Jharkhand Election: ಬಿಜೆಪಿ 20 ವರ್ಷಗಳ ಕಾಲ ಜಾರ್ಖಂಡ್ ಲೂಟಿ ಮಾಡಿದೆ; ಸಿಎಂ ಹೇಮಂತ್ ಸೊರೇನ್
ಬಿಜೆಪಿ ಸುಮಾರು 20 ವರ್ಷಗಳ ಕಾಲ ಸತತವಾಗಿ ಜಾರ್ಖಂಡ್ ರಾಜ್ಯವನ್ನು ಲೂಟಿ ಮಾಡಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಆರೋಪ ಮಾಡಿದ್ದಾರೆ. ತಾವು ಅಧಿಕಾರ ವಹಿಸಿಕೊಂಡ ಐದು ವರ್ಷಗಳಲ್ಲಿ ರಾಜ್ಯವನ್ನು ಅಭಿವೃದ್ಧಿ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸೊರೆನ್ ಬಿಜೆಪಿ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೇಮಂತ್ ಸೊರೆನ್, ತಮ್ಮ ಸರ್ಕಾರ ರೂಪಿಸಿದ ಆರ್ಥಿಕ ನೆರವು ಯೋಜನೆ 'ಮೈಯಾನ್ ಸಮ್ಮಾನ್ ಯೋಜನೆ' ಮತ್ತು ವಸತಿ ಯೋಜನೆ 'ಅಬುವಾ ಆವಾಸ್ ಯೋಜನೆ'ಗಳನ್ನು ಉಲ್ಲೇಖಿಸಿದ್ದು, ತಮ್ಮದು ಜನಪರ ಆಡಳಿತ ಎಂದು ಹೇಳಿಕೊಂಡಿದ್ದಾರೆ.

ನಾನು ಜೈಲಿನಿಂದ ವಾಪಸ್ ಬಂದ ಬಳಿಕ ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಇಂದಿಗೆ 100 ದಿನಗಳಾಗಿದೆ. ಡಿಸೆಂಬರ್ 2019ರಲ್ಲಿ, ಜಾರ್ಖಂಡಡ್ ಜನರ ಆಶಿರ್ವಾದದೊಂದಿಗೆ ರಾಜ್ಯದ ಆಡಳಿತವನ್ನು ವಹಿಸಿಕೊಂದೆ. ಜಾರ್ಖಂಡ್ ಎನ್ನುವ ಮರಕ್ಕೆ ನೀರುಣಿಸುವುದು ಮತ್ತು ಬೇರುಗಳನ್ನು ಬಲಪಡಿಸುವುದು ನನ್ನ ಉದ್ದೇಶವಾಗಿತ್ತು. ಬಿಜೆಪಿಯವರು 20 ವರ್ಷಗಳಿಂದ ಈ ಮರವನ್ನು ಎರಡೂ ಕೈಗಳಿಂದ ಲೂಟಿ ಮಾಡಿದ್ದು, ಅದು ಒಣಗಿ ಹೋಗಿತ್ತು, ಅದನ್ನು ಮತ್ತೆ ಚಿಗುರಿಸುವ ಕೆಲಸ ಮಾಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಜಾರ್ಖಂಡ್ನಲ್ಲಿ 20 ವರ್ಷಗಳಿಂದ ಬಡವರು, ವಂಚಿತರು ಮತ್ತು ಶೋಷಿತ ಸಮುದಾಯದ ಜನರು ಸಾಮಾಜಿಕ ಭದ್ರತೆಯಂತ ಮೂಲಭೂತ ಅಗತ್ಯಗಳನ್ನು ಪಡೆಯಲು ಹಾತೊರೆಯುವಂತೆ ಪರಿಸ್ಥಿತಿ ಇತ್ತು. ಆದಿವಾಸಿಗಳು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ತಮ್ಮ ಗುರುತು ಪಡೆಯಲು ಹಾತೊರೆಯುತ್ತಿದ್ದರು. ಇಲ್ಲಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಹಾತೊರೆಯುತ್ತಿದ್ದರು. ಇಲ್ಲಿನ ಯುವಕರು ಉದ್ಯೋಗವನ್ನು ಬಯಸುತ್ತಾರೆ, ಆದರೆ ಕಷ್ಟಪಟ್ಟು ದುಡಿಯುವ ರೈತರು ಸಾಲದ ಹೊರೆಯಿಂದ ನಲುಗಿದ್ದರು. ಈ ರಾಜ್ಯ, ನೆಲ ತನ್ನ ಗುರುತಿಗಾಗಿ ಹಂಬಲಿಸುತ್ತಿದೆ ಎಂದ ಸೊರೆನ್ ಹೇಳಿದರು.
ಕೋರೊನಾ ಲಾಕ್ಡೌನ್ ಸಮಯದಲ್ಲಿ ತಮ್ಮ ಸರ್ಕಾರವು ದೇಶದ ವಿವಿಧ ಭಾಗಗಳಿಂದ ತಮ್ಮ ರಾಜ್ಯದ ವಲಸೆ ಕಾರ್ಮಿಕರನ್ನು ಮರಳಿ ತಂದಿರುವ ವಿಚಾರವನ್ನು ಕೂಡ ಪ್ರಸ್ತಾಪಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಮತ್ತು ಆರೋಗ್ಯ ಸೌಲಭ್ಯವನ್ನು ಸುಧಾರಿಸಲು ಕೆಲಸ ಮಾಡಿದ್ದೇವೆ. ಇಡೀ ದೇಶಕ್ಕೆ ಆಮ್ಲಜನಕ ಪೂರೈಸುವ ಮೊದಲ ರಾಜ್ಯವಾಗಿದೆ ಎಂದು ಹೇಳಿದರು.
ಬಡವರು, ವಂಚಿತರು ಮತ್ತು ಶೋಷಿತ ವರ್ಗಗಳಿಗೆ ಸಾಮಾಜಿಕ ಭದ್ರತೆಯನ್ನು ನೀಡದ ಹೊರತು. ಅವರಿಗೆ ಆಹಾರ, ಬಟ್ಟೆ ಮತ್ತು ವಸತಿಗಳು ಸಿಗದ ಹೊರತು, ಯಾವುದೇ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಸೊರೆನ್ ಹೇಳಿದರು. ಉಚಿತ ವಿದ್ಯುತ್ ಸೌಲಭ್ಯ, ಪಿಂಚಣಿ ನೀಡುವ ತಮ್ಮ ಸರ್ಕಾರದ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ತಮ್ಮ ಸರ್ಕಾರ 2 ಲಕ್ಷ ರೂಪಾಯಿವರೆಗೆ ಸಾಲ ಮನ್ನಾ ಮಾಡಿದೆ ಎಂದು ಹೇಳಿದರು.
ಮಹಿಳೆಯರಿಗಾಗಿ ತಮ್ಮ ಸರ್ಕಾರ 'ಮೈಯಾನ್ ಸಮ್ಮಾನ್ ಯೋಜನೆ', 'ಫೂಲ್ ಜಾನೋ ಆಶೀರ್ವಾದ್ ಅಭಿಯಾನ' ಮತ್ತು 'ಸಾವಿತ್ರಿಬಾಯಿ ಫುಲೆ ಕಿಶೋರಿ ಸಮೃದ್ಧಿ ಯೋಜನೆ'ಗಳನ್ನು ಜಾರಿ ಮಾಡಿದೆ ಎಂದು ಹೇಳಿದರು.












Click it and Unblock the Notifications