Budget 2024: ಬಜೆಟ್ನಲ್ಲಿ ರೈಲು ಪ್ರಯಾಣ ದರ ಇಳಿಕೆಯಾಗಲಿದೆ?
ಬೆಂಗಳೂರು, ಜುಲೈ 21: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈ 23ರಂದು ಮಂಡನೆ ಮಾಡಲಿದ್ದಾರೆ.
2024ರ ಲೋಕಸಭೆ ಚುನಾವಣೆ ಮುಗಿದು, ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಂಡನೆಯಾಗುತ್ತಿರುವ ಪೂರ್ಣ ಪ್ರಮಾಣದ ಮೊದಲ ಬಜೆಟ್ ಇದಾಗಿದೆ. ಆದ್ದರಿಂದ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆ ಇದೆ.

ಜುಲೈ 23ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಾಗುತ್ತದೆ. ಸಾಮಾನ್ಯ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ವಿಲೀನಗೊಂಡಿದೆ. ಆದ್ದರಿಂದ ರೈಲ್ವೆ ಇಲಾಖೆಯ ಘೋಷಣೆಗಳು ಸಹ ಬಜೆಟ್ನಲ್ಲಿ ಸೇರಿರುತ್ತವೆ.
ರೈಲು ಪ್ರಯಾಣ ದರ ಇಳಿಕೆ?; ಭಾರತೀಯ ರೈಲ್ವೆ ದೇಶದಲ್ಲಿ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿದೆ. ಪ್ರತಿದಿನ ಕೋಟ್ಯಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರ ಸುರಕ್ಷತೆ, ಐಷಾರಾಮಿ ಸೇವೆ ನೀಡಲು ಸರ್ಕಾರ ಹೊಸ ಹೊಸ ಯೋಜನೆ ಜಾರಿಗೊಳಿಸುತ್ತಿದೆ.
ಈ ಬಾರಿಯ ಬಜೆಟ್ನಲ್ಲಿ ರೈಲು ಪ್ರಯಾಣ ದರ ಇಳಿಕೆಯಾಗಲಿದೆಯೇ? ಎಂಬ ಕುತೂಹಲವಿದೆ. ಐಷಾರಾಮಿ ವಂದೇ ಭಾರತ್ ರೈಲಿನ ಪ್ರಯಾಣ ದರ ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ಸಾಮಾನ್ಯ ರೈಲುಗಳ ಪ್ರಯಾಣ ದರ 2024ರ ಫೆಬ್ರವರಿಯಲ್ಲಿ ಇಳಿಸಲಾಗಿದೆ. ಆದ್ದರಿಂದ ಮತ್ತೆ ದರ ಕಡಿತ ಮಾಡುವ ಸಾಧ್ಯತೆ ಕಡಿಮೆ ಇದೆ.
ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಬಜೆಟ್ನಲ್ಲಿ ರೈಲ್ವೆ ವಿಭಾಗವಾರು ಅನುದಾನ ಹಂಚಿಕೆ ಮಾತ್ರ ಘೋಷಣೆ ಮಾಡುತ್ತಾರೆ. ಬಜೆಟ್ ಬಳಿಕ ರೈಲ್ವೆ ವಿಭಾಗಗಳು ಬಜೆಟ್ನಲ್ಲಿ ಸಿಕ್ಕಿರುವ ಅಂಶಗಳನ್ನು ಪಿಂಕ್ ಬುಕ್ ನೋಡಿಕೊಂಡು ವಿವರಿಸುತ್ತವೆ.
ರೈಲ್ವೆ ವಿದ್ಯುದೀಕರಣ, ರೈಲು ಪ್ರಯಾಣಿಕರ ಸುರಕ್ಷತೆ, ಸೂಪರ್ ಫಾಸ್ಟ್ ರೈಲುಗಳ ಘೋಷಣೆ, ಹೊಸ ವಂದೇ ಭಾರತ್ ರೈಲುಗಳ ಘೋಷಣೆ, ಸ್ಲೀಪರ್ ಮಾದರಿ ವಂದೇ ಭಾರತ್ ರೈಲುಗಳ ಘೋಷಣೆ ಮುಂತಾದ ನಿರೀಕ್ಷೆಗಳು ಬಜೆಟ್ ಮೇಲಿವೆ.
ಪ್ರಯಾಣಿಕರ ಬೇಡಿಕೆಯಂತೆ ಹೆಚ್ಚುವರಿ ಬೋಗಿ ಅಳವಡಿಕೆಗೆ ಬಜೆಟ್ನಲ್ಲಿ ಒತ್ತು ನೀಡುವ ನಿರೀಕ್ಷೆ ಇದೆ. ರೈಲ್ವೆ ಸಚಿವಾಲಯದ ಮಾಹಿತಿ ಪ್ರಕಾರ ಸುಮಾರು 10 ಸಾವಿರ ಹೊಸ ಸಾಮಾನ್ಯ ಬೋಗಿಯನ್ನು ತಯಾರು ಮಾಡಲಾಗುತ್ತಿದೆ.
2023ರಲ್ಲಿ 75 ವಂದೇ ಭಾರತ್ ರೈಲುಗಳನ್ನು ಓಡಿಸಬೇಕು ಎಂದು ಭಾರತೀಯ ರೈಲ್ವೆ ಗುರಿ ಹೊಂದಿತ್ತು. ಆದರೆ ಅಷ್ಟು ರೈಲುಗಳ ಸಂಚಾರ ಆರಂಭವಾಗಿಲ್ಲ. ವಿವಿಧ ರಾಜ್ಯಗಳಿಂದ ವಂದೇ ಭಾರತ್ ರೈಲಿಗಾಗಿ ಬೇಡಿಕೆ ಇದೆ. ಈ ಬಾರಿಯ ಬಜೆಟ್ನಲ್ಲಿ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸುವ ಕುರಿತು ಮಹತ್ವದ ಘೋಷಣೆ ನಿರೀಕ್ಷೆ ಮಾಡಲಾಗುತ್ತಿದೆ.
ಸಾಮಾನ್ಯ ರೈಲುಗಳನ್ನು ಕೋವಿಡ್ ಬಳಿಕ ಎಕ್ಸ್ಪ್ರೆಸ್ ಆಗಿ ಬದಲಾವಣೆ ಮಾಡಲಾಗಿದೆ. ಅಲ್ಲದೇ ಹಲವು ರೈಲುಗಳು ತಾತ್ಕಾಲಿಕ ಎಂದು ಓಡಿಸಲಾಗುತ್ತಿದೆ. ಇದರಿಂದಾಗಿ ಅವುಗಳ ದರಗಳು ಹೆಚ್ಚಿವೆ.
ರೈಲುಗಳನ್ನು ಖಾಯಂಗೊಳಿಸುವುದು, ಎಕ್ಸ್ಪ್ರೆಸ್ ಬದಲು ಸಾಮಾನ್ಯ ದರದಲ್ಲಿ ಓಡಿಸಿದರೆ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂಬ ಬೇಡಿಕೆ ಇದೆ. ಬಜೆಟ್ನಲ್ಲಿ ಈ ಕುರಿತು ಯಾವ ಘೋಷಣೆ ಮಾಡಲಾಗುತ್ತದೆ ಎಂದು ಕಾದು ನೋಡಬೇಕಿದೆ.
ಅಮೃತ್ ಭಾರತ್ ರೈಲು ಯೋಜನೆಯಡಿ ದೇಶದ ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲಾಗುತ್ತಿದೆ. ಇನ್ನೂ ಹಲವು ರೈಲು ನಿಲ್ದಾಣಗಳನ್ನು ಈ ಯೋಜನೆಗೆ ಸೇರಿಸಲು ಸಂಸದರು ಮನವಿಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಆದ್ದರಿಂದ ಈ ಕುರಿತು ಬಜೆಟ್ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.
ನರೇಂದ್ರ ಮೋದಿ 3.0 ಸರ್ಕಾರದಲ್ಲಿ ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಖಾತೆಯ ರಾಜ್ಯ ಸಚಿವರು. ಅಲ್ಲದೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದ್ದರಿಂದ ಬಜೆಟ್ ಮೇಲೆ ಕರ್ನಾಟಕದ ಜನರ ನಿರೀಕ್ಷೆಗಳು ಹೆಚ್ಚಿವೆ. ಇವುಗಳಲ್ಲಿ ಬೆಂಗಳೂರು ನಗರದ ಮೆಟ್ರೋ ಯೋಜನೆಗೆ ಅನುದಾನ, ಸಬ್ ಅರ್ಬನ್ ರೈಲು ಯೋಜನೆ ಚುರುಕುಗೊಳಿಸುವುದು ಸೇರಿವೆ.












Click it and Unblock the Notifications