ನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್ ನೀಡಿದೆ ಭಾರಿ ಭರವಸೆಗಳು
ನವದೆಹಲಿ, ಏಪ್ರಿಲ್ 02: ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆ 2019 ರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಊಹಿಸಿದಂತೆಯೇ ನಿರುದ್ಯೋಗ ನಿವಾರಣೆಗೆ ಭಾರಿ ಒತ್ತು ನೀಡಿದೆ.
ಮೋದಿ ಸರ್ಕಾರವು ಯುಕವರಿಗೆ ಉದ್ಯೋಗ ನಿಡುವಲ್ಲಿ ಭಾರಿ ವಿಫಲವಾಗಿದೆ ಎಂಬ ಆರೋಪ ಇದೆ, ಇದರ ಬಗ್ಗೆ ದೇಶದಾದ್ಯಂತ ಆಕ್ರೋಶವೂ ಇದೆ, ಹಾಗಾಗಿಯೇ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉದ್ಯೋಗ ನೀಡಿಕೆಗೆ ಭಾರಿ ಒತ್ತು ನೀಡಿದೆ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಲ್ಲಿ, ಕೇಂದ್ರ ಸರ್ಕಾರದ ಖಾಲಿ ಇರುವ 4 ಲಕ್ಷ ಉದ್ಯೋಗಕ್ಕೆ ಮುಂದಿನ ಮಾರ್ಚ್ 2020ರ ಒಳಗಾಗಿ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದೆ. ಉದ್ಯೋಗ ನೀಡಿಕೆಗೆ ನಮ್ಮ ಮೊದಲ ಆದ್ಯತೆಯೆಂದೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಉದ್ಯೋಗ ನೀಡಿಕೆಗೆಂದೇ ಹೊಸ ಇಲಾಖೆಯನ್ನು ಸರ್ಕಾರದ ಮಟ್ಟದಲ್ಲಿ ಸ್ಥಾಪಿಸಿ ಸಚಿವರೊಬ್ಬರನ್ನು ನೇಮಿಸುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ, ಉದ್ಯಮ, ಸೇವೆ ಮತ್ತು ಉದ್ಯೋಗವು ಈ ಸಚಿವರ ವ್ಯವಸ್ಥಾಪನೆಯಲ್ಲಿ ನಡೆಯಲಿದೆ.
ಪಂಚಾಯಿತಿ ಮತ್ತು ಪುರಸಭೆ, ನಗರಸಭೆ ವ್ಯಾಪ್ತಿಗಳಲ್ಲಿ ಸೇವಾ ಮಿತ್ರ ಎಂಬ ಹೊಸ ಹುದ್ದೆ ಸೃಷ್ಠಿಸಿ, ಸರ್ಕಾರದ ಸೇವೆಗಳು ಜನರಿಗೆ ಸುಲಭವಾಗಿ ತಲುಪುವ ವ್ಯವಸ್ಥೆ ಮಾಡಲಾಗುತ್ತದೆ, ಇದರಿಂದ ಕನಿಷ್ಟ 10 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಸರ್ಕಾರಿ ಕೆಲಸಕ್ಕೆ ಉಚಿತವಾಗಿ ಅರ್ಜಿ!
ಸರ್ಕಾರಿ ಕೆಲಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಜಿ ಶುಲ್ಕವನ್ನು ತೆಗೆದುಹಾಕಲಾಗುವುದು, ಯಾರು ಬೇಕಾದರೂ ಉಚಿತವಾಗಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಹಾಕುವಂತೆ ಬದಲಾವಣೆ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ.

ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಗೌರವ ಧನ
ಆಶಾ ಕಾರ್ಯಕಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ರೋಜ್ಗಾರ್ ಸಹಾಯಕರು, ಪ್ರೇರಕರು, ಅನುದೇಶಕರು ಇನ್ನೂ ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಬಳ ಹೆಚ್ಚಿಸಲಾಗುತ್ತದೆ, ಎರಡನೇ ಹಂತದ ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗುವುದು ಎಂದು ಸಹ ಭರವಸೆ ನೀಡಲಾಗಿದೆ.

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು, ಕೃಷಿಯೇತರ 90% ನಿರುದ್ಯೋಗವನ್ನು ಇದು ನಿವಾರಣೆ ಮಾಡುವಂತೆ ಇದನ್ನು ವಿನ್ಯಾಸ ಮಾಡಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಸ್ಟಾರ್ಟಪ್ ಗಳಿಗೆ ಹೇರಲಾಗುತ್ತಿರುವ ಏಂಜಲ್ ತೆರಿಗೆ ರದ್ದು ಮಾಡಲಾಗುವುದು, ಸುಲಭ ಸಾಲ ಸೌಲಭ್ಯ ದೊರಕುವಂತೆ ಮಾಡಲಾಗುವುದು.

ಬೃಹತ್ ಪ್ರಮಾಣದ ಕೌಶಲ್ಯ ವೃದ್ಧಿಗೆ ಒತ್ತು
ಬೃಹತ್ ಉದ್ಯಮಶೀಲತೆ ಅಥವಾ ಕೌಶಲ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ಕಾಂಗ್ರೆಸ್ ನೀಡುತ್ತದೆ. ವಾಣಿಜ್ಯ ಮತ್ತು ಸೇವಾ ವಿಭಾಗದಲ್ಲಿ ಹೆಚ್ಚುತ್ತಿರುವ ಕೌಶಲ್ಯಕಾರರ ಬೇಡಿಕೆ ತುಂಬಲು ಬೃಹತ್ ಕೌಶಲ್ಯ ತರಬೇತಿಗಳನ್ನು ರಾಷ್ಟ್ರವ್ಯಾಪಿ ಹಮ್ಮಿಕೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಹೆಚ್ಚಿನ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರೋತ್ಸಾಹ
ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಠಿಸುವ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಪುರಸ್ಕಾರ, ತೆರಿಗೆ ವಿನಾಯಿತಿಗಳನ್ನು ನೀಡಲಾಗುತ್ತದೆ. ಹೆಚ್ಚು ಉದ್ಯೋಗಗಳನ್ನು ನೀಡುತ್ತಿರುವ ನಿರ್ಮಾಣ ಕಾಮಗಾರಿ, ಬಟ್ಟೆ ಉದ್ಯಮ, ಚರ್ಮ ಉದ್ಯಮ, ಆಭರಣ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು.

ಕಡಿಮೆ ಶಿಕ್ಷಿತರಿಗಾಗಿಯೂ ಕೋಟ್ಯಂತರ ಉದ್ಯೋಗ
ಕಡಿಮೆ ಶಿಕ್ಷಣ ಪಡೆದ ಯುವಕ, ಯುವತಿಯರಿಗಾಗಿ ಕಡಿಮೆ ಕೌಶಲ್ಯದ ಅಗತ್ಯವಿರುವ ಉದ್ಯೋಗಗಳನ್ನೂ ನಾವು ಲಕ್ಷಾಂತರ ಸಂಖ್ಯೆಯಲ್ಲಿ ಸೃಷ್ಠಿಸಬೇಕಿದೆ ಎಂಬ ಅರಿವಿದೆ. ಇದಕ್ಕಾಗಿಯೇ ಕಾಂಗ್ರೆಸ್, ಗ್ರಾಮ ಸಭಾ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತದೆ, ಇದು ಒಂದು ಕೋಟಿ ಉದ್ಯೋಗವನ್ನು ಸೃಷ್ಟಿಸುತ್ತದೆ.

ಹಲವು ಯೋಜನೆಗಳ ಭರವಸೆ
ಹೊಸ ಉದ್ಯಮಗಳಿಗೆ ಈಗಿರುವ ನಿಯಮಗಳನ್ನು ಮೂರು ವರ್ಷಗಳ ವರೆಗೆ ತೆಗೆದುಹಾಕಲಾಗುವುದು (ಕನಿಷ್ಟ ಕೂಲಿ ಮತ್ತು ತೆರಿಗೆ ಕಾನೂನೂ ಹೊರತುಪಡಿಸಿ). ರಾಜ್ಯ ಸರ್ಕಾರಗಳಿಗೂ ಉದ್ಯೋಗಕ್ಕೆ ಆದ್ಯತೆ ನೀಡುವಂತೆ ಕೋರಲಾಗುವುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇನ್ನೂ ಹಲವು ಕಾರ್ಯಕ್ರಮಗಳನ್ನು ನಿರುದ್ಯೋಗ ನಿರ್ಮೂಲನೆಗೆಂದು ನೀಡಲಾಗಿದೆ. ಇಲ್ಲಿ ಕೆಲವು ಮುಖ್ಯಾಂಶಗಳನ್ನಷ್ಟೆ ನೀಡಲಾಗಿದೆ.












Click it and Unblock the Notifications