ಆದಾಯ ತೆರಿಗೆ ಹೆಚ್ಚಿಸಬಾರದೆಂದು ಪ್ರಧಾನಿ ಮೋದಿ ಹೇಳಿದ್ದರು: ನಿರ್ಮಲಾ ಸೀತಾರಾಮನ್
2022-23 ಕೇಂದ್ರ ಬಜೆಟ್ ಮಂಡಿಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಹೆಚ್ಚಳ ಮಾಡದೇ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ನಿರ್ದೇಶನವಿತ್ತು ಎಂಬುದನ್ನ ತಿಳಿಸಿದ್ದಾರೆ.
''ಕೋವಿಡ್-19 ಕಷ್ಟದ ಸಮಯದಲ್ಲಿ ಜನರ ಮೇಲೆ ಯಾವುದೇ ಕಾರಣಕ್ಕೂ ತೆರಿಗೆ ಹೆಚ್ಚಿಸಬಾರದು ಎಂಬುದನ್ನ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿ ಈ ಬಾರಿಯು ಆದಾಯ ತೆರಿಗೆ ಸ್ಲ್ಯಾಬ್ಗಳ ಮೇಲೆ ಯಾವುದೇ ಬದಲಾವಣೆ ಮಾಡಲಾಗಿಲ್ಲ'' ಎಂದು ನಿರ್ಮಲಾ ಸೀತಾರಾಮನ್ ತೆರಿಗೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕಳೆದ ವರ್ಷವೂ ಅದೇ ನಿರ್ದೇಶನವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದರು ಮತ್ತು ಈ ವರ್ಷವೂ ಅದನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಇನ್ನು ಆರ್ಬಿಐ ಹೊಸ ಡಿಜಿಟಲ್ ಕರೆನ್ಸಿ ಕುರಿತು ಕೇಳಿದ ಪ್ರಶ್ನೆಗೆ '' ಆರ್ಬಿಐ ತನ್ನ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲಿದೆ. ಡಿಜಿಟಲ್ ಆಸ್ತಿಯನ್ನು ಮಧ್ಯಸ್ಥಗಾರರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ನಾವು ಇನ್ನೂ ನೀಡಬೇಕಾದ ಕರೆನ್ಸಿಗೆ ತೆರಿಗೆ ವಿಧಿಸುತ್ತಿಲ್ಲ'' ಎಂದಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕವು ಖಂಡಿತವಾಗಿಯೂ ಉದ್ಯೋಗಗಳ ಮೇಲೆ ಪರಿಣಾಮ ಬೀರಿದೆ . ಆದರೆ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಜನರು ಯಶಸ್ವಿಯಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಲು ಪ್ರಯತ್ನಿಸುತ್ತಿದೆ ಎಂದು ಉದ್ಯೋಗ ಸೃಷ್ಟಿ ಕುರಿತು ಕೇಳಿದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ.
''ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳನ್ನು ನಿಭಾಯಿಸಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಸರ್ಕಾರ ಹಣದುಬ್ಬರ ಎರಡಂಕಿಗೆ ಹೋಗಲು ಬಿಡಲಿಲ್ಲ. ಇದು ತಿಂಗಳಿಗೆ 6% ಮಿತಿಯನ್ನು ಉಲ್ಲಂಘಿಸಿದೆ, ಆದ್ರೂ ಅದನ್ನು ಎಂದಿಗೂ ದಾಟಲು ಬಿಡಲಿಲ್ಲ. ಆದಾಗ್ಯೂ, 2014 ರ ಮೊದಲು ಇದು ಯಾವಾಗಲೂ 10,11,12,13 ರ ವ್ಯಾಪ್ತಿಯಲ್ಲಿತ್ತು'' ಎಂದು ಹಿಂದಿನ ಕಾಂಗ್ರೆಸ್ ಆಡಳಿತ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ.
Recommended Video
ಹಣಕಾಸು ವರ್ಷ 2025-26 ಅಥವಾ 2026-27ರಲ್ಲಿ ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆ ಎಂದು ಇದೇ ವೇಳೆಯಲ್ಲಿ ಹಣಕಾಸು ಸಚಿವರು ತಿಳಿಸಿದ್ದಾರೆ.
2018ರ ನಂತರ ವಿದೇಶಗಳಿಂದ ಕಪ್ಪುಹಣದ ಮಾಹಿತಿ ಹಂಚಿಕೆಯಾಗುತ್ತಿದೆ. ಈ ಮಾಹಿತಿಯ ಆಧಾರದ ಮೇಲೆ, ಕಪ್ಪು ಹಣವನ್ನು ತರಲು ನಾವು ಪ್ರತಿ ಖಾತೆಯ ಮೂಲಕ ಕೆಲಸ ಮಾಡುತ್ತಿದ್ದೇವೆ. ಬ್ಯಾಂಕ್ಗಳಲ್ಲಿ ಎನ್ಪಿಎ ಕಡಿಮೆಯಾಗುತ್ತಿದೆ, ದೇಶದಿಂದ ಪಲಾಯನ ಮಾಡಿದವರ ಹಣವನ್ನು ಬ್ಯಾಂಕ್ಗಳು ವಾಪಸ್ ಪಡೆಯುತ್ತಿವೆ ಎಂದು ಹಣಕಾಸು ಸಚಿವರು ಕಪ್ಪು ಹಣ ವಾಪಸ್ಸಾತಿ ಕುರಿತಾಗಿ ಸರ್ಕಾರದ ಪ್ರಯತ್ನಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದರು.
'ಜೀರೋ ಮೊತ್ತದ ಬಜೆಟ್' ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ "ದಯವಿಟ್ಟು ಬಜೆಟ್ ಅನ್ನು ಅರ್ಥಮಾಡಿಕೊಳ್ಳಿ" ಎಂದು ಹೇಳಿದರು. ತುಂಬಾ ಹಳೆಯದಾದ ಪಕ್ಷದ ನಾಯಕನಾಗಿ ''ಬೇಜವಾಬ್ದಾರಿ'' ಕಾಮೆಂಟ್ ಮಾಡದಿರಿ ಎಂದು ಹೇಳಿದರು.
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಭಾಷಣವು ಅತ್ಯಂತ ಬಂಡವಾಳಶಾಹಿ ಭಾಷಣವಾಗಿದೆ. 'ಬಡವರು' ಎಂಬ ಪದವು ಪ್ಯಾರಾ 6 ರಲ್ಲಿ ಕೇವಲ ಎರಡು ಬಾರಿ ಕಂಡುಬರುತ್ತದೆ. ಈ ದೇಶದಲ್ಲಿ ಬಡವರಿದ್ದಾರೆ ಎಂದು ನೆನಪಿಸಿಕೊಂಡಿದ್ದಕ್ಕಾಗಿ ನಾವು ಹಣಕಾಸು ಸಚಿವರಿಗೆ ಧನ್ಯವಾದಗಳನ್ನ ಹೇಳಲು ಬಯಸುತ್ತೇವೆ. ಈ ಬಂಡವಾಳಶಾಹಿ ಬಜೆಟ್ ಅನ್ನು ಜನರು ತಿರಸ್ಕರಿಸುತ್ತಾರೆ ಎಂದು ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಟೀಕಿಸಿದ್ದಾರೆ.












Click it and Unblock the Notifications