ದುರಭಿಮಾನಿ ಕೇಂದ್ರಕ್ಕೆ ಒಳ್ಳೆ ಸಲಹೆಗಳೆಂದರೆ ಅಲರ್ಜಿ; ರಾಹುಲ್ ಗಾಂಧಿ
ನವದೆಹಲಿ, ಏಪ್ರಿಲ್ 10: ಕೇಂದ್ರ ಸರ್ಕಾರದ ವಿಫಲ ನೀತಿ ನಿಯಮಗಳೇ ದೇಶದಲ್ಲಿ ಅಪಾಯಕಾರಿ ಕೊರೊನಾ ಎರಡನೇ ಅಲೆ ಆರಂಭವಾಗಲು ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರಿದ್ದು, ಸರ್ಕಾರದ ಈ ನಡೆಯಿಂದಲೇ ವಲಸಿಗರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆಗಳ ಅಭಾವವನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಲಸಿಕೆ ನೀಡುವ ವೇಗವನ್ನು ತ್ವರಿತಗೊಳಿಸಲು ಹಾಗೂ ಜನಸಾಮಾನ್ಯರ ಒಳಿತಿಗಾಗಿ, ದೇಶದ ಆರ್ಥಿಕತೆಗಾಗಿ ನಗದಾಗಿ ಹಣ ನೀಡುವಂತೆ ಕೇಂದ್ರಕ್ಕೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಕೊರೊನಾ ಲಸಿಕೆ ನೀಡುವ ಜೊತೆಗೆ ಜನರ ಕೈಯಲ್ಲಿ ಹಣವನ್ನೂ ನೀಡಬೇಕಿದೆ. ಇದು ಸಾಮಾನ್ಯ ಜನರ ಜೀವನ ನಿರ್ವಹಣೆಗೆ ಹಾಗೂ ದೇಶದ ಆರ್ಥಿಕತೆಗೆ ಅವಶ್ಯವಾಗಿದೆ ಎಂದು ಟ್ವೀಟ್ ಮಾಡಿದ್ದು, ಒಳ್ಳೆಯ ಸಲಹೆಗಳು ಈ ದುರಭಿಮಾನಿ ಸರ್ಕಾರಕ್ಕೆ ಅಲರ್ಜಿಯಾಗುತ್ತದೆ ಎಂದು ಟೀಕಿಸಿದ್ದಾರೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಪತ್ರ ಬರೆದಿದ್ದು, ಕೆಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆ ಅಭಾವ ಎದುರಾಗಿದೆ. ಹೀಗಾಗಿ ಕೇಂದ್ರ ತಕ್ಷಣವೇ ಹೊರದೇಶಗಳಿಗೆ ಲಸಿಕೆ ರಫ್ತು ಮಾಡುವುದನ್ನು ನಿಲ್ಲಿಸಬೇಕು. ದೇಶದಲ್ಲಿ ಅವಶ್ಯಕತೆ ಇದ್ದವರಿಗೆ ಲಸಿಕೆ ನೀಡಬೇಕು ಎಂದು ಉಲ್ಲೇಖಿಸಿದ್ದರು.
ಶನಿವಾರ ರಾಜ್ಯಗಳಲ್ಲಿನ ಕೊರೊನಾ ಸ್ಥಿತಿಗತಿ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಭೆ ನಡೆಸಿ ಸೋಂಕಿತರನ್ನು ಪತ್ತೆ ಹಚ್ಚುವ, ಪರೀಕ್ಷೆ ನಡೆಸುವ ಹಾಗೂ ಲಸಿಕೆ ನೀಡುವ ಕೆಲಸ ತ್ವರಿತವಾಗಿ ಮಾಡಬೇಕೆಂದು ಸೂಚಿಸಿದ್ದಾರೆ.












Click it and Unblock the Notifications