ಪೊಲೀಸರ ಕಾಲರ್ ಹಿಡಿದ ಕಾಂಗ್ರೆಸ್ ನಾಯಕಿ: ವಿಡಿಯೋ ವೈರಲ್
ಹೈದರಾಬಾದ್, ಜೂನ್ 16: ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ತೆಲಂಗಾಣದಲ್ಲೂ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದ್ದು, ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪೊಲೀಸ್ ಅಧಿಕಾರಿ ಕಾಲರ್ ಹಿಡಿದಿದ್ದಾರೆ, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಘಟನೆಯ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್ಐ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ಇದು 46,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. 43 ಸೆಕೆಂಡ್ಗಳ ವಿಡಿಯೋದಲ್ಲಿ ರೇಣುಕಾ ಚೌಧರಿ ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಿದ್ದಾರೆ. ನಂತರ ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದು ಎಳೆದಾಡಿದ್ದಾರೆ. ಕೂಡಲೇ ಮಹಿಳಾ ಪೊಲೀಸ್ ಅಧಿಕಾರಿ ರೇಣುಕಾ ಚೌಧರಿ ಅವರ ಕೈಯನ್ನು ಪಂಜಗುಟ್ಟ ಎಸ್ಐ ಶರ್ಟ್ನಿಂದ ಎಳೆದಿದ್ದಾರೆ. ರಾಜಭವನಕ್ಕೆ ತೆರಳುತ್ತಿದ್ದ ರೇಣುಕಾ ಚೌಧರಿ ಅವರನ್ನು ಮಹಿಳಾ ಪೊಲೀಸರು ಸುತ್ತುವರಿದು ಪೊಲೀಸ್ ವಾಹನಕ್ಕೆ ಕರೆದೊಯ್ದಿದ್ದಾರೆ.
ರಾಹುಲ್ ಗಾಂಧಿಯನ್ನು ಇಡಿ ಪ್ರಶ್ನಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ನೀಡಿದ "ಚಲೋ ರಾಜಭವನ" ಕರೆಯ ಭಾಗವಾಗಿ ಪ್ರತಿಭಟನೆ ಆಯೋಜಿಸಲಾಗಿದೆ. ನ್ಯಾಷನಲ್ ಹೆರಾಲ್ಡ್-ಎಜೆಎಲ್ ಡೀಲ್ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾಹುಲ್ ವಿಚಾರಣೆ ನಡೆಸುತ್ತಿದೆ.
|
ಎಸ್ಐ ಕಾಲರ್ ಹಿಡಿದು ರೇಣುಕಾ ಚೌಧರಿ ಧಮ್ಕಿ
ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ ರಾಜಭವನಕ್ಕೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ಹಿಂಬಾಲಿಸಿದರು. ನನ್ನನ್ನು ಮುಟ್ಟಬೇಡಿ ಎಂದು ರೇಣುಕಾ ಚೌಧರಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಕೈಮೀರುತ್ತದೆ ಎಂದು ಕೆಲ ಪ್ರತಿಭಟನಾಕಾರರನ್ನು ಬಂಧಿಸಿದ್ದಕ್ಕೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯೊಬ್ಬರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಇದನ್ನು ಗಮನಿಸಿದ ರೇಣುಕಾ ಚೌಧರಿ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನನ್ನು ಬಂಧಿಸಲು ಬಂದ ಮಹಿಳಾ ಪೊಲೀಸರನ್ನು ಚೌಧರಿ ಹಿಂದಕ್ಕೆ ತಳ್ಳಿದ್ದಾರೆ. ಅದೇ ವೇಳೆಗೆ ಅಲ್ಲೇ ಇದ್ದ ಪಂಜಗುಟ್ಟ ಎಸ್ಐ ರೇಣುಕಾ ಚೌಧರಿ ಅವರನ್ನು ತಡೆಯಲು ಯತ್ನಿಸಿದ್ದು, ರೇಣುಕಾ ಚೌಧರಿ ಎಸ್ಐ ಶರ್ಟ್ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರತಿಭಟನಾಕಾರರು ಪೊಲೀಸರ ವಶಕ್ಕೆ
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಮತ್ತು ಪಕ್ಷದ ಸಂಸದ ಎ. ರೇವಂತ್ ರೆಡ್ಡಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಹಲವರು ರಾಜಭವನದತ್ತ ಸಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ರಾಜಭವನ ಮುತ್ತಿಗೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸಿಎಲ್ಪಿ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಮಾಜಿ ಕೇಂದ್ರ ಸಚಿವ ರೇಣುಕಾ ಚೌಧರಿ ವಿರುದ್ಧ ಹೈದರಾಬಾದ್ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಾಹನಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು
ಪ್ರತಿಭಟನೆಯಿಂದಾಗಿ ಖೈರತಾಬಾದ್ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರತಿಭಟನೆ ವೇಳೆ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ ಮತ್ತು ಕೆಲವು ಪ್ರತಿಭಟನಾಕಾರರು ಸರ್ಕಾರಿ ಸಿಟಿ ಬಸ್ ಮೇಲೆ ಹತ್ತಿದ್ದಾರೆ. ಆರ್ಟಿಸಿ ಬಸ್ನ ಗಾಜುಗಳು ಜಖಂಗೊಂಡಿವೆ, ಪೊಲೀಸರ ಅತಿರೇಕವೇ ಈ ಪರಿಸ್ಥಿತಿಗೆ ಕಾರಣ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಗ್ಗಾರೆಡ್ಡಿ ಆರೋಪಿಸಿದ್ದಾರೆ.
ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಚಲೋ ರಾಜಭವನ ಕಾರ್ಯಕ್ರಮವನ್ನು ಟಿಪಿಸಿಸಿ ಗಂಭೀರವಾಗಿ ಪರಿಗಣಿಸಿದೆ. ಕೆಲ ಕಾಂಗ್ರೆಸ್ ನಾಯಕರು ಪೊಲೀಸ್ ಭದ್ರತೆಯನ್ನು ಮುರಿದು ರಾಜಭವನಕ್ಕೆ ಧಾವಿಸಿದರು.

ಬಿಜೆಪಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುತ್ತಿದೆ
ಮತ್ತೊಂದೆಡೆ ಪಕ್ಷದ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರವು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
"ಮೂರು ದಿನಗಳ ಹಿಂದೆ ನಾವು ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದೆವು, ನಮಗೆ ಶಾಂತಿಯುತ ಮೆರವಣಿಗೆ ಮಾಡಲು ಅವಕಾಶ ಬೇಕು ಅದನ್ನು ನಿರಾಕರಿಸಲಾಗಿದೆ. ಇಂದು ನಾವು ಯಾವುದೇ ಪ್ರತಿಭಟನೆಯನ್ನು ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಅಡ್ಡಿಪಡಿಸಿದೆ. ಪ್ರಜಾಪ್ರಭುತ್ವದಲ್ಲಿ, ನೀವು ಮಾತನಾಡಲು ಸಾಧ್ಯವಾಗದಿದ್ದರೆ. ಹೊರಗೆ, ನೀವು ಪ್ರತಿಭಟಿಸಲು ಸಾಧ್ಯವಾಗದಿದ್ದರೆ, ನೀವು ಪ್ರತಿಪಕ್ಷವಾಗಿ ನಿಮ್ಮ ಕೆಲಸವನ್ನುಮಾಡುವುದು ಹೇಗೆ?," ಎಂದು ಅವರು ಹೇಳಿದರು.
ಕಳೆದ ಕೆಲವು ದಿನಗಳಿಂದ, ರಾಹುಲ್ ಗಾಂಧಿ ವಿರುದ್ಧದ ಇಡಿ ಕ್ರಮದ ವಿರುದ್ಧ ಕಾಂಗ್ರೆಸ್ ನಾಯಕರು 'ಸತ್ಯಾಗ್ರಹ'ದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಭಟನಾಕಾರರು ತಮ್ಮ ಮೇಲೆ ಬ್ಯಾರಿಕೇಡ್ಗಳನ್ನು ಎಸೆದರು ಎಂದು ಪೊಲೀಸರು ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಥಳಿಸಿದ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಕಳೆದ ಮೂರು ದಿನಗಳಿಂದ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಗಾದ ರಾಹುಲ್ ಗಾಂಧಿಗೆ ಶುಕ್ರವಾರ ಏಜೆನ್ಸಿಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.












Click it and Unblock the Notifications