ಮೋದಿ-ಟ್ರಂಪ್ ಅವಹೇಳನಕ್ಕೆ ವೇದಿಕೆಯಾಯ್ತೇ ಅಂಬೇಡ್ಕರ್ ಹಬ್ಬ?
ಬೆಂಗಳೂರು, ಜುಲೈ 22: 'ಡಾ.ಬಿ.ಆರ್. ಅಂಬೇಂಡ್ಕರ್ ಅವರು ನಮಗೆ ನೀಡಿದ ಸಂವಿಧಾನವನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ನಮ್ಮಿಂದ ಕಸಿಯಲು ಪ್ರಯತ್ನಿಸುತ್ತಿದೆ. ಭಾರತ ಮತ್ತು ಅಂಬೇಡ್ಕರ್ ಕುರಿತು ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಪಾಠ ಮಾಡಬೇಕಿದೆ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಅಂಬೇಡ್ಕರ್ ಸಮಾವೇಶಕ್ಕೆ ರಾಹುಲ್, ಮಾರ್ಟಿನ್ ಲೂಥರ್ ಕಿಂಗ್-3 ಚಾಲನೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 126 ನೇ ಜನ್ಮ ವರ್ಷಾಚರಣೆಯ ಅಂಗವಾಗಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ದ ಸಭಾಂಗಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಂಬೇಡ್ಕರ್ ಸಮ್ಮೇಳನಕ್ಕೆ ಜುಲೈ 21 ರಂದು ಚಾಲನೆ ನೀಡಿದ ಅವರು ಮಾತನಾಡಿದರು. 'ಸಾಮಾಜಿಕ ನ್ಯಾಯ ಮರುಸ್ಥಾಪನೆ-ಅಂಬೇಡ್ಕರ್ ಚಿಂತನೆಗಳ ಪುನರ್ ಅವಲೋಕನ' ಎಂಬ ವಿಷಯದ ಕುರಿತು ನಡೆಯುತ್ತಿರುವ ಸಮ್ಮೇಳನದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಸಮಾಜಸೇವಕ ಕೈಲಾಶ್ ಸತ್ಯಾರ್ಥಿ, ಮಾನವ ಹಕ್ಕುಗಳ ಹೋರಾಟಗಾರ ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್-3 ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಅಂಬೇಡ್ಕರ್ ಸಮ್ಮೇಳನ ದಲಿತರ ಜಾಗೃತಿಗೋ, ಚುನಾವಣೆ ತಂತ್ರವೋ?
2018 ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಸಮ್ಮೇಳನ ಕೇಂದ್ರ ಸರ್ಕಾರವನ್ನು ಹಳಿಯುವುದಕ್ಕೆ ಒಂದು ವೇದಿಕೆಯಾಗಿದೆಯೇ ವಿನಃ ಸಮ್ಮೇಳನದ ಫಲಿತಾಂಶವೇನು ಎಂದರೆ ಉತ್ತರ ಸಿಕ್ಕುವಂತಿಲ್ಲ ಎಂಬುದು ಕೆಲ ಪ್ರಜ್ಞಾವಂತರ ಅಂಬೋಣ.
ಮೋದಿ ಹಳಿಯುವುದಕ್ಕೊಂದು ವೇದಿಕೆ!
ಅಂಬೇಡ್ಕರ್ ಚಿಂತನೆಯ ಕುರಿತು ಚರ್ಚೆ ನಡೆಸುವುದಕ್ಕಾಗಿ ಮತ್ತು ಅವುಗಳ ಪ್ರಸ್ತುತತೆ, ಮಹತ್ವದ ಕುರಿತು ಜನರಿಗೆ ಅರಿವು ಮೂಡಿಸುವುದಕ್ಕಾಗಿ ಆಯೋಜಿಸಿದ್ದ ಸಮಾವೇಶವನ್ನೂ ಗಣ್ಯರು ಕೇಂದ್ರ ಸರ್ಕಾರವನ್ನು ಹಳಿಯುವುದಕ್ಕಾಗಿಯೇ ಉಪಯೋಗಿಸಿಕೊಂಡಿದ್ದು ವಿಶೇಷವಾಗಿತ್ತು! ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ಹಳಿದರೆ, ಮಾನವ ಹಕ್ಕು ಹೋರಾಟಗಾರ ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ -3 ಡೊನಾಲ್ಡ್ ಟ್ರಂಪ್ ಅವರನ್ನು ಹಳಿದರು!
ಅಂಬೇಡ್ಕರ್ ಸಮ್ಮೇಳನಲ್ಲಿ ಟ್ರಂಪ್ ನೆನಪು
ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರು ಸಹ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು. ಭಾರತದಲ್ಲಿ ಗೋಹತ್ಯೆಯ ಹೆಸರಲ್ಲಿ ದೌರ್ಜನ್ಯ ನಡೆಯುತ್ತಿರುವಂತೆಯೇ ಅಮೆರಿಕದಲ್ಲೂ ಮೂಲಭೂತವಾದಿಗಳ ಗಲಬೆ ನಡೆಯುತ್ತಲೇ ಇದೆ. ಮೋದಿ-ಟ್ರಂಪ್ ಜೋಡಿ ಯಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಇಬ್ಬರ ವಿಚಾರವೂ ಒಂದೇ ಎಂದು ಮಾರ್ಟಿನ್ ಲೂಥರ್ ಕಿಂಗ್ 3 ಟ್ರಂಪ್ ಸರ್ಕಾರದ ಮೇಲಿನ ತಮ್ಮ ಅಸಮಾಧಾನವನ್ನು ಬೆಂಗಳೂರಿನಲ್ಲಿ ಹೊರಹಾಕಿದರು!
ಸಂವಿಧಾನ ಕಸಿಯುವ ಹುನ್ನಾರ!
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ' ಮೋದಿಯವರ ಅಪನಗದೀಕರಣದ ಕುರಿತು ಅವರ ಅಭಿಮಾನಿಗಳಲ್ಲೇ ಕೆಲವರಿಗೆ ಅಸಮಾಧಾನವಿದೆ, ಅವರು ಅದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ ಅಷ್ಟೇ, ರೋಹಿತ್ ವೆಮುಲ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ, ಅಖ್ಲಾಕ್ ಎಂಬ ಮುಸ್ಲಿಂ ಒಬ್ಬ ಫ್ರಿಜ್ಜಿನಲ್ಲಿ ಗೋಮಾಂಸ ಇಟ್ಟುಕೊಂದಿದ್ದ ಎಂದು ಅವನನ್ನು ಸಾಯಿಸಲಾಯಿತು. ಮೋದಿಯವರ ಆಡಳಿತದ ದುಸ್ಥಿತಿ ಇದು ಎಂದು ರಾಹುಲ್ ಗಾಂಧಿ ಮೋದಿ ವಿರುದ್ಧ ಕಿಡಿಕಾರಿದರು. ಆರ್ ಎಸ್ ಎಸ್, ಬಿಜೆಪಿ ಸೇರಿಕೊಂಡು ಅಂಬೇಡ್ಕರ್ ನಮಗೆ ನೀಡಿದ ಸಂವಿಧಾನವನ್ನು ಕಸಿಯುವ ಹುನ್ನಾರ ನಡೆಸುತ್ತಿವೆ, ಈ ಕುರಿತು ಜನರಿಗೆ ಅರಿವಾಗಬೇಕು ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದರು.
ಸಂದರ್ಭೋಚಿತವಾಗಿ ಮಾತನಾಡಿದ್ದು ಸಿದ್ದು ಒಬ್ಬರೇ!
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಮಯ್ಯ ಮಾತನಾಡಿ, ಇಂದಿನ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರವೆಂಬುದಿದ್ದರೆ ಅದು ಅಂಬೇಡ್ಕರ್ ಚಿಂತನೆಯಲ್ಲಿ ಮಾತ್ರ, ಜಾತಿ ಪದ್ಧತಿಯ ವಿರುದ್ಧ ಹೋರಾಡಿದ ಬಸವಣ್ಣನವರ ನೆಲೆದಲ್ಲಿ ಇಂಥ ಸಮ್ಮೇಳನ ನಡೆಸುತ್ತಿರುವ ಬಗ್ಗೆ ನಮಗೆ ಹೆಮ್ಮೆಯಿದೆ ಎಂದರು. ಒಟ್ಟಿನಲ್ಲಿ ಸಮ್ಮೇಳನದ ಉದ್ದೇಶವನ್ನು ಸರಿಯಾಗಿ ಅರಿತು, ಸಂದರ್ಭೋಚಿತವಾಗಿ ಮಾತನಾಡಿದ್ದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯವೊಬ್ಬರೇ ಅನ್ನಿಸಿದ್ದು ಸುಳ್ಳಲ್ಲ.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಮಂತ್ರಿಗಳಾದ ಎಚ್. ಆಂಜನೇಯ ಎಚ್.ಸಿ. ಮಹದೇವಪ್ಪ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರಾದ ಕೈಲಾಶ್ ಸತ್ಯಾರ್ಥಿ ಹಾಗೂ ದೇಶ ವಿದೇಶಗಳಿಂದ ಆಗಮಿಸಿರುವ ಸುಮಾರು 300ಕ್ಕೂ ಹೆಚ್ಚು ಚಿಂತಕರು, ನೀತಿ ನಿರೂಪಕರು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.