ಮಾ.22ರವರೆಗೂ ಮಳೆ ಮುನ್ಸೂಚನೆ; ಮಧ್ಯ ಭಾರತದಲ್ಲಿ ತಾಪಮಾನ ಇಳಿಕೆ
ನವದೆಹಲಿ, ಮಾರ್ಚ್ 18: ದೇಶದಲ್ಲಿ ಬಿಸಿಲಿನ ಝಳ ಏರುತ್ತಿದೆ. ಈ ನಡುವೆ ತೀವ್ರ ಸುಳಿಗಾಳಿ ಪ್ರಭಾವದಿಂದಾಗಿ ಗುರುವಾರ ಈಶಾನ್ಯ ರಾಜ್ಯಗಳಲ್ಲಿ ಗುಡುಗು ಮಿಂಚುಸಹಿತ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿಯೂ ಮಳೆಯಾಗುವುದಾಗಿ ಸೂಚನೆ ನೀಡಿದೆ.
ಮಧ್ಯ ಭಾರತದಲ್ಲಿ ಮುಂದಿನ ಐದು ದಿನಗಳವರೆಗೆ ತಾಪಮಾನ ಕಡಿಮೆಯಾಗಲಿದ್ದು, ಗುಡುಗು ಮಿಂಚು ಸಹಿತ ಮಳೆಯಾಗುವುದಾಗಿ ತಿಳಿಸಿದೆ. ಉತ್ತರ ಪಾಕಿಸ್ತಾನದಲ್ಲಿನ ಸುಳಿಗಾಳಿ ಪ್ರಭಾವದಿಂದಾಗಿ ದೇಶದ ಕೆಲವೆಡೆ ಚದುರಿದ ಮಳೆಯಾಗುವುದಾಗಿ ಇಲಾಖೆ ತಿಳಿಸಿದೆ. ಮುಂದೆ ಓದಿ...

ಮಧ್ಯ ಭಾರತದಲ್ಲಿ ಐದು ದಿನ ಮಳೆ ಮುಂದುವರಿಕೆ
ಮಧ್ಯ ಭಾರತದಲ್ಲಿ ತಾಪಮಾನ ಇಳಿಕೆಯಾಗಲಿದ್ದು, ಮುಂದಿನ ಐದು ದಿನಗಳವರೆಗೂ ಮಳೆಯಾಗಲಿದೆ. ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಇಳಿಯಲಿದೆ ಎಂದು ಮುನ್ಸೂಚನೆ ನೀಡಿದೆ. ಇದರೊಂದಿಗೆ ಜಮ್ಮು ಕಾಶ್ಮೀರ, ಲಡಾಖ್, ಮುಝಾಫರ್ ಬಾದ್ ಹಾಗೂ ಉತ್ತರಾಖಂಡ ಒಳಗೊಂಡಂತೆ ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಮಳೆಯಾಗುವುದು ಎಂದು ತಿಳಿಸಿದೆ. ಉತ್ತರಾಖಂಡದಲ್ಲಿ ಹಿಮಪಾತದ ಸೂಚನೆ ನೀಡಿದೆ.

ಮಾ.21ರಂದು ಈ ಪ್ರದೇಶಗಳಲ್ಲಿ ಮಳೆ
ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನದಲ್ಲಿ ಮಳೆಯಾಗಲಿದ್ದು, ಜಮ್ಮು ಕಾಶ್ಮೀರ, ಲಡಾಖ್, ಉತ್ತರ ಪ್ರದೇಶ, ಕೊಂಕಣ ಗೋವಾ, ಆಂಧ್ರ ಪ್ರದೇಶ, ತಮಿಳುನಾಡು, ಪುದುಚೆರಿ, ಕೇರಳದಲ್ಲಿ ಮಾರ್ಚ್ 21ರಂದು ಚದುರಿದ ಮಳೆಯಾಗುವುದಾಗಿ ತಿಳಿಸಿದೆ.

ರಾಜ್ಯದಲ್ಲಿಯೂ ಮಳೆ ಸಾಧ್ಯತೆ
ಇಂದಿನಿಂದ ಮಾರ್ಚ್ 21ರವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬೀದರ್ ಮತ್ತು ಕಲಬುರಗಿ, ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಯಲ್ಲಿ ಮಳೆಯಾಗುವುದಾಗಿ ತಿಳಿದುಬಂದಿದೆ. ಕರಾವಳಿಯಲ್ಲಿ ತೀವ್ರಗಾಳಿ ಪ್ರಭಾವ ಹೆಚ್ಚಿರಲಿದೆ ಎಂದು ತಿಳಿಸಿದೆ.
ಕೆಲ ದಿನಗಳಲ್ಲೇ ಕರಾವಳಿ ಪ್ರದೇಶಗಳಲ್ಲಿ ಬಿಸಿಲು ಏರಲಿದ್ದು, ಪಶ್ಚಿಮ ಸೌರಾಷ್ಟ್ರ, ಕಚ್, ಕೊಂಕಣ್ ಹಾಗೂ ಗೋವಾದಂಥ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಬಿಸಿಗಾಳಿ ವಾತಾವರಣ ಆರಂಭವಾಗುವುದಾಗಿ ತಿಳಿದುಬಂದಿದೆ. ದೇಶದ ಇನ್ನುಳಿದ ಕಡೆಗಳಲ್ಲಿ ಒಣ ಹವೆ ಮುಂದುವರೆಯಲಿರುವುದಾಗಿ ಇಲಾಖೆ ಮಾಹಿತಿ ನೀಡಿದೆ .

ಹಿಮಾಚಲ ಪ್ರದೇಶದಲ್ಲಿ ಮಾರ್ಚ್ 22ರವರೆಗೂ ಮಳೆ
ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್- ಬಾಲ್ಟಿಸ್ತಾನ, ಮುಝಾಫರ್ಬಾದ್ನ ಹಲವು ಕಡೆಗಳಲ್ಲಿ ಮಾರ್ಚ್ 22ರವರೆಗೂ ಭಾರೀ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.












Click it and Unblock the Notifications