ತೆಲಂಗಾಣ ಹೋರಾಟ ಅಂತ್ಯ: ಹೊಸ ಹೋರಾಟಕ್ಕೆ ಚಿರು ಸಜ್ಜು
ನವದೆಹಲಿ, ಅ.4: ಕೆಂದ್ರ ಸಚಿವ ಸಂಪುಟ ಪ್ರತ್ಯೇಕ ತೆಲಂಗಾಣ ರಾಜ್ಯದ ರಚನೆಗೆ ಗುರುವಾರ ಅನುಮೋದನೆ ನೀಡಿದೆ. ಇದರಿಂದ 29ನೇ ರಾಜ್ಯವಾಗಿ ತೆಲಂಗಾಣ ರಚನೆ ಹಾದಿ ಸುಗಮವಾಗಿದೆ. ಈ ಮಧ್ಯೆ, ತೆಲಂಗಾನಕ್ಕೆ ತಲೆದೂಗದ ಖ್ಯಾತ ನಟ, ಸಚಿವ ಚಿರಂಜೀವಿ ಸೇರಿದಂತೆ ಮೂವರು ಕೇಂದ್ರ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ.
ಇದರೊಂದಿಗೆ 50 ವರ್ಷಗಳ ತೆಲಂಗಾಣ ಹೋರಾಟ ಅಂತ್ಯಗೊಂಡಿದ್ದು, ಹೊಸ ಹೋರಾಟಕ್ಕೆ ಚಿರು ಸಜ್ಜಾಗುತ್ತಿದ್ದಾರೆ. ಹೈದರಾಬಾದ್ ನಗರವು ನೂತನ ತೆಲಂಗಾಣ ರಾಜ್ಯಕ್ಕೂ 10 ವರ್ಷ ಕಾಲ ರಾಜಧಾನಿಯಾಗಲಿದೆ. ಆದರೆ ಇದನ್ನೆಲ್ಲಾ ವಿರೋಧಿಸಿ ಸೀಮಾಂಧ್ರದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ತಿರುಪತಿಗೆ ತೆರಳುವ ಬಸ್ಸುಗಳು ಸ್ಥಗಿತಗೊಂಡಿವೆ.

2004ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಯುಪಿಎ ಸರಕಾರ ಆರಂಭದಲ್ಲಿ ತೆಲಂಗಾಣಕ್ಕೆ ನೂತನ ರಾಜ್ಯದ ಸ್ಥಾನಮಾನ ನೀಡಲು ಒಪ್ಪಲಿಲ್ಲ. ಆದರೆ ವೈಎಸ್ಆರ್ ಕಾಂಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿಯ ಜನಪ್ರಿಯತೆ ಹಾಗೂ ತೆಲಂಗಾಣ ಪ್ರಾಂತ್ಯದಲ್ಲಿ ತೀವ್ರವಾಗಿ ಬೆಳೆದ ಪ್ರತ್ಯೇಕ ರಾಜ್ಯದ ಬೇಡಿಕೆಗಳಿಂದ ಕಾಂಗ್ರೆಸ್ ಅನಿವಾರ್ಯವಾಗಿ ಮನಸ್ಸು ಬದಲಾಯಿಸಿ, ತೆಲಂಗಾಣಕ್ಕೆ ಅಸ್ತು ಅಂದಿದೆ. ತೆಲಂಗಾಣ ಪ್ರಾಂತ್ಯದಲ್ಲಿ 17 ಲೋಕಸಭಾ ಹಾಗೂ 119 ವಿಧಾನಸಭಾ ಕ್ಷೇತ್ರಗಳಿವೆ. ಸೀಮಾಂಧ್ರದಲ್ಲಿ 25 ಲೋಕಸಭಾ ಹಾಗೂ 175 ವಿಧಾನಸಭಾ ಸ್ಥಾನಗಳಿವೆ.
ಕೇಂದ್ರ ಪ್ರವಾಸೋದ್ಯಮ ಸಚಿವ, ಆಂಧ್ರದ ಕರವಾಳಿ ಭಾಗದ ಚಿರಂಜೀವಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಕೆ ಸೂರ್ಯಪ್ರಕಾಶ ರೆಡ್ಡಿ ರಾಜೀನಾಮೆ ನೀಡಿದ್ದು, ಮಾನವ ಸಂಪನ್ಮೂಲ ಸಚಿವ ಪಲ್ಲಂರಾಜು ಸಹ ರಾಜೀನಾಮೆಗೆ ಮುಂದಾಗಿದ್ದಾರೆ. ಆದರೆ ಅವರ ರಾಜೀನಾಮೆ ಪಡೆಯಲು ಪ್ರಧಾನಿ ಮನಮೋಹನ ಸಿಂಗ್ ನಿರಾಕರಿಸಿದ್ದಾರೆ.
ಚಿರಂಜೀವಿ, ರೆಡ್ಡಿ ಮತ್ತು ಪಲ್ಲಂ ಸೀಮಾಂಧ್ರ ಪ್ರದೇಶಕ್ಕೆ ಸೇರಿದ ಸಂಸದರಾಗಿದ್ದು, ಸಂಯುಕ್ತ ಆಂಧ್ರ ವಿಭಜನೆಯನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದರು. ಸಂಪುಟ ಸಭೆಯಲ್ಲೂ ಅವರು ವಿರೋಧಿಸಿದ್ದರು. ಹೀಗಾಗಿ ತೆಲಂಗಾಣ ರಚನೆ ಖಂಡಿಸುವ ಸಲುವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೀಮಾಂಧ್ರ ಭಾಗದ ಇನ್ನಷ್ಟು ಕಾಂಗ್ರೆಸ್ ಶಾಸಕ-ಸಂಸದ ಸಚಿವರು ರಾಜೀನಾಮೆಗೆ ಮುಂದಾಗಬಹುದು ಎಂದೂ ಹೇಳಲಾಗಿದೆ.












Click it and Unblock the Notifications