ಮೋದಿ ವಿರುದ್ಧ ಸೆಣೆಸುವ ಮೈತ್ರಿಕೂಟಕ್ಕೆ ಮುಂದಾಳು ಯಾರು?
ನರೇಂದ್ರ ಮೋದಿ-ಬಿಜೆಪಿಯ ಗೆಲುವಿನ ಓಟ ತಡೆಯುವುದಕ್ಕೆ ದೊಡ್ಡ ಮೈತ್ರಿಕೂಟವೊಂದನ್ನು ರಾಷ್ಟ್ರೀಯ ಮಟ್ಟದಲ್ಲಿ ರಚನೆ ಮಾಡಲು ವಿಪಕ್ಷಗಳು ಮುಂದಾಗಿವೆ. ಈ ಮೈತ್ರಿಕೂಟದ ನಾಯಕರು ಯಾರು ಆಗಬಹುದು ಎಂಬ ವಿಶ್ಲೇಷಣೆ ಇಲ್ಲಿದೆ
ನವದೆಹಲಿ, ಮಾರ್ಚ್ 18: ಉತ್ತರಪ್ರದೇಶದಲ್ಲಿ ಸಿಡಿಲಬ್ಬರದ ಜಯ ದಾಖಲಿಸಿದ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಡಿದಾಡಬೇಕು ಅಂದರೆ ಒಗ್ಗಟ್ಟಾಗಲೇ ಬೇಕು ಎಂದು ವಿಪಕ್ಷಗಳು ಮನಗಂಡಿವೆ. ಆ ಕಾರಣಕ್ಕೆ ದೊಡ್ಡ ಮೈತ್ರಿಕೂಟವೊಂದರ ರಚನೆಗೆ ಮುಂದಾಗಿದ್ದು, 2019ರ ಲೋಕಸಭೆ ಚುನಾವಣೆಗೆ ಮೋದಿ -ಅಮಿತ್ ಶಾ ನೇತೃತ್ವದ ಬಿಜೆಪಿ ವಿರುದ್ಧದ ಸೆಣೆಸಾಟಕ್ಕೆ ಅಣಿಯಾಗುತ್ತಿವೆ.
ಉತ್ತರಪ್ರದೇಶದ ಚುನಾವಣೆ ನಂತರ ಇಂಥದ್ದೊಂದು ತೀರ್ಮಾನಕ್ಕೆ ಬಂದಿರುವ ವಿಪಕ್ಷಗಳು ಮೋದಿಯ ಗೆಲುವಿನ ಓಟ ತಡೆಯಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಆದರೆ ಎಲ್ಲ ಪಕ್ಷಗಳು ಒಮ್ಮತದ ಅಭ್ಯರ್ಥಿಯ ಆಯ್ಕೆ ಮಾಡಬೇಕಿದೆ. ಒಟ್ಟಿನಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಸುನಾಮಿಯನ್ನು ತಡೆಯಲು ವಿಪಕ್ಷಗಳೆಲ್ಲ ಒಟ್ಟು ಸೇರಲು ನಿರ್ಧರಿಸಿರುವುದಂತೂ ಹೌದು.[ನರೇಂದ್ರ ಮೋದಿ ಅಶ್ವಮೇಧ ಯಾಗ ವಿಫಲಗೊಳಿಸಲು ಮೆಗಾಪ್ಲಾನ್]
ಅಂದಹಾಗೆ, ಈ ದೊಡ್ಡ ಮೈತ್ರಿಕೂಟ ರಚನೆಯಾದರೆ ಒಮ್ಮತದ ಅಭ್ಯರ್ಥಿ ಎಂದು ಯಾರನ್ನು ಘೋಷಿಸಬಹುದು? ಯಾರು ಇದರ ಮುಂದಾಳತ್ವ ವಹಿಸಬಹುದು ಎಂಬುದರ ಸಾಧ್ಯತೆ ಬಗ್ಗೆ ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಒಬ್ಬರಿಗಿಂತ ಒಬ್ಬರು ಅಧಿಕಾರದ ರುಚಿ ಕಂಡವರು. ಸಾಂದರ್ಭಿಕವಾಗಿ ಒಟ್ಟಾಗಿದ್ದಾರೆ ವಿನಾ ಗಾದಿ ಮೇಲೆ ಕೂರಲು ಹವಣಿಸುವವರೇ ಹೆಚ್ಚಾಗಿದ್ದಾರೆ. ಇಂಥ ಗುಂಪಿನ ನಾಯಕತ್ವ ಯಾರು ವಹಿಸಬಹುದು?
ನಿತೀಶ್ ಕುಮಾರ್
ಯಾವುದೇ ದೊಡ್ಡ ಮೈತ್ರಿಕೂಟ ರಚನೆಯಾದರೂ ಅದರ ನೇತೃತ್ವವನ್ನು ಜೆಡಿಯು ವಹಿಸಬೇಕು ಎಂದು ಈಗಾಗಲೇ ನಿತೀಶ್ ಕುಮಾರ್ ಹೇಳಿಬಿಟ್ಟಿದ್ದಾರೆ. ಇದರರ್ಥ ನಾಯಕತ್ವ ವಹಿಸಿಕೊಳ್ಳಲು ಹಾಗೂ ಪ್ರಧಾನಿ ಅಭ್ಯರ್ಥಿ ರೇಸಿನಲ್ಲಿ ಮೊದಲಿಗರು ಅವರು. ಆರ್ ಜೆಡಿ ಜತೆಗೆ ಮೈತ್ರಿ ಮಾಡಿಕೊಂಡ ನಿತೀಶ್, ಬಿಹಾರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಹುಲ್ ಗಾಂಧಿ
ಕಾಂಗ್ರೆಸ್ ಅನ್ನೋ ಪುರಾತನ ಪಕ್ಷದ ಮುಂದಾಳು ಎಂಬುದು ಬಿಟ್ಟರೆ ಈ ಯುವರಾಜನ ಕಿರೀಟದಲ್ಲಿ ಯಾವ ಸಾಧನೆಯ ಗರಿಯೂ ಇಲ್ಲ. ರಾಹುಲ್ ಅವರನ್ನು ಮೈತ್ರಿಕೂಟದ ನಾಯಕನಾಗಿ ಘೋಷಿಸಬೇಕು ಎಂದು ಕಾಂಗ್ರೆಸ್ ಹೇಳಬಹುದು. ಆದರೆ ಚುನಾವಣೆ ಗೆಲುವಿನ ಇತಿಹಾಸ ಇಲ್ಲದ, ಯಾವ ಸಾಧನೆಯೂ ಬೆನ್ನಿಗಿಲ್ಲದ ರಾಹುಲ್ ಗಾಂಧಿಯನ್ನು ಉಳಿದ ಪಕ್ಷದವರು ಒಪ್ಪುವುದು ಕಷ್ಟ.
ಅರವಿಂದ್ ಕೇಜ್ರಿವಾಲ್
ಇದು ತುಂಬ ಕಡಿಮೆ ಸಾಧ್ಯತೆಯ ಆಯ್ಕೆ. ರಾಷ್ಟ್ರೀಯ ನಾಯಕ ಎಂದು ಬಿಂಬಿಸಿಕೊಳ್ಳಲು ಅರವಿಂದ್ ಬಹಳ ಪ್ರಯತ್ನ ಪಡುತ್ತಿದ್ದಾರೆ. ಆದರೆ ದೆಹಲಿಯ ವರ್ಚಸ್ಸನ್ನು ಪಂಜಾಬ್ ಹಾಗೂ ಗೋವಾದದಲ್ಲೇ ಮುಂದುವರಿಸಲು ಅವರಿಂದ ಆಗಲಿಲ್ಲ. ಆದರೆ ಕೇಜ್ರಿವಾಲ್ ಗೆ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಸೇರಿದಂತೆ ಎಡಪಕ್ಷಗಳ ನಾಯಕರ ಜತೆಗೆ ಒಮ್ದು ಸೌಹಾರ್ದಯುತ ಬಂಧ ಇದೆ.
ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಲದ ಮುಖ್ಯಮಂತ್ರಿ. ಮನಸ್ಸಿನಲ್ಲಿರುವ ವಿಚಾರವನ್ನು ನೇರಾನೇರ ಹೇಳುವ ಛಾತಿ ಇರುವ ಜನ ನಾಯಕಿ. ಆಕೆಗೆ ಕೇಂದ್ರದಲ್ಲಿ ಸಚಿವೆ ಆಗಿದ್ದ ಅನುಭವ ಇದೆ. 2019ರಲ್ಲಿ ಪಶ್ಚಿಮ ಬಂಗಾಲದಲ್ಲಿ ದೊಡ್ಡ ಮಟ್ಟದ ಜಯವನ್ನೂ ಕಾಣುತ್ತಾರೆ. ಮೈತ್ರಿಕೂಟದ ನಾಯಕಿ ಆಗುವ ಸಾಧ್ಯತೆ ಕೂಡ ಇದೆ. ಆದರೆ ಆಕೆಯ ವರ್ಚಸ್ಸು ಪಶ್ಚಿಮ ಬಂಗಾಲಕ್ಕೆ ಮಾತ್ರ ಸೀಮಿತವಾದಂತೆ ಗೋಚರಿಸುತ್ತದೆ. ಈ ಅಂಶ ಆಕೆ ಪಾಲಿಗೆ ಮಿತಿಯಾಗಬಹುದು.
ನವೀನ್ ಪಟ್ನಾಯಕ್
ಒಡಿಶಾದಲ್ಲಿ ಮೂರು ಅವಧಿಗೆ ಮುಖ್ಯಮಂತ್ರಿ ಆಗಿರುವವರು. ವಿವಾದದಿಂದ ಹೊರತಾದ ಮತ್ತು ಎಲ್ಲರೂ ಒಪ್ಪಬಹುದಾದ ನಾಯಕ ನವೀನ್ ಪಟ್ನಾಯಕ್. ಇತ್ತೀಚಿನ ಸ್ಥಳೀಯ ಚುನಾವಣೆಗಳ ಹಿನ್ನಡೆಯಿಂದ ಆಚೆ ಬರಬೇಕಿದೆ. ಆ ಮೂಲಕ ಮೋದಿಯನ್ನು ತಡೆಯಲು ತಾವು ಶಕ್ತ ಎಂಬುದನ್ನು ರುಜುವಾತು ಮಾಡಬೇಕಿದೆ.
ಮಾಯಾವತಿ
ನೇತೃತ್ವ ವಹಿಸಲು ತುಂಬ ಉತ್ಸುಕರಾಗಿರುವ ಅಭ್ಯರ್ಥಿ ಮಾಯಾವತಿ. ಆದರೆ ಈಚಿನ ಉತ್ತರಪ್ರದೇಶ ಚುನಾವಣೆ ಸೋಲು ಆಕೆಯ ಬಲ ಕುಗ್ಗಿಸಿದೆ. ಆದರೂ ಉತ್ತರಪ್ರದೇಶದಲ್ಲಿ ಮಾಯಾವತಿ ಅವರ ಪಕ್ಷಕ್ಕೆ ಶೇ 22ರಷ್ಟು ಮತ ಬಂದಿದೆ ಆದ್ದರಿಂದ ಅವರು ನೇತೃತ್ವ ವಹಿಸುವ ಸಾಧ್ಯತೆ ಈಗಲೂ ಇದೆ.
ಮುಲಾಯಂ ಸಿಂಗ್ ಯಾದವ್
ಯಾವಾಗ ಎಲ್ಲವೂ ವಿಫಲವಾಗುತ್ತದೋ ಆಗ ಮುಲಾಯಂ ಸಿಂಗ್ ಯಾದವ್ ಚಿತ್ರಣದೊಳಗೆ ಬರುತ್ತಾರೆ. ಎಲ್ಲರೂ ಒಪ್ಪಿಗೆ ಪಡೆದ ಅಭ್ಯರ್ಥಿಯಾಗುತ್ತಾರೆ. ಈಗ ಏನು ನಡೆಯುತ್ತಿದೆಯೋ ಅವೆಲ್ಲವೂ ಮುಲಾಯಂಗೆ ವಿರುದ್ಧವಾಗಿಯೇ ಇದೆ. ಕುಟುಂಬ ಹಾಗೂ ರಾಜಕಾರಣ ಯಾವುದೂ ಅವರಿಗೆ ಪೂರಕವಾಗಿಲ್ಲ. ಆದರೆ ಮುಲಾಯಂ ಪುಟಿದೆದ್ದ ಉದಾಹರಣೆಗಳಿವೆ.