ಜೈವಿಕ ತ್ಯಾಜ್ಯ ಗುಡ್ಡೆ ಹಾಕೋದ್ರಲ್ಲಿ ಕರ್ನಾಟಕ ನಂ.1
ನವದೆಹಲಿ, ಏ. 21: ಬೇಡದ ಕಾರಣಕ್ಕೆ ನಮ್ಮ ರಾಜ್ಯ ಪ್ರಥಮ ಸ್ಥಾನ ಪಡೆದುಕೊಂಡಿದೆ. ದೇಶದ ಜೈವಿಕ ತ್ಯಾಜ್ಯ ಉತ್ಪಾದನೆಯಲ್ಲಿ ಕರ್ನಾಟಕವೇ ನಂ.1. ನಮ್ಮ ರಾಜ್ಯದಲ್ಲಿ ದಿನವೊಂದಕ್ಕೆ 83,614 ಕೆಜಿ ಜೈವಿಕ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಪಕ್ಕದ ಮಹಾರಾಷ್ಟ್ರ 65,660 ಕೆಜಿ ಜೈವಿಕ ತ್ಯಾಜ್ಯ ಹೊರ ಹಾಕುತ್ತದೆ.
ಲೋಕಸಭೆಯಲ್ಲಿ ಈ ಆಘಾತಕಾರಿ ಮಾಹಿತಿಯನ್ನು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಿಡುಗಡೆಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಜೈವಿಕ ತ್ಯಾಜ್ಯ ಹೊರಹಾಕುವ ಪ್ರಮಾಣ ಶೇ. 16 ರಷ್ಟು ಏರಿಕೆ ಕಂಡಿದೆ.[ಮಾರ್ಕೆಟ್ ನಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ]

ಮಾರಕ ರೋಗಗಳಿಗೆ ಕಾರಣ
ಮಂಡೂರು ಕಸ ವಿಲೇವಾರಿ ಸಂಬಂಧ ಇಡೀ ರಾಜ್ಯದಲ್ಲೇ ಗೊಂದಲ ಏರ್ಪಟ್ಟಿತ್ತು. ರಾಜ್ಯದಲ್ಲಿ ಇನ್ನೂ ಸಮರ್ಪಕ ರೀತಿಯ ಕಸ ವಿಲೇವಾರಿ ಘಟಕಗಳು ನಿರ್ಮಾಣವಾಗದಿರುವುದು ತೀವ್ರತೆರನಾದ ಹೆಚ್ಚಳಕ್ಕೆ ಕಾರಣವಾಗಿದೆ.
ಉಳಿದ ಕಸದಂತೆ ಇದು ಕೇವಲ ವಾಸನೆಯನ್ನು ಮಾತ್ರ ಬೀರಲ್ಲ. ಮಾರಕ ರೋಗಗಳಿಗೂ ಕಾರಣವಾಗಬಹುದು. ಹೆಸರೇ ಗೊತ್ತಿಲ್ಲದ ರೋಗ ಬಂದು ಸಾವಿಗೀಡಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. [ಮಂಡೂರು ಕಸದ ಗಲಾಟೆ ಯಾಕಾಗಿ?]
ಇಡೀ ದೇಶದಲ್ಲಿ ಪ್ರತಿದಿನ 4,84,271 ಕೆಜಿ ಜೈವಿಕ ತ್ಯಾಜ್ಯ ಹೊರಹಾಕಲಾಗುತ್ತದೆ. ಇದರಲ್ಲಿ ನಮ್ಮ ಪಾಲೇ ಬಹುದೊಡ್ಡದು. ಜೈವಿಕ ತ್ಯಾಜ್ಯ ತಡೆ ಸಂಬಂಧ ಕಾನೂನುಗಳಿದ್ದರೂ ಅವುಗಳ ಸಮರ್ಪಕ ಅನುಷ್ಠಾನ ಕೊರತೆ ಕಾಡುತ್ತಿದೆ. ಕಾನೂನು ಉಲ್ಲಂಘನೆ ಸಂಬಂಧ ಕರ್ನಾಟಕವೊಂದರಲ್ಲೇ 1.233 ಪ್ರಕರಣಗಳು ದಾಖಲಾಗಿವೆ. ಕಣ್ಣಿಗೆ ಕಂಡಿದ್ದು ಇಷ್ಟು ಕಾಣದಿದ್ದದ್ದು ಅದೆಷ್ಟೋ?
ರಾಜ್ಯದ ಸರ್ಕಾರಗಳಿಗಹೆ ಜೈವಿಕ ತ್ಯಾಜ್ಯ ತಡೆ ಸಂಬಂಧ ಸ್ಪಷ್ಟ ನಿರ್ದೇಶನಗಳು ಬಂದಿದೆ ಅಂದುಕೊಂಡರೂ ಅದರ ನಿರ್ವಹಣೆಯಲ್ಲಿ ಯಾವ ಬೆಳವಣಿಗೆ ಕಂಡುಬಂದಂತೆ ತೋರುತ್ತಿಲ್ಲ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನಗಳನ್ನು ನೀಡಿದ್ದರೂ ಅವುಗಳ ಪಾಲನೆಯಾಗುತ್ತಿಲ್ಲ. ಘೋರ ಅಪಾಯ ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.
ಜೈವಿಕ ತ್ಯಾಜ್ಯ ಎಂದರೇನು?
ಜೈವಿಕ ತ್ಯಾಜ್ಯಕ್ಕೆ ನಿರ್ದಿಷ್ಟ ವಿವರಣೆ ನೀಡಲು ಅಸಾಧ್ಯವಾದರೂ, ಆಸ್ಪತ್ರೆಗಳಿಂದ ಹೊರಬರುವ ಕಸ, ಅಂದರೆ ರೋಗಿಗಳಿಗೆ ನೀಡುವ ಚುಚ್ಚುಮದ್ದು, ಬ್ಯಾಂಡೆಜ್ ಬಟ್ಟೆಗಳು, ಕೆಲ ಔಷಧಿ ತಯಾರಿಕಾ ಕಾರ್ಖಾನೆಗಳು ಹೊರಹಾಕುವ ತ್ಯಾಜ್ಯಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು.












Click it and Unblock the Notifications