಸೈನಿಕರ ಬಲಿದಾನವನ್ನು ಮತಗಳಿಕೆಯ ಸಾಧನವನ್ನಾಗಿ ಬಳಸಿಕೊಳ್ಳಬಾರದು. ಹುತಾತ್ಮರಾಗಿದ್ದು ಸೈನಿಕರು, ಆದರೆ ವೈಭವೀಕರಣಗೊಳ್ಳುತ್ತಿರುವುದು ಮೋದೀಜಿ...' ಎಂದು ಸುರ್ಜೇವಾಲ ಬಿಜೆಪಿಗೆ ತಪರಾಕಿ ನೀಡಿದ್ದಾರೆ.
'ಜೈ ಜವಾನ್ ಜೈ ಕಿಸಾನ್ ಘೋಷಣೆಗೆ ಮೋದಿ ಸರ್ಕಾರ ಅವಮಾನ ಮಾಡುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅಥವಾ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಭಾರತೀಯ ಸೇನೆ ಸಾಕಷ್ಟು ಯಶಸ್ಸು ಗಳಿಸಿತ್ತು. ಅವನ್ನೆಲ್ಲ ಯಾರಾದರೂ ಮತಗಳಿಕೆಯ ಸಾಧನವನ್ನಾಗಿ ಬಳಸಿದ್ದರೇ? ಬಿಜೆಪಿ ನಾಯಕರು ಇದಕ್ಕೆ ಉತ್ತರ ನೀಡಬೇಕು' ಎಂದು ಸುರ್ಜೆವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮೋದಿ ಸರ್ಕಾರ ವಿಫಲವಾಗುತ್ತಿದೆ, ಅಮಿತ್ ಶಾ ಅವರ ಬಿಜೆಪಿ ಸೋಲುತ್ತಿದೆ ಎಂದಾಗ ಸೇನೆಯ ಘನತೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಬಳಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ' ಎಂದು ಸುರ್ಜೆವಾಲಾ ಖಡಕ್ ಆಗಿ ಹೇಳಿದ್ದಾರೆ.
2016ರ ಸೆಪ್ಟೆಂಬರ್ 29 ರಂದು ಭಾರತೀಯ ಸೇನೆ ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು. ಉರಿಯ ಸೇನಾ ನೆಲೆಯಲ್ಲಿ ಮಲಗಿದ್ದ 20 ಸೈನಿಕರನ್ನು ಉಗ್ರರು ಕೊಂದ ಘಟನೆಗೆ ಪ್ರತೀಕಾರವಾಗಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಆದರೆ ಸರ್ಜಿಕಲ್ ಸ್ಟ್ರೈಕ್ ಸುಳ್ಳು, ಸಾಕ್ಷಿ ನೀಡಿ ಎಂದು ವಿಪಕ್ಷಗಳು ಕೇಳಿದ್ದರಿಂದ ಇದೀಗ ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾಗಿದೆ.












Click it and Unblock the Notifications