ಕೊರೊನಾ: ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಿದ ಕೇಂದ್ರ ಸರ್ಕಾರ
ನವದೆಹಲಿ, ಏಪ್ರಿಲ್ 04: ದೇಶಾದ್ಯಂತ ಕೊರೊನಾ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರಗಳಿಗೆ ಕ್ರಮ ತೆಗೆದುಕೊಳ್ಳಲು ಅನುಕೂಲವಾಗುವಂತೆ ಅನುದಾನ ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ.
ಶುಕ್ರವಾರ ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ. ಕೊರೊನಾ ಹರಡದಂತೆ ತಡೆಯಲು ವ್ಯವಸ್ಥೆ ಮಾಡಿಕೊಳ್ಳಲು 11,092 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ. ಇದು ಮೊದಲ ಕಂತಿನಲ್ಲಿ ಬಿಡುಗಡೆ ಮಾಡುತ್ತಿರುವ ಹಣವಾಗಿದೆ.
ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಕೊರೊನಾ ಹರಡದಂತೆ ತಡೆಯಲು ಕೇಂದ್ರ ಹಣಕಾಸಿನ ನೆರವನ್ನು ನೀಡಬೇಕು ಎಂದು ಮನವಿ ಮಾಡಿದ್ದವು. ಎಸ್ಡಿಆರ್ಎಂಎಫ್ ಅಡಿ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ.

State Disaster Risk Management Fund (SDRMF) ಅನ್ವಯ ಎಲ್ಲಾ ರಾಜ್ಯಗಳಿಗೆ ಅನುದಾನ ಸಿಗಲಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಅನುದಾನ ನೀಡಲಾಗುತ್ತಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಕರ್ನಾಟಕಕ್ಕೆ 395 ಕೋಟಿ ಅನುದಾನ ಸಿಗಲಿದೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು. ಶುಕ್ರವಾರ 2020-21ನೇ ಸಾಲಿನ ಎಸ್ಡಿಆರ್ಎಂಎಫ್ ನಿಧಿಯ ಮೊದಲ ಕಂತನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ.
ಹೆಚ್ಚು ಕೊರೊನಾ ಪ್ರಕರಣ ದಾಖಲಾದ ಮಹಾರಾಷ್ಟ್ರಕ್ಕೆ 1611 ಕೋಟಿ, ಕೇರಳ ರಾಜ್ಯಕ್ಕೆ 157 ಕೋಟಿ, ಉತ್ತರ ಪ್ರದೇಶ ರಾಜ್ಯಕ್ಕೆ 966 ಕೋಟಿ, ಒಡಿಶಾಕ್ಕೆ 802 ಕೋಟಿ, ರಾಜಸ್ಥಾನಕ್ಕೆ 740 ಕೋಟಿ ಅನುದಾನ ಸಿಕ್ಕಿದೆ.
ಗುಜರಾತ್ ರಾಜ್ಯಕ್ಕೆ 662 ಕೋಟಿ, ಮಧ್ಯಪ್ರದೇಶಕ್ಕೆ 910 ಕೋಟಿ, ತಮಿಳುನಾಡಿಗೆ 510 ಕೋಟಿ, ಕರ್ನಾಟಕಕ್ಕೆ 395 ಕೋಟಿ, ಪಶ್ಚಿಮ ಬಂಗಾಳಕ್ಕೆ 505 ಕೋಟಿ, ಆಂಧ್ರಪ್ರದೇಶಕ್ಕೆ 555 ಕೋಟಿ ಅನುದಾನ ಹಂಚಿಕೆಯಾಗಿದೆ.
ಗೃಹ ಸಚಿವಾಲಯ ಕೊರೊನಾವನ್ನು ರಾಷ್ಟ್ರೀಯ ವಿಪತ್ತು ಎಂದು ಮಾರ್ಚ್ 14ರಂದು ಘೋಷಣೆ ಮಾಡಿತ್ತು. ರೋಗಿಗಳಿಗೆ ತುರ್ತು ವ್ಯವಸ್ಥೆಗಳನ್ನು ಮಾಡಲು, ಕ್ವಾರಂಟೈನ್ ವ್ಯವಸ್ಥೆಗಳನ್ನು ಮಾಡುವುದಕ್ಕಾಗಿ ಈಗ ಎಲ್ಲಾ ರಾಜ್ಯಗಳಿಗೆ ಅನುದಾನವನ್ನು ನೀಡಿದೆ.












Click it and Unblock the Notifications