Delhi Election: ಪ್ರತಿಭಟನೆ ಮಾಡುತ್ತಿದ್ದ ಯುವಕರಿಗೆ ಕೇಜ್ರಿವಾಲ್ ಕಾರು ಡಿಕ್ಕಿ ಹೊಡೆದಿದೆ; ಬಿಜೆಪಿ ಆರೋಪ
ದೆಹಲಿ ವಿಧಾನಸಭಾ ಚುನಾವಣೆ ದಿನೇ ದಿನೇ ರೋಚಕತೆ ಪಡೆದುಕೊಳ್ಳುತ್ತಿದೆ. ಪ್ರತಿನಿತ್ಯ ಬಿಜೆಪಿ ಮತ್ತು ಎಎಪಿ ನಡುವೆ ಹಲವು ಆರೋಪ ಪ್ರತ್ಯಾರೋಪ ಸಾಮಾನ್ಯವಾಗಿದೆ. ಶನಿವಾರ ಅರವಿಂದ್ ಕೇಜ್ರಿವಾಲ್ ಅವರ ಕಾರಿನ ಮೇಲೆ ದಾಳಿ ಮಾಡಿರುವ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಬಿಜೆಪಿ ನಾಯಕ ಪರ್ವೇಶ್ ವರ್ಮಾ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮೂವರು ಯುವಕರಿಗೆ ಕೇಜ್ರಿವಾಲ್ ಅವರ ಕಾರು ಡಿಕ್ಕಿ ಹೊಡೆದಿದೆ ಎಂದು ಪರ್ವೇಶ್ ವರ್ಮಾ ಆರೋಪಿಸಿದ್ದು. ಕೇಜ್ರಿವಾಲ್ ಅವರ ಸೂಚನೆ ಮೇರೆಗೆ ಕಾರಿನ ಚಾಲಕ ಈ ಕೃತ್ಯ ಎಸಗಿದ್ದಾನೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

"ಅರವಿಂದ್ ಕೇಜ್ರಿವಾಲ್ ಅವರು ಲಾಲ್ ಬಹದ್ದೂರ್ ಸದನದ ಬಳಿ ಮನೆ ಮನೆ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ನವದೆಹಲಿಯ ವಿಧಾನಸಭಾ ಕ್ಷೇತ್ರದ ಜನತೆ ಎಎಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು. ಎಎಪಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಪ್ರಶ್ನೆ ಮಾಡಲಾಯಿತು, ನಿರುದ್ಯೋಗಿಗಳಾದ ವಿಶಾಲ್, ಅಭಿಷೇಕ್ ಮತ್ತು ರೋಹಿತ್ ಎಂಬ ಮೂವರು ಯುವಕರು ಕೇಜ್ರಿವಾಲ್ ಅವರನ್ನು ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಿದಾಗ, ಪಂಜಾಬ್ ಪೊಲೀಸರು ಅವರನ್ನು ಥಳಿಸಿದ್ದಾರೆ, ಅದರಲ್ಲಿ ಒಬ್ಬನ ಫೋನ್ ಒಡೆದು ಹಾಕಲಾಗಿದೆ" ಎಂದು ಪರ್ವೇಶ್ ವರ್ಮಾ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಕೇಜ್ರಿವಾಲ್ ಸೂಚನೆ ಕೊಟ್ರಾ?
ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಕಾರು ಮೂವರು ಯುವಕರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಯುವಕರನ್ನು ನೋಡಿ ಬ್ರೇಕ್ ಹಾಕಿದರು, ಅದರೆ ಕೇಜ್ರಿವಾಲ್ ಅವರೇ ಚಾಲಕನಿಗೆ ಯುವಕರಿಗೆ ಗುದ್ದುವಂತೆ ಸೂಚನೆ ಕೊಟ್ಟಿದ್ದಾರೆ. ಅದರಂತೆ ಅವರನ್ನು ಕಾರಿನಿಂದ ಗುದ್ದಲಾಗಿದೆ. ಇದು ಕೊಲೆ ಪ್ರಯತ್ನವಾಗಿದ್ದು ನಾನು ಪೊಲೀಸ್ ಠಾಣೆಗೆ ಹೋಗುತ್ತಿದ್ದು ಮೂವರು ಯುವಕರು ಎಫ್ಐಆರ್ ದಾಖಲಿಸುತ್ತಾರೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಆಧಾರ ರಹಿತ ಆರೋಪ ಎಂದ ಎಎಪಿ
ಪರ್ವೇಶ್ ವರ್ಮಾ ಅವರ ಆರೋಪಕ್ಕೆ ಉತ್ತರ ನೀಡಿರುವ ಆಮ್ ಆದ್ಮಿ ಪಕ್ಷ, ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಬೆಂಬಲಿಗರು ಅರವಿಂದ್ ಕೇಜ್ರಿವಾಲ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದೆ.
ಸೋಲಿನ ಭಯದಿಂದ ಬಿಜೆಪಿ ಹೆದರಿಕೊಂಡಿದೆ. ತನ್ನ ಗೂಂಡಾಗಳನ್ನು ಬಿಟ್ಟು ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ಮಾಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಪ್ರಚಾರ ಅವರ ಕಡೆಯ ಗೂಂಡಾಗಳು ಅರವಿಂದ್ ಕೇಜ್ರಿವಾಲ್ ಮೇಲೆ ಇಟ್ಟಿಗೆ ಮತ್ತು ಕಲ್ಲಿನಿಂದ ದಾಲಿ ಮಾಡಿದ್ದು, ಅವರು ಪ್ರಚಾರ ಮುಂದುವರೆಸದಂತೆ ಗಾಯಗೊಳಿಸಲು ಪ್ರಯತ್ನಿಸಿದರು. ಬಿಜೆಪಿಯವರ ಈ ದಾಳಿಯಿಂದ ಕೇಜ್ರಿವಾಲ್ ಹೆದರುವುದಿಲ್ಲ, ದೆಹಲಿ ಜನತೆ ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಎಪಿ ತನ್ನ ಎಕ್ಸ್ ಖಾತೆಯಲ್ಲಿ ಬರೆದಿದೆ.
ಘಟನೆ ನಡೆದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಕೂಡ ಪ್ರಚಾರ ಮಾಡುತ್ತಿದ್ದರು ಎಂದು ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್ ಮಾಹಿತಿ ನೀಡಿದ್ದಾರೆ.












Click it and Unblock the Notifications