ಕೇಂದ್ರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ; ಮಲ್ಲಿಕಾರ್ಜುನ ಖರ್ಗೆ ಆರೋಪ
ನವದೆಹಲಿ, ಜುಲೈ 27: ಪೆಗಾಸಸ್ ಬೇಹುಗಾರಿಕೆ ಪ್ರಕರಣ ಸಂಬಂಧ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, "ದೇಶದ ಆಡಳಿತದಲ್ಲಿ ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದೆ. ಈ ಪ್ರಕರಣವನ್ನು ಪ್ರಜಾಪ್ರಭುತ್ವ ಮಾರ್ಗದಲ್ಲಿ ಪರಿಹರಿಸಲು ಕೇಂದ್ರ ಸಿದ್ಧವಿಲ್ಲ" ಎಂದು ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, "ಕೇಂದ್ರ ಸರ್ಕಾರವೇ ಪೆಗಾಸಸ್ ಬೇಹುಗಾರಿಕೆಗೆ ಅವಕಾಶ ನೀಡಿದಂತಿದೆ. ನ್ಯಾಯಾಧೀಶರ, ಸೇನಾಧಿಕಾರಿಗಳ, ಪತ್ರಕರ್ತರ, ವಿರೋಧ ಪಕ್ಷಗಳ ನಾಯಕರ ಮೇಲೆ ಕಣ್ಗಾವಲಿಗೆ ಅವಕಾಶ ನೀಡಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಕಣ್ಗಾವಲು ನಡೆಸಲು ಕೇಂದ್ರದ ಅನುಮತಿ ಬೇಕು ಎಂದು ಐಟಿ ಕಾಯ್ದೆ ಹೇಳುತ್ತದೆ. ಕೇಂದ್ರವೇ ಇದಕ್ಕೆ ಅನುಮತಿ ನೀಡಿದಂತೆ ಕಾಣುತ್ತಿದೆ. ವಿಶ್ಬದ ಯಾವ ಪ್ರಜಾಪ್ರಭುತ್ವವೂ ಹೀಗೆ ಮಾಡಲು ಸಾಧ್ಯವಿಲ್ಲ. ಈ ಕುರಿತ ಚರ್ಚೆಗೆ ವಿರೋಧ ಪಕ್ಷ ಸಿದ್ಧವಿದೆ. ಕೇಂದ್ರ ಸರ್ವಪಕ್ಷ ಸಭೆ ಕರೆಯಬೇಕು" ಎಂದು ಆಗ್ರಹಿಸಿದ್ದಾರೆ.

"ದೇಶದಲ್ಲಿ ಸರ್ವಾಧಿಕಾರ, ನಿರಂಕುಶ ಆಡಳಿತವಿದೆ. ಈ ಪ್ರಕರಣವನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಿರ್ವಹಿಸಲು ಮೋದಿ ಸಿದ್ಧರಿಲ್ಲ. ಈ ವಿಷಯದ ಕುರಿತು ನಾವೆಲ್ಲರೂ ಹೋರಾಟ ಮುಂದುವರೆಸುತ್ತೇವೆ" ಎಂದು ಹೇಳಿದರು.
ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶ ಬಳಸಿಕೊಂಡು ಭಾರತದ ಪ್ರಮುಖ ಪತ್ರಕರ್ತರು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ಕಣ್ಣಿಟ್ಟಿರುವುದು ಬೆಳಕಿಗೆ ಬಂದಿರುವುದಾಗಿ ಈಚೆಗೆ "ದಿ ವೈರ್" ವರದಿ ಮಾಡಿತ್ತು.
ಕೆಲವು ಸಚಿವರು, ವಿರೋಧ ಪಕ್ಷಗಳ ನಾಯಕರು, ಕಾನೂನು ಕ್ಷೇತ್ರದವರು ಉದ್ಯಮಿಗಳು, ಅಧಿಕಾರಿಗಳು, ವಿಜ್ಞಾನಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿ ಸುಮಾರು 300 ಭಾರತೀಯರ ಮೊಬೈಲ್ಗಳು ಹ್ಯಾಕ್ ಆಗಿವೆ ಎಂದು ವರದಿ ತಿಳಿಸಿದೆ. ಫೋನ್ಗಳಲ್ಲಿ ನಡೆಸಿದ ವಿಧಿ ವಿಜ್ಞಾನ ಪರೀಕ್ಷೆಗಳು ಪೆಗಾಸಸ್ ತಂತ್ರಾಂಶ ಬಳಕೆಯನ್ನು ಬಹಿರಂಗಪಡಿಸಿತ್ತು.
ಇಸ್ರೇಲಿ ಸೈಬರ್-ಆರ್ಮ್ಸ್ ಸಂಸ್ಥೆ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ಲಿಮಿಟೆಡ್ ತಯಾರಿಸಿದ ಪೆಗಾಸಸ್ ಸಾಫ್ಟ್ವೇರ್ ಅತ್ಯಂತ ಸುಧಾರಿತವಾಗಿದ್ದು, ಮಾಲೀಕರೊಂದಿಗೆ ಯಾವುದೇ ಸಂವಹನವಿಲ್ಲದೆ ಮೊಬೈಲ್ ಫೋನ್ ಹ್ಯಾಕ್ ಮಾಡಬಲ್ಲ ತಂತ್ರಾಂಶ ಆಗಿದೆ.












Click it and Unblock the Notifications