ಗಾಂಧಿ ಪರಿವಾರದ ಸದಸ್ಯರ ಜೊತೆ ಹೊಸ ಅಧ್ಯಕ್ಷರು ಕೆಲಸ ಮಾಡಬೇಕು: ಚಿದಂಬರಂ
ನವದೆಹಲಿ, ಅಕ್ಟೋಬರ್ 19: ದೇಶದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಗಾಂಧಿ ಪರಿವಾರದ ಜೊತೆ ನಿಕಟ ಸಂಪರ್ಕ ಹೊಂದಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಜಯಸಾಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಖರ್ಗೆ ಅವರಿಗೆ ಪ್ರಮುಖ ನಾಯಕರ ಬೆಂಬಲವೂ ಇದೆ. ಆ ಕಾರಣ, ಪ್ರತಿಸ್ಪರ್ಧಿ ಶಶಿ ತರೂರ್ ಅವರ ಗೆಲುವಿನ ಹಾದಿ ಕಠಿಣವಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಆಗಲಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಆದರೆ, ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಖರ್ಗೆ, 'ಗಾಂಧಿ ಪರಿವಾರದ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ರಾಜಕೀಯದಲ್ಲಿ ಅನುಭವಿಗಳು. ಆದ್ದರಿಂದ ಅವರ ಸಲಹೆಗಳನ್ನು ಪಡೆದುಕೊಳ್ಳುತ್ತೇನೆ. ಅವರು ಚುನಾವಣೆಯಲ್ಲಿ ನನ್ನ ಬೆಂಬಲಕ್ಕೆ ನಿಂತಿಲ್ಲ. ಚುನಾವಣೆಯಲ್ಲಿ ಸಕ್ರಿಯರಾಗಿಲ್ಲ' ಎಂದು ಹೇಳಿದ್ದಾರೆ.
ಖರ್ಗೆ ವಿರುದ್ಧದ ಟೀಕೆಗಳ ಕುರಿತು ಎನ್ಡಿಟಿವಿ ಜೊತೆ ಕಾಂಗ್ರೆಸ್ನ ಪ್ರಮುಖ ನಾಯಕ ಪಿ.ಚಿದಂಬರ್ ಮಾತನಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುವವರು ಗಾಂಧಿ ಪರಿವಾರದ ರಬ್ಬರ್ ಸ್ಟಾಂಪ್ ಆಗಿರಲಾರರು. ಆದರೆ, ಗಾಂಧಿ ಕುಟುಂಬದ ಸದಸ್ಯರ ಸಲಹೆಗಳನ್ನು ಹೊಸ ಅಧ್ಯಕ್ಷರು ಅಲ್ಲಗಳೆಯಲಾರರು ಎಂದು ತಿಳಿಸಿದ್ದಾರೆ.
'ನೀವು ಈ ಚುನಾವಣೆಯನ್ನು 22 ವರ್ಷಗಳಲ್ಲಿ ನಡೆದ ಪ್ರಮುಖ ಬದಲಾವಣೆ ಎಂದು ಪರಿಗಣಿಸಬೇಕು. ಹೊಸ ಅಧ್ಯಕ್ಷರು ಗಾಂಧಿ ಪರಿವಾರದ ಸದಸ್ಯರೊಂದಿಗೆ ಕೆಲಸ ಮಾಡಬೇಕು. ಅವರು ರಾಜ್ಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಹೊಸ ಕಾಂಗ್ರೆಸ್ ಅಧ್ಯಕ್ಷರು ಈ ಕೆಲಸ ಮಾಡಲು ಕಲಿಯುತ್ತಾರೆ ಎಂಬುದು ನನಗೆ ಖಾತ್ರಿಯಿದೆ' ಎಂದು ಚಿದಂಬರಂ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಇಂದು ಫಲಿತಾಂಶ
ಅಕ್ಟೋಬರ್ 17ರಂದು ನಡೆದಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಈ ಚುನಾವಣೆಯಲ್ಲಿ ಒಟ್ಟು 9,915 ಪ್ರತಿನಿಧಿಗಳ ಪೈಕಿ 9,497 ಪ್ರತಿನಿಧಿಗಳು ಮತ ಚಲಾಯಿಸಿದ್ದಾರೆ. ದೇಶದಾದ್ಯಂತ 65 ಮತಕೇಂದ್ರಗಳಲ್ಲಿ ಪ್ರತಿನಿಧಿಗಳು ಮತ ಚಲಾವಣೆ ಮಾಡಿದ್ದರು. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮತ ಏಣಿಕೆ ಪ್ರಕ್ರಿಯ ಜಾರಿಯಲ್ಲಿದೆ.
ಚುನಾವಣೆಯಲ್ಲಿ ಅಕ್ರಮ: ಶಶಿ ತರೂರ್ ಬೆಂಬಲಿಗರ ಆರೋಪ
ಸೋಮವಾರ ನಡೆದಿದ್ದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಶಶಿ ತರೂರ್ ಬೆಂಬಲಿಗರ ತಂಡ ಆರೋಪಿಸಿದೆ. ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರಿಗೆ ಈ ಕುರಿತು ಪತ್ರ ಬರೆಯಲಾಗಿದೆ.
ಮಧುಸೂದನ್ ಮಿಸ್ತ್ರಿ ಅವರೊಂದಿಗೆ ಸತತ ಸಂವಹನ ನಡೆಸುತ್ತಿರುವ ನಾವು, ಹಲವು ವಿಚಾರಗಳ ಬಗ್ಗೆ ತಿಳಿಸಿದ್ದೇವೆ ಎಂದು ಶಶಿ ತರೂರ್ ಚುನಾವಣಾ ಎಜೆಂಟ್ ಸಲ್ಮಾನ್ ಸೋಜ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯು ಅಕ್ರಮದಿಂದ ಕೂಡಿದೆ. ಅಲ್ಲಿ ಗಂಭೀರ ಅಕ್ರಮಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ ಚಲಾವಣೆ ಆಗಿರುವ ಮತಗಳನ್ನು ಅಮಾನ್ಯ ಮಾಡಬೇಕು' ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ಮಧುಸೂದನ್ ಮಿಸ್ತ್ರಿ ಅವರಿಗೆ ಬರೆದ ಪತ್ರವನ್ನೂ ಟ್ವೀಟ್ ಮಾಡಿದ್ದಾರೆ.
ಭಾರತ್ ಜೋಡೊ ಯಾತ್ರೆಯಲ್ಲಿ ನಿರತರಾಗಿರುವ ರಾಹುಲ್
ಕಾಂಗ್ರೆಸ್ಗೆ ಇಂದು ಹೊಸ ಅಧ್ಯಕ್ಷರು ಆಯ್ಕೆ ಆಗಲಿದ್ದಾರೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ತಮಿಳು ನಾಡು, ಕೇರಳ, ಕರ್ನಾಟಕದಲ್ಲಿ ಸಂಚರಿಸಿರುವ ಯಾತ್ರೆಯು ಮಂಗಳವಾರ ಆಂಧ್ರ ಪ್ರದೇಶದ ಕರ್ನೂಲ್ಗೆ ಕಾಲಿಟ್ಟಿದೆ. ತಮಿಳು ನಾಡಿನ ಕನ್ಯಾಕುಮಾರಿಯಿಂದ ಶುರುವಾದ ಯಾತ್ರೆ ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ.