ಕೋವಿಡ್ ಹೆಚ್ಚಳ: ಆರು ರಾಜ್ಯಗಳಿಗೆ ತಂಡ ಕಳುಹಿಸಿದ ಕೇಂದ್ರ ಸರ್ಕಾರ
ನವದೆಹಲಿ, ಜು.10: ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸ್ಗಢ ಮತ್ತು ಮಣಿಪುರಕ್ಕೆ ಕೇಂದ್ರ ಸರ್ಕಾರ ತಂಡಗಳನ್ನು ಕಳುಹಿಸಿದೆ.
ಈ ಕೇಂದ್ರ ಸರ್ಕಾರದ ತಂಡವು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಈ ಕೊರೊನಾ ಸಂದರ್ಭದಲ್ಲಿ ಈ ಅಧಿಕಾರಿಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಬಳಿಕ ನಡೆಯುತ್ತಿರುವ ಕೊರೊನಾ ನಿಯಂತ್ರಣ ಕಾರ್ಯಗಳನ್ನು ಬಲಪಡಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಎರಡು ಸದಸ್ಯರ ಉನ್ನತ ಮಟ್ಟದ ತಂಡಗಳು ವೈದ್ಯ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿರುತ್ತವೆ. "ಉದ್ದೇಶಿತ ಕೋವಿಡ್ ನಿರ್ವಹಣೆಗಾಗಿ ಮತ್ತು ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಪ್ರಯತ್ನಗಳಲ್ಲಿ ಈ ತಂಡಗಳು ಅಧಿಕಾರಿಗಳಿಗೆ ಬೆಂಬಲ ನೀಡಲಿವೆ," ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಡಿಡಿಜಿ ಮತ್ತು ಇಎಂಆರ್ ನಿರ್ದೇಶಕ ಡಾ. ಎಲ್. ಸ್ವಸ್ಥಾರಣ್ ಮಣಿಪುರದ ತಂಡದ ನೇತೃತ್ವ ವಹಿಸಲಿದ್ದಾರೆ. ಎಐಐಹೆಚ್ ಮತ್ತು ಪಿಹೆಚ್ ಪ್ರೊಫೆಸರ್ ಡಾ. ಸಂಜಯ್ ಸಾಧುಖಾನ್ ಅರುಣಾಚಲ ಪ್ರದೇಶದ ತಂಡದ ನೇತೃತ್ವ ವಹಿಸಲಿದ್ದಾರೆ.
ಎಐಐಹೆಚ್ ಮತ್ತು ಪಿಹೆಚ್ ಪ್ರೊಫೆಸರ್, ಡಾ. ಆರ್.ಎನ್. ಸಿನ್ಹಾ ದಿರ್ ತ್ರಿಪುರಾದ ತಂಡದ ನೇತೃತ್ವ ವಹಿಸಲಿದ್ದಾರೆ. ಸಾರ್ವಜನಿಕ ಆರೋಗ್ಯ ತಜ್ಞ ಡಾ. ರುಚಿ ಜೈನ್ ಕೇರಳದ ತಂಡದ ನೇತೃತ್ವ ವಹಿಸಲಿದ್ದಾರೆ.
ಸಾರ್ವಜನಿಕ ಆರೋಗ್ಯ ತಜ್ಞ ಡಾ. ಎ ದಾನ್, ಒಡಿಶಾದ ತಂಡದ ನೇತೃತ್ವ ವಹಿಸಲಿದ್ದಾರೆ. ರಾಯಪುರ ಏಮ್ಸ್ನ ಸಹಾಯಕ ಪ್ರಾಧ್ಯಾಪಕ ಡಾ. ದಿಬಾಕರ್ ಸಾಹು, ಛತ್ತೀಸ್ಗಢ ತಂಡದ ನೇತೃತ್ವ ವಹಿಸಲಿದ್ದಾರೆ.
ಕೋವಿಡ್ ನಿರ್ವಹಣೆ, ಕೋವಿಡ್ ಪರೀಕ್ಷೆ, ಕಂಟೈನ್ಮೆಂಟ್ ಝೋನ್ ಮೊದಲಾದ ವಿಚಾರಗಳನ್ನು ತಂಡಗಳು ಮೇಲ್ವಿಚಾರಣೆ ಮಾಡಲಿದೆ. ಹಾಗೆಯೇ ಕೋವಿಡ್ ಸಂದರ್ಭದಲ್ಲಿನ ಸಾಮಾಜಿಕ ನಡವಳಿಕೆ, ಲಸಿಕೆ ಪ್ರಗತಿಯ ಬಗ್ಗೆ, ಆಸ್ಪತ್ರೆಯ ಹಾಸಿಗೆಗಳ ಲಭ್ಯತೆ, ಆಂಬುಲೆನ್ಸ್, ವೆಂಟಿಲೇಟರ್, ವೈದ್ಯಕೀಯ ಆಮ್ಲಜನಕ ಲಭ್ಯತೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕ್ರಮಗಳನ್ನು ಸೂಚಿಸುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications