ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ ಸಂಸದನಿಗೆ ಛೀಮಾರಿ
ಪಟ್ನಾ, ಜೂನ್ 29 : ಈ ರಾಜಕಾರಣಿಯ ಹೆಸರು - ರಾಧಾ ಮೋಹನ್ ಸಿಂಗ್, ವಯಸ್ಸು - 67, ಪಕ್ಷ - ಭಾರತೀಯ ಜನತಾ ಪಕ್ಷ. ಪೂರ್ವಿ ಚಂಪಾರಣ್ ಕ್ಷೇತ್ರದ ಸಂಸದ, ಕೇಂದ್ರ ಕೃಷಿ ಸಚಿವ. ಬಿಹಾರದ ಮೋತಿಹಾರಿಯಲ್ಲಿ ಜೀವಿಸುವ ಇವರು ಇದ್ದಕ್ಕಿದ್ದಂತೆ ಸುದ್ದಿಯಲ್ಲಿದ್ದಾರೆ.
ಇವರು ಮಾಡಿರುವ ಘನಂದಾರಿ ಕೆಲಸವೆಂದರೆ, ರಸ್ತೆಯಲ್ಲಿಯೇ ತಮ್ಮ ಕಚ್ಚೆಯನ್ನೆತ್ತಿ ಮೂತ್ರ ವಿಸರ್ಜನೆ ಮಾಡಿರುವುದು. ತಮ್ಮ ವಾಹನ ನಿಲ್ಲಿಸಿ, ಕೈಯಲ್ಲಿ ಗನ್ ಹಿಡಿದಿದ್ದ ಅಂಗರಕ್ಷರು ಅತ್ತ ನೋಡುತ್ತಿದ್ದಾಗ, ಇವರು ಇತ್ತ ತಮ್ಮ ಕೆಲಸವನ್ನು ಸುಗಮವಾಗಿ ಮುಗಿಸಿದ್ದಾರೆ.

ನಿಸರ್ಗ ಕರೆಗೆ ಹೀಗೆ ಓಗೊಡುವುದು ವಿಹಿತವೇನೋ ಸರಿ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನದ ಬಗ್ಗೆ, ಶೌಚಾಲಯಗಳನ್ನು ಕಟ್ಟಿಸುವ ಬಗ್ಗೆ ಹೋದಲ್ಲೆಲ್ಲಾ ಭಾಷಣ ಬಿಗಿಯುತ್ತಿದ್ದರೆ, ಅವರದೇ ಪಕ್ಷದ ಹಿರಿಯ ನಾಯಕರೊಬ್ಬರು ಸಾರ್ವಜನಿಕವಾಗಿ ಇಂಥ ಮಾನಗೇಡಿ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ.
ಈ ಚಿತ್ರ ಈಗ ಸಾಮಾಜಿಕ ತಾಣದಲ್ಲೆಲ್ಲಾ ವೈರಲ್ ಆಗಿದ್ದು, ನೆಟ್ಟಿಗರು ಸನ್ಮಾನ್ಯ ರಾಧಾ ಮೋಹನ್ ಸಿಂಗ್ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. "ಅಯ್ಯೋ ದೇವರೆ, ಇನ್ನೂ ಏನೇನು ನೋಡಬೇಕೋ? ದೇವರೆ, ನಿನ್ನ ಬಳಿಗೆ ನನ್ನನ್ನು ಬೇಗನೆ ಕರೆಸಿಕೊಂಡುಬಿಡಪ್ಪಾ" ಎಂದು ಟ್ವಿಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.
ಇನ್ನು ಕೆಲವರು, ಅದರಲ್ಲಿ ತಪ್ಪೇನಿದೆ. ಇದ್ದಕ್ಕಿದ್ದಂತೆ ಅರ್ಜೆಂಟ್ ಆದರೆ ಏನು ಮಾಡಬೇಕು? ಹೀಗೆ ನಿಸರ್ಗದಲ್ಲಿ ನೈಸರ್ಗಿಕ ಕ್ರಿಯೆಯನ್ನು ಮಾಡುವ ಮಜವೇ ಬೇರೆ... ದಯವಿಟ್ಟು ಇಲ್ಲಿ ಯಾರೂ ಬರಬೇಡಿ, ಮಂತ್ರೀಜಿ ಬಿಜಿಯಾಗಿದ್ದಾರೆ ಎಂದು ಹಲವರು ತಮಗಿಷ್ಟ ಬಂದಂತೆ ಟ್ವೀಟ್ ಮಾಡಿದ್ದಾರೆ.












Click it and Unblock the Notifications