ಬಂಗಾಳದ ಟಿಎಂಸಿ ಬೂತ್ ಅಧ್ಯಕ್ಷರ ನಿವಾಸದಲ್ಲಿ ಬಾಂಬ್ ಸ್ಫೋಟ: 2 ಸಾವು, ಇಬ್ಬರಿಗೆ ಗಾಯ
ಪಶ್ಚಿಮ ಬಂಗಾಳದ ಟಿಎಂಸಿ ಬೂತ್ ಅಧ್ಯಕ್ಷರ ನಿವಾಸದಲ್ಲಿ ಶುಕ್ರವಾರ ತಡರಾತ್ರಿ ಬಾಂಬ್ ಸ್ಫೋಟಗೊಂಡು 2 ಸಾವನ್ನಪ್ಪಿದ್ದು 2 ಮಂದಿ ಗಾಯಗೊಂಡಿದ್ದಾರೆ.
ಮೇದಿನಿಪುರ ಡಿಸೆಂಬರ್ 3: ಪಶ್ಚಿಮ ಬಂಗಾಳದ ಭೂಪತಿನಗರ ಪ್ರದೇಶದ ಪುರ್ಬಾ ಮೇದಿನಿಪುರ ಜಿಲ್ಲೆಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೂತ್ ಅಧ್ಯಕ್ಷ ರಾಜ್ಕುಮಾರ್ ಮನ್ನಾ ಅವರ ನಿವಾಸದಲ್ಲಿ ಶುಕ್ರವಾರ ತಡರಾತ್ರಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದ ಪ್ರಭಾವ ಎಷ್ಟು ಪ್ರಬಲವಾಗಿದೆಯೆಂದರೆ ಮನೆ ಛಾವಣಿ ಹಾರಿಹೋಗಿದೆ.
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ, ಮೃತರೆಲ್ಲರೂ ಟಿಎಂಸಿ ಕಾರ್ಯಕರ್ತರು ಎಂಬ ಶಂಕೆ ವ್ಯಕ್ತವಾಗಿದೆ. ಸ್ಫೋಟದ ಸ್ವರೂಪವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಆದರೆ, ಮನೆಯ ಮೇಲೆ ಸ್ಫೋಟಕ ದಾಳಿ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗಿಲ್ಲ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಕಚ್ಚಾ ಬಾಂಬ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ಶಂಕಿಸಲಾಗಿದೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಶನಿವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿರುವ ಕೊಂಟೈ ಪಟ್ಟಣದಿಂದ ಕೇವಲ 1.5 ಕಿಮೀ ದೂರದಲ್ಲಿರುವ ಭೂಪತಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಘಟನೆಗೆ ಟಿಎಂಸಿಯನ್ನು ಹೊಣೆ ಎಂದು ಹೇಳಿದ್ದಾರೆ. "ಹಲವು ಕಡೆ ಸ್ಫೋಟವಾದಾಗಲೆಲ್ಲಾ ಟಿಎಂಸಿ ನಾಯಕರು ಭಾಗಿಯಾಗಿರುವುದನ್ನು ನಾವು ನೋಡುತ್ತೇವೆ. ಎಲ್ಲಾ ಸಮಾಜ ವಿರೋಧಿ ಶಕ್ತಿಗಳು ಅಧಿಕಾರದಲ್ಲಿ ಉಳಿಯಲು ಆ ಪಕ್ಷದಲ್ಲಿ ಸ್ಥಾನ ಪಡೆದಿವೆ. ಆದ್ದರಿಂದ ಇದರಲ್ಲಿ ಆಶ್ಚರ್ಯವೇನಿಲ್ಲ " ಎಂದು ದಿಲೀಪ್ ಘೋಷ್ ಹೇಳಿಕೊಂಡಿದ್ದಾರೆ.
Wb | A blast occurred at residence of TMC booth president Rajkumar Manna in Arjun Nagar area under Bhupati Nagar PS in Purba Medinipur limits last night. Injuries reported. Party's National General Secretary Abhishek Banerjee is scheduled to hold a public rally in Contai today. pic.twitter.com/1ynqX7G6S3
— ANI (@ANI) December 3, 2022
ಸ್ಫೋಟದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಟ್ವಿಟ್ಟರ್ನಲ್ಲಿ ಹೇಳಿಕೆ ನೀಡಿದ್ದು, "ಪೂರ್ವ ಮೇದಿನಿಪುರ ಜಿಲ್ಲೆಯ ಟಿಎಂಸಿ ನಾಯಕನ ಮನೆಯಲ್ಲಿ ಅವರು ಕಚ್ಚಾ ಬಾಂಬ್ ತಯಾರಿಸುವಾಗ ಮತ್ತೊಂದು ಬಾಂಬ್ ಸ್ಫೋಟವಾಗಿದೆ. ಹೀಗಾಗಿ ಆತ ಇತರ ಕೆಲವರೊಂದಿಗೆ ತನ್ನ ಪ್ರಾಣವನ್ನು ಕಳೆದುಕೊಂಡನು. ಪಂಚಾಯಿತಿ ಚುನಾವಣೆಗೂ ಮುನ್ನ ಟಿಎಂಸಿ ಮತ್ತೆ ಭಯದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದೆ'' ಎಂದಿದ್ದಾರೆ.