ಭಾರತದಲ್ಲೂ ಕೊರೊನಾ ಉಪತಳಿ ಭೀತಿ: ಕೇಜ್ರಿವಾಲ್ ತುರ್ತು ಸಭೆ
ನವದೆಹಲಿ, ಡಿಸೆಂಬರ್ 22: ಭಾರತದಲ್ಲಿ ಒಮಿಕ್ರಾನ್ ಸಬ್ವೇರಿಯಂಟ್ BF.7 ರೂಪಾಂತರದ ಕನಿಷ್ಠ ಮೂರು ಪ್ರಕರಣಗಳು ವರದಿಯಾದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ಫುಲ್ ಅಲರ್ಟ್ ಆಗಿದೆ. ಹೊಸ ಉಪತಳಿ ಪತ್ತೆ ಬೆನ್ನಲ್ಲೇ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಕೋವಿಡ್ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.
ಚೀನಾದಲ್ಲಿ ಸೃಷ್ಟಿಯಾಗಿರುವ ಕೋವಿಡ್-19 ಭೀತಿಯ ಹಿಂದೆಯೇ ಭಾರತವು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ವಹಿಸುತ್ತಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಿದ್ದು ಆಗಿದೆ.
Covid was man-made virus : ಕೊರೊನಾವೈರಸ್ ಎಂಬುದು ಮಾನವ ನಿರ್ಮಿತ ವೈರಸ್: ವುಹಾನ್ ವಿಜ್ಞಾನಿ
ದೇಶದಲ್ಲಿ BF.7 ಉಪತಳಿಯ ಮೊದಲ ಪ್ರಕರಣವನ್ನು ಅಕ್ಟೋಬರ್ನಲ್ಲಿ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಪತ್ತೆ ಮಾಡಿದೆ. ಇಲ್ಲಿಯವರೆಗೆ ಗುಜರಾತ್ನಲ್ಲಿ ಎರಡು ಪ್ರಕರಣಗಳು ವರದಿಯಾಗಿದ್ದು, ಒಡಿಶಾದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ಕೇಂದ್ರ ಆರೋಗ್ಯ ಸಚಿವರಿಂದಲೂ ಸಭೆ:
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ದೇಶದ ಕೋವಿಡ್ ಪರಿಸ್ಥಿತಿಯ ಕುರಿತು ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯ ನಂತರ, "COVID ಇನ್ನೂ ಮುಗಿದಿಲ್ಲ. ಎಲ್ಲರೂ ಎಚ್ಚರದಿಂದ ಇರುವಂತೆ ಮತ್ತು ಕಣ್ಗಾವಲು ಬಲಪಡಿಸುವಂತೆ ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ," ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ಮಾರ್ಗಸೂಚಿ ಪಾಲನೆಗೆ ಪತ್ರ:
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದು, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ತಿಳಿಸಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಅನ್ನು ಕಟ್ಟುನಿಟ್ಟಾಗಿ ಬಳಸುವಂತೆಯೂ ಕೇಂದ್ರ ಸರ್ಕಾರ ಸೂಚಿಸಿದೆ.