Chandrayaan-3: ಚಂದ್ರಯಾನ ಯೋಜನೆಗೆ ನೆರವಾಗಿದ್ದ ತಮಿಳುನಾಡಿನ ಮಣ್ಣು!
ಭಾರತದ 'ಚಂದ್ರಯಾನ-3' ಯೋಜನೆಗೆ ಇಡೀ ದೇಶವೇ ನೆರವಾಗಿದ್ದು, ದೇಶದ ಒಂದೊಂದು ಮೂಲೆಯಿಂದ ಒಂದೊಂದು ಕೊಡುಗೆ ಸಿಕ್ಕಿದೆ. ಹೀಗೆ ತಮಿಳುನಾಡು ರಾಜ್ಯದಿಂದ ಬಹುಮುಖ್ಯ ಕೊಡುಗೆ ಸಿಕ್ಕಿದೆ. ಹಾಗಾದರೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಸಿಗುವ ಮಣ್ಣಿಗೂ ಹಾಗೂ ಚಂದ್ರನ ಮೇಲಿರುವ ಮಣ್ಣಿಗೂ ಏನು ಸಂಬಂಧ? ಅದರ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ತಮಿಳುನಾಡು ರಾಜಧಾನಿ ಚೆನ್ನೈಗೆ ಸುಮಾರು 400 ಕಿಲೋ ಮೀಟರ್ ದೂರದಲ್ಲಿ ಇರುವ ಈ ಜಾಗದ ಹೆಸರು ನಾಮಕ್ಕಲ್ ಅಂತಾ. ಈ ನಾಮಕ್ಕಲ್ ಜಿಲ್ಲೆಯಲ್ಲಿ ಸಿಗುವ ಮಣ್ಣು ದೇಶದಲ್ಲಿನ ಇತರ ಭಾಗದ ಮಣ್ಣಿಗಿಂತಲೂ ವಿಭಿನ್ನ. ಚಂದ್ರನ ಮೇಲ್ಮೈ ಮಣ್ಣಿನ ಗುಣಲಕ್ಷಣ ಹೋಲುವ ಈ ಪ್ರದೇಶದ ಮಣ್ಣನ್ನು ಚಂದ್ರಯಾನ ಯೋಜನೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ಗಾಗಿ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಬಳಸಿದ್ದಾರೆ. ಹೀಗೆ 2012ರಿಂದ ಇಲ್ಲಿನ ಮಣ್ಣನ್ನು ಚಂದ್ರಯಾನ ಯೋಜನೆಯಲ್ಲಿ ಬಳಸಲಾಗುತ್ತಿದೆ. ಲ್ಯಾಂಡರ್ನ ಸಾಫ್ಟ್ ಲ್ಯಾಂಡಿಂಗ್ ಸಾಮರ್ಥ್ಯ ಅಳೆಯಲು ಇದು ಸಹಾಯಕ. ಹೀಗೆ ಈವರೆಗೂ 3 ಬಾರಿ ಈ ಮಣ್ಣನ್ನು ಇಸ್ರೊಗೆ ಪೂರೈಸಲಾಗಿದೆ. ಈ ಬಾರಿ ಕೂಡ ನಾಮಕ್ಕಲ್ ಮಣ್ಣು ಬಳಕೆಯಾಗಿದ್ದು ಇಸ್ರೋಗೆ ನೆರವಾಗಿದೆ.

ಚಂದ್ರನ ಮಣ್ಣಿನ ವಿಶೇಷತೆ ಏನು?
ಸೌರಮಂಡಲ ವಿಚಿತ್ರ ಹಾಗೂ ವಿಸ್ಮಯ, ಹೀಗೆ ಇದುವರೆಗೂ ಮನುಷ್ಯನಿಗೆ ಅರ್ಥವಾಗದ ರೀತಿ ಅದೆಷ್ಟೋ ವಿಸ್ಮಯಗಳನ್ನ ಬಾಹ್ಯಾಕಾಶ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಹೀಗೆ ಭೂಮಿ ಉಪಗ್ರಹ ಚಂದ್ರ ಕೂಡ ವಿಸ್ಮಯಗಳ ಆಗರ. ಭೂಮಿ ಮೇಲಿನ ಮಣ್ಣಿಗೂ & ಚಂದ್ರನ ಮಣ್ಣಿಗೂ ಭಾರಿ ವ್ಯತ್ಯಾಸ ಇದೆ. ಆದರೆ ನಾಮಕ್ಕಲ್ನಲ್ಲಿರುವ ಮಣ್ಣು ಚಂದ್ರನ ಮೇಲ್ಮೈಯಲ್ಲಿ ಇರುವ ಮಣ್ಣಿಗೆ ಹೋಲುತ್ತದೆ. ವಿಶೇಷವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮಣ್ಣನ್ನು ಹೋಲುತ್ತದೆ. ಚಂದ್ರನ ಮೇಲಿರುವ ಮಣ್ಣು 'ಅನಾರ್ತೊಸೈಟ್' ಆಗಿದ್ದು ಇದನ್ನಅಗ್ನಿಶಿಲೆ ಮಣ್ಣಿಗೆ ಹೋಲಿಸಲಾಗುತ್ತೆ.
ಇಸ್ರೋ ತಲುಪಿದ 50 ಟನ್ ಮಣ್ಣು
ಚಂದ್ರನ ಯೋಜನೆಗೆ ಮಣ್ಣು ಬರೋದು ತಮಿಳುನಾಡಿನಿಂದ. ಇತಿಹಾಸ 2012ರಿಂದಲೂ ಹೀಗೆ ಮುಂದುವರಿದಿದೆ. ನಾಮಕ್ಕಲ್ ಪ್ರದೇಶದಲ್ಲಿ ಚಂದ್ರನ ಮಣ್ಣಿಗೆ ಹೋಲುವ ಮಣ್ಣು ಹೇರಳವಾಗೇ ಲಭ್ಯವಿದ್ದು, ಇಸ್ರೋಗೆ ಅಗತ್ಯವಿರುವ ಸಂದರ್ಭಕ್ಕೆ ಮಣ್ಣನ್ನು ಪೂರೈಸಲಾಗುತ್ತಿದೆ. ಚಂದ್ರಯಾನ ಯೋಜನೆ ಘೋಷಣೆಯಾದ ತಕ್ಷಣ ಮಣ್ಣು ಪೂರೈಸುವ ಕೆಲಸ ಶುರುವಾಗುತ್ತದೆ. ಅಲ್ಲದೆ ವಿವಿಧ ಪರೀಕ್ಷೆ ಕೈಗೊಂಡ ನಂತರ ನಾಮಕ್ಕಲ್ ಮಣ್ಣು ಮತ್ತು ಚಂದ್ರನ ಮೇಲ್ಮೈ ಮಣ್ಣಿಗೆ ಸಾಮ್ಯತೆ ಇದೆ ಎಂಬುದನ್ನ ವಿಜ್ಞಾನಿಗಳು ಕಂಡುಕೊಂಡರು. ಈ ಕಾರಣಕ್ಕೆ ಇಸ್ರೋಗೆ ತಮಿಳುನಾಡಿನ ಮಣ್ಣು ಅನಿವಾರ್ಯ. ಈವರೆಗೂ ಸುಮಾರು 50 ಟನ್ ಮಣ್ಣನ್ನು ಇಸ್ರೊಗೆ ಕಳುಹಿಸಲಾಗಿದೆ ಎಂದರೆ ಎಷ್ಟು ಅತ್ಯಗತ್ಯ ಎಂಬುದನ್ನು ನೀವೆ ಲೆಕ್ಕ ಹಾಕಿ.

ಒಟ್ನಲ್ಲಿ ತಮಿಳುನಾಡು ವಿಜ್ಞಾನಿಗಳ ರೀತಿಯೇ ತಮಿಳುನಾಡಿನ ಮಣ್ಣು ಕೂಡ ಇಸ್ರೋ ಸಂಸ್ಥೆ ಕೈಗೊಂಡ ಚಂದ್ರಯಾನ ಯೋಜನೆಗೆ ಸಾಥ್ ನೀಡಿತ್ತು. ಅದ್ರಲ್ಲೂ ನಾಮಕ್ಕಲ್ ಸುತ್ತಮುತ್ತಲಿನ ಸೀತಾಂಪೂಂಡಿ ಮತ್ತು ಕುನ್ನಮಲೈ ಸೇರಿದಂತೆ ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿ ಈ ರೀತಿ ಮಣ್ಣು ಅತಿಹೆಚ್ಚು ಪ್ರಮಾಣದಲ್ಲಿ ಇದೆ. ಹೀಗೆ ಈ ಸತ್ಯ ಬೆಳಕಿಗೆ ಬರುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಮಣ್ಣಿನ ಲಾಭ ಪಡೆಯುತ್ತಿದ್ದಾರೆ. ಮುಂದೆಯು ಕೂಡ ಭಾರತಕ್ಕೆ ಇದು ಮತ್ತಷ್ಟು ನೆರವಾಗುವ ಸಾಧ್ಯತೆ ಇದೆ.
ಇಸ್ರೋ ಸಾಧನೆಗೆ ಜಗತ್ತಿನಾದ್ಯಂತ ಸಲಾಂ
ಚಂದ್ರಯಾನ-3 ಯೋಜನೆಗೆ ಇಸ್ರೋ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಬಳಸಿತ್ತು. ಹೀಗೆ ಸುಲಭವಾಗಿ ಈ ಬಾರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ರಣತಂತ್ರ ರೂಪಿಸಿತ್ತು. ನಮ್ಮ ವಿಜ್ಞಾನಿಗಳ ರಣತಂತ್ರ ಗೆದ್ದು ಬೀಗಿದೆ. ಮೊದಲನೆಯದಾಗಿ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಕ್ರಮ್ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸಿತ್ತು ಮತ್ತು ಈ ಲ್ಯಾಂಡರ್ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಲ್ಯಾಂಡರ್ನಲ್ಲಿ ಅಳವಡಿಸಿತ್ತು ಇಸ್ರೋ ಸಂಸ್ಥೆ. ಹೀಗೆ ಈ ಎಲ್ಲಾ ತಂತ್ರಜ್ಞಾನವನ್ನು ಭೂಮಿ ಮೇಲೆ ಪರಿಶೀಲನೆ ಮಾಡೋಕೆ ನೆರವಾಗಿದ್ದು ತಮಿಳುನಾಡಿನ ಮಣ್ಣು.

LPDC, LHDAC ಜತೆ ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಪೇಲೋಡ್ ಜೊತೆ ಕೆಲಸ ಮಾಡಿವೆ. ಈ ಮೂಲಕ ಸಮತಟ್ಟು ಜಾಗದ ಮೇಲೆ, ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಸಿದೆ ಇಸ್ರೋ. ಭಾರತದ ಈ ಸಾಧನೆಯನ್ನು ಜಗತ್ತಿನಲ್ಲೇ ಇದುವರೆಗೆ ಯಾವುದೇ ರಾಷ್ಟ್ರವೂ ಮಾಡಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದೆ. ಭಾರತದ ಇಸ್ರೋ ಇಷ್ಟು ಸಾಧನೆ ಮಾಡುವುದರ ಹಿಂದೆ ತಮಿಳುನಾಡಿನ ಮಣ್ಣಿನ ಪಾತ್ರ ಇರುವುದು ಮತ್ತೊಂದು ಪ್ರಮುಖವಾದ ವಿಚಾರ.












Click it and Unblock the Notifications