ಗುಜರಾತ್ನಿಂದ ಚುನಾವಣಾ ಪ್ರಚಾರ ಆರಂಭಿಸಲಿರುವ ಮಲ್ಲಿಕಾರ್ಜುನ ಖರ್ಗೆ
ಅಹಮದಾಬಾದ್, ಅ.07: ಶುಕ್ರವಾರ ಗುಜರಾತ್ನಿಂದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಲು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಹಮದಾಬಾದ್ ತಲುಪಿದ್ದಾರೆ.
ಅವರು ಅಹಮದಾಬಾದ್ನಲ್ಲಿರುವ ಸಬರಮತಿ ಆಶ್ರಮ ಮತ್ತು ಗುಜರಾತ್ ಕಾಂಗ್ರೆಸ್ನ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಕಚೇರಿಗೆ ಭೇಟಿ ನೀಡಲಿದ್ದಾರೆ.
ಈ ಬಾರಿಯ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಗಾಂಧಿಯೇತರ ನಾಯರೊಬ್ಬರು ಪಕ್ಷದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಾಂಧಿಯವರ ಅಭ್ಯರ್ಥಿ ಎಂದೂ ಕರೆಯಲಾಗುತ್ತಿದೆ. ಶಶಿ ತರೂರ್ ಕೂಡ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ.

ಈ ಮೊದಲು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಒಮ್ಮತದಿಂದ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ ಎಂಬುದು ಅಧಿಕೃತವಾಗುವಂತಿತ್ತು. ಆದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಚಿನ್ ಪೈಲಟ್ ಆ ಸ್ಥಾನಕ್ಕೆ ಏರುತ್ತಾರೆ ಎಂಬ ಸುಳಿವಿನ ಬೆನ್ನಲ್ಲೆ ಬಂಡಾಯ ಪ್ರಾರಂಭವಾಗಿ ಗೆಹ್ಲೋಟ್ ಕನಸಿಗೆ ನೀರೆರೆಚಲಾಯಿತು. ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಕ್ಷಮೆಯಾಚಿಸಿ, ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ 30 ರಂದು ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಗಾಂಧಿಗಳು ಉನ್ನತ ಹುದ್ದೆಗೆ ಸ್ಪರ್ಧಿಸದ ಕಾರಣ, ಪಕ್ಷವು 25 ವರ್ಷಗಳ ನಂತರ ಗಾಂಧಿಯೇತರ ಅಧ್ಯಕ್ಷರನ್ನು ಪಡೆಯಲು ಸಿದ್ಧವಾಗಿದೆ.
ಇನ್ನು, "ಪಕ್ಷವನ್ನು ಬಲಗೊಳಿಸಲು ಮತ್ತು ಭಾರತದ ಸಂವಿಧಾನವನ್ನು ಉಳಿಸಲು ನಾನು ಚುನಾವಣೆಗೆ ಸ್ಪರ್ಧಿಸಲು ಒಪ್ಪಿದ್ದೇನೆ, ಸ್ಪರ್ಧಿಸುತ್ತಿದ್ದೇನೆ. ಪಕ್ಷದ ಅಧ್ಯಕೀಯ ಚುನಾವಣೆಯಲ್ಲಿ ಗಾಂಧಿ ಕುಟುಂಬ ಸದಸ್ಯರು ತಟಸ್ಥವಾಗಿದ್ದಾರೆ. ಇದು ನಿಷ್ಪಕ್ಷಪಾತ ಚುನಾವಣೆ" ಎಂದು ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಹೇಳಿದ್ದರು












Click it and Unblock the Notifications