Budget Session: '10 ವರ್ಷಗಳಲ್ಲಿ ಮೊದಲ ಬಾರಿಗೆ ವಿದೇಶಿ ಹಸ್ತಕ್ಷೇಪವಿಲ್ಲ' ವಿರೋಧ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ
ದೆಹಲಿ ಜನವರಿ 31: '10 ವರ್ಷಗಳಲ್ಲಿ ಮೊದಲ ಬಾರಿಗೆ ವಿದೇಶಿ ಹಸ್ತಕ್ಷೇಪವಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಇಂದು ಬಜೆಟ್ ಅಧಿವೇಶನಕ್ಕೆ ತೆರಳುವ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, "ನೀವು ಗಮನಿಸಿರಬಹುದು. ಬಹುಶಃ 10 ವರ್ಷಗಳಲ್ಲಿ ಮೊದಲ ಬಾರಿಗೆ ವಿದೇಶಿ ಹಸ್ತಕ್ಷೇಪ ಕಂಡುಬಂದಿಲ್ಲ. ಪ್ರತಿ ಬಜೆಟ್ ಅಧಿವೇಶನಕ್ಕೂ ಮುನ್ನ ನಮ್ಮ ದೇಶದಲ್ಲಿ ಅನೇಕ ಜನರು ಕಿಡಿಗಳನ್ನು ಹೊತ್ತಿಸುತ್ತಿರುವುದನ್ನು'' ಎಂದು ನಾನು ಗಮನಿಸಿದ್ದೇನೆ ಎಂದಿದ್ದಾರೆ.

ಬಜೆಟ್ ಅಧಿವೇಶನಕ್ಕೂ ಮುನ್ನ ತಮ್ಮ ಭಾಷಣವನ್ನು ಲಕ್ಷ್ಮಿ ದೇವಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಮಾತು ಪ್ರಾರಂಭಿಸಿದ ಪ್ರಧಾನಿ, ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತ ಎಂಬ ನಮ್ಮ ಗುರಿಯನ್ನು ಸಾಧಿಸುವಲ್ಲಿ ಈ ಬಜೆಟ್ ಅಧಿವೇಶನ ಹೊಸ ವಿಶ್ವಾಸ ಮತ್ತು ಶಕ್ತಿಯನ್ನು ತುಂಬುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಅವರು ಹೇಳಿದರು.
ನಮ್ಮ ದೇಶದಲ್ಲಿ ಶತಮಾನಗಳಿಂದ ಲಕ್ಷ್ಮಿ ದೇವಿಯನ್ನು ಸ್ಮರಿಸಲಾಗುತ್ತದೆ. ತಾಯಿ ಲಕ್ಷ್ಮಿ ನಮಗೆ ಯಶಸ್ಸು ಮತ್ತು ಬುದ್ಧಿವಂತಿಕೆಯನ್ನು ನೀಡುತ್ತಾಳೆ. ಆಕೆ ಸಮೃದ್ಧಿ ಮತ್ತು ಯೋಗಕ್ಷೇಮವನ್ನು ಸಹ ನೀಡುತ್ತಾಳೆ. ದೇಶದ ಪ್ರತಿಯೊಂದು ಬಡ ಮತ್ತು ಮಧ್ಯಮ ವರ್ಗದ ಸಮುದಾಯ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲಿ ಎಂದು ನಾನು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುತ್ತೇನೆ ಎಂದರು.
ಹೊಸ ವಿಶ್ವಾಸ ಮೂಡಿಸುವ ಬಜೆಟ್- ಪ್ರಧಾನಿ
''ಸ್ನೇಹಿತರೇ, ನಮ್ಮ ಗಣರಾಜ್ಯ 75 ವರ್ಷಗಳನ್ನು ಪೂರೈಸಿದೆ. ಇದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಬಹಳ ಹೆಮ್ಮೆಯ ವಿಷಯವಾಗಿದೆ. ದೇಶದ ಜನರು ನನಗೆ ಮೂರನೇ ಬಾರಿಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ. ಇದು ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಆಗಿದೆ. ಈ ಬಜೆಟ್ ಹೊಸ ವಿಶ್ವಾಸವನ್ನು ಮೂಡಿಸುತ್ತದೆ ಮತ್ತು ಹೊಸ ಶಕ್ತಿಯನ್ನು ನೀಡುತ್ತದೆ'' ಎಂದು ಬಜೆಟ್ ಆರಂಭಕ್ಕೂ ಮುನ್ನ ಮೋದಿ ಹೇಳಿದರು.
ಈ ಅಧಿವೇಶನದಲ್ಲಿ ಯಾವಾಗಲೂ ಹಾಗೆ ಅನೇಕ ಐತಿಹಾಸಿಕ ಮಸೂದೆಗಳನ್ನು ಸದನದಲ್ಲಿ ಚರ್ಚಿಸಲಾಗುವುದು ಮತ್ತು ವ್ಯಾಪಕವಾದ ಚಿಂತನೆಯ ನಂತರ ಅವು ರಾಷ್ಟ್ರವನ್ನು ಬಲಪಡಿಸುವ ಕಾನೂನುಗಳಾಗುತ್ತವೆ. ವಿಶೇಷವಾಗಿ ಮಹಿಳಾ ಶಕ್ತಿಯ ಹೆಮ್ಮೆಯನ್ನು ಪುನಃ ಸ್ಥಾಪಿಸಲು, ಜಾತಿ ಮತ್ತು ಧರ್ಮದ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಮಹಿಳೆಗೆ ಗೌರವಾನ್ವಿತ ಜೀವನ ಮತ್ತು ಸಮಾನ ಹಕ್ಕುಗಳು ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಈ ಅಧಿವೇಶನದಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು.












Click it and Unblock the Notifications