ಮಹಾಭಾರತ: ರಾಮನ ನಾಡಿನಲ್ಲಿ ಬಿಜೆಪಿಗೆ ಹೇಗೆ?
ನವದೆಹಲಿ, ಮಾರ್ಚ್ 6: ಕೇಂದ್ರ ಚುನಾವಣಾ ಆಯೋಗವು ನಿನ್ನೆ 'ಮಹಾಭಾರತ' ಸಮರಕ್ಕೆ ಶಂಖ ಊದಿದೆ. ಇದೇ ಸಮಯದಲ್ಲಿ CNN-IBN-Lokniti-CSDS ಚುನಾವಣಾ ಸಮೀಕ್ಷೆಯೊಂದು ಹೊರಬಿದ್ದಿದೆ. ಅದರಲ್ಲಿ ರಾಮನ ನಾಡಿನಲ್ಲಿ ಬಿಜೆಪಿಗೆ ಹೇಗೆ? ಎಂಬುದಕ್ಕೆ ಉತ್ತರವಿದೆ.
ಪ್ರತಿ ಸಲದಂತೆ ಈ ಬಾರಿಯೂ ಉತ್ತರ ಪ್ರದೇಶದಲ್ಲಿ ಬಹುಮುಖ ಸ್ಪರ್ಧೆ ಕಂಡುಬರಲಿದೆ. ಆದರೆ ಈ ಬಾರಿ ತುಸು ಹೆಚ್ಚು ತುರುಸಿನ ಸ್ಪರ್ಧೆ ನಡೆಯುವುದಂತೂ ಖಚಿತವಾಗಿದೆ. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಂದ ಜನ ವಿಮುಖಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಫೆಬ್ರವರಿ 17 ರಿಂದ 23ರವರೆಗೆ 39 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಸಮೀಕ್ಷೆಯ ಫಲಿತಾಂಶ ಇದು. (ಸಿ ವೋಟರ್ ಚುನಾವಣಾ ಸಮೀಕ್ಷೆ ಬರಿ ಗ್ಯಾಸೋ ಗ್ಯಾಸು)

ಗಮನಾರ್ಹವೆಂದರೆ ಚುನಾವಣೆ ಈಗ ನಡೆದರೆ ಮತ ಯಾರಿಗೆ ಎಂಬುದರ ಬಗ್ಗೆ ನಡೆದ ಸಮೀಕ್ಷೆಯ ಪ್ರಕಾರ ರಾಮನ ನಾಡಿನಲ್ಲಿ ಬಿಜೆಪಿ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಲಿದೆ. ಪಕ್ಷವು ಶೇ. 36ರಷ್ಟು ಮತಗಳನ್ನು ಗಳಿಸಲಿದೆಯಂತೆ. ಅಂದರೆ ಕಳೆದ ಚುನಾವಣೆಗಿಂತ ಈ ಬಾರಿ ಬಿಜೆಪಿ ಮತಗಳಿಕೆ ದುಪ್ಪಟ್ಟು ಆಗಲಿದೆ. ತತ್ಫಲವಾಗಿ ಬಿಜೆಪಿಗೆ ಈ ಬಾರಿ ಉತ್ತಮ ಫಸಲು ಕಟ್ಟಿಟ್ಟಬುತ್ತಿ ಅನ್ನುತ್ತಿದೆ ಸಮೀಕ್ಷೆ.
80 ಸಂದೀಯ ಸ್ಥಾನಗಳ ಉತ್ತರ ಪ್ರದೇಶದಲ್ಲಿ ಬಿಜೆಪಿ 41-49 ಸ್ಥಾನಗಳನ್ನು ಬಾಚಿಕೊಳ್ಳಲಿದೆ. ಆಡಳಿತಾರೂಢ ಸಮಾಜವಾದಿ ಪಕ್ಷ 11-17 ಸ್ಥಾನ ಪಡೆಯಲಿದೆ. ಮಾಯಾವತಿ ಅಧಿಪತ್ಯದ ಬಿಎಸ್ಪಿ ಆನೆ ಕುಂಟುತ್ತಾ ಸಾಗಿದ್ದು, ಅಬ್ಬಬ್ಬಾ ಅಂದರೆ 5-9 ಸೀಟು ಗಳಿಸಬಹುದಷ್ಟೇ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಮೇಲ್ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ಮತದಾರರ ವಿಶ್ವಾಸವನ್ನು ಬಿಜೆಪಿ ಗಳಿಸಿಕೊಂಡಿದೆ. ಬ್ರಾಹ್ಮಣರು (ಶೇ. 62), ರಾಜಪೂತರು (ಶೇ. 54) ಮತ್ತು ಜಾಟ್ (ಶೇ. 45) ಜನಾಂಗದವರು ಈ ಬಾರಿ ಬಿಜೆಪಿಗೆ ಮಣೆ ಹಾಕುವ ಅಂದಾಜಿದೆ. (ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣಾ ದಿನಾಂಕಗಳು ಹೀಗಿವೆ: ಏಪ್ರಿಲ್ 10, 17, 24, 30 ಮತ್ತು ಮೇ 7, 12)
ಮುಸ್ಲಿಮರ ಪೈಕಿ ಶೇ. 47ರಷ್ಟು ಮಂದಿ ಸಮಾಜವಾದಿ ಪಕ್ಷಕ್ಕೆ, ಶೇ. 24ರಷ್ಟು ಮಂದಿ ಕಾಂಗ್ರೆಸ್ಸಿಗೆ, ಶೇ. 13ರಷ್ಟು ಮಂದಿ ಬಿಜೆಪಿಗೆ, ಎಎಪಿಗೆ ಶೇ. 9ರಷ್ಟು ಮಂದಿ ಮತ್ತು ಬಿಎಸ್ಪಿಗೆ ಕೇವಲ ಶೇ. 6ರಷ್ಟು ಮಂದಿ ಮತ ಹಾಕಲಿದ್ದಾರೆ ಎನ್ನುತ್ತಿದೆ ಸಮೀಕ್ಷೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದ ಪ್ರದರ್ಶನ ಚೇತೋಹಾರಿಯಾಗಿದೆ.
ಇನ್ನು ಪ್ರಧಾನಿ ಅಭ್ಯರ್ಥಿಯ ಬಗ್ಗೆಯೂ ತುಟಿಬಿಚ್ಚಿರುವ ಉತ್ತರ ಪ್ರದೇಶದ ಮತದಾರರು ಶೇ. 34ರಷ್ಟು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೆಂದ್ರ ಮೋದಿಯತ್ತ ಒಲವು ಬೀರಿದ್ದಾರೆ. ಶೇ. 11ರಂದು ಮಂದಿ ರಾಹುಲ್ ಗಾಂಧಿಗೆ ಮಣೆ ಹಾಕಿದ್ದಾರೆ.












Click it and Unblock the Notifications