ಕೋವಿಡ್ನಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ಸಾಧ್ಯವಿಲ್ಲ; ಕೇಂದ್ರ
ನವದೆಹಲಿ, ಜೂನ್ 20; ಕೋವಿಡ್ ಸೋಂಕಿನಿಂದ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಅಫಿಡೆವಿಟ್ ಸಲ್ಲಿಕೆ ಮಾಡಿದೆ.
ಪರಿಹಾರ ನೀಡುವುದು ನೈಸರ್ಗಿಕ ವಿಪತ್ತುಗಳಿಗೆ ಮಾತ್ರ ಅನ್ವಯವಾಗುತ್ತದೆ. ಕೋವಿಡ್ಗೆ ಪರಿಹಾರ ನೀಡಿ ಉಳಿದ ಖಾಯಿಲೆಯಿಂದ ಮೃತಪಟ್ಟವರಿಗೆ ನೀಡದಿದ್ದರೆ ಅದು ಅನ್ಯಾಯವಾಗುತ್ತದೆ ಎಂದು 183 ಪುಟಗಳ ಅಫಿಡವಿಟ್ನಲ್ಲಿ ಕೇಂದ್ರ ಹೇಳಿದೆ.
ಕೋವಿಡ್ನಿಂದಾಗಿ ಇದುವರೆಗೂ 3.85 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಕೋವಿಡ್ ಕಾಲದಲ್ಲಿ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ರಾಜ್ಯಗಳು ಎಲ್ಲರಿಗೂ ಪರಿಹಾರ ವಿತರಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದು ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ 4 ಲಕ್ಷ ಪರಿಹಾರ ನೀಡಲು ಸೂಚನೆ ನೀಡಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.
ನೈಸರ್ಗಿಕ ವಿಕೋಪ ಕಾನೂನಿನ ಕುರಿತು ವಿವರಣೆ ನೀಡಿರುವ ಕೇಂದ್ರ ಭೂಕಂಪ ಅಥವಾ ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಮಾತ್ರ ಪರಿಹಾರ ಅನ್ವಯವಾಗುತ್ತದೆ ಎಂದು ಹೇಳಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಅಡಿಯಲ್ಲಿ ಬರಲಿದ್ದು, ಇದು ಪರಿಹಾರಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿದೆ.
ಕೋವಿಡ್ ಪರಿಸ್ಥಿತಿಯಲ್ಲಿ ಹೆಚ್ಚಿನ ಆರೋಗ್ಯ ವೆಚ್ಚಗಳು ಮತ್ತು ಕಡಿಮೆ ತೆರಿಗೆ ಆದಾಯದಿಂದಾಗಿ ರಾಜ್ಯಗಳು ಕೋವಿಡ್ನಿಂದ ಮೃತಪ್ಟವರ ಕುಟುಂಬಕ್ಕೆ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಅಫಿಡೆವಿಟ್ನಲ್ಲಿ ವಿವರಣೆ ನೀಡಿದೆ.
ಮೃತಪಟ್ಟ ವ್ಯಕ್ತಿಗಳ ಮರಣ ಪ್ರಮಾಣ ಪತ್ರದಲ್ಲಿ ಕೋವಿಡ್ನಿಂದ ಸಾವು ಎಂದು ಉಲ್ಲೇಖಿಸುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಇದನ್ನು ಪಾಲಿಸಲು ವಿಫಲವಾದ ವೈದ್ಯರಿಗೆ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಹೇಳಿದೆ. ಸೋಮವಾರ ಅರ್ಜಿಯ ವಿಚಾರಣೆ ಪುನಃ ನಡೆಯಲಿದೆ.












Click it and Unblock the Notifications