ಪಿಡಿಪಿ-ಬಿಜೆಪಿ ತಲಾಕ್: ಯೋಗಿ ಆದಿತ್ಯನಾಥ್ ನೀಡಿದ ಕಾರಣವೇನು?
Recommended Video
ಗೋರಕ್ಪುರ, ಜೂನ್ 20: 'ಜಮ್ಮು-ಕಾಶ್ಮೀರದ ಹಿತದೃಷ್ಟಿಯಿಂದ ಬಿಜೆಪಿ, ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ)ಯಿಂದ ಬೆಂಬಲ ವಾಪಸ್ ಪಡೆದಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
"ಬಿಜೆಪಿಯ ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಮ್ಮು-ಕಾಶ್ಮಿರದ ಸ್ಥಳೀಯ ನಾಯಕರು, ಉಪಮುಖ್ಯಮಂತ್ರಿಗಳು, ರಾಜ್ಯ ಸಚಿವರ ವಿಶ್ವಾಸ ತೆಗೆದುಕೊಳ್ಳಲಾಗಿದೆ. ದೇಶ ಮತ್ತು ಜಮ್ಮು ಕಾಶ್ಮೀರದ ಹಿತ ದೃಷ್ಟಿಯಿಂದ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ ಹಿತಕ್ಕಾಗಿ ಏನೆಲ್ಲಾ ಕ್ರಮ ಕೈಗೊಳ್ಳಬಹುದೋ ಅವನ್ನೆಲ್ಲ ನಾವು ಕೈಗೊಳ್ಳುತ್ತೇವೆ" ಎಂದು ಆದಿತ್ಯನಾಥ್ ಹೇಳಿದ್ದಾರೆ.
ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?
2014 ರ ವಿಧಾನಸಭೆ ಚುನಾವಣೆಯ ನಂತರ ಜಮ್ಮು ಕಾಶ್ಮೀರ ವಿಧಾನಸಭೆಯ 87 ಸ್ಥಾನಗಳಲ್ಲಿ ಯಾವ ಪಕ್ಷಗಳಿಗೂ ಅಗತ್ಯವಿದ್ದ ಬಹುಮತ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಪಿಡಿಪಿಯೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಪ್ರಪ್ರಥಮ ಬಾರಿಗೆ ಈ ಮೂಲಕ ಬಿಜೆಪಿ ಅಸ್ತಿತ್ವ ಕಂಡುಕೊಂಡಿತ್ತು.
ಆದರೆ ಕಣಿವೆಯಲ್ಲಿನ ಹಿಂಸಾಚಾರ, ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಮುಂತಾದ ಕಾರಣಗಳನ್ನು ನೀಡಿ ಬಿಜೆಪಿ ಇದೀಗ ಬೆಂಬಲವನ್ನು ವಾಪಸ್ ಪಡೆದಿದೆ. ಮುಖ್ಯಮಂತ್ರಿ, ಪಿಡಿಪಿಯ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದು, ಸದ್ಯಕ್ಕೆ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.