ಚಳಿಗಾಲದ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಸೂದೆ ಮಂಡನೆ?
Recommended Video

ಅಯೋಧ್ಯೆ, ನವೆಂಬರ್ 24: ಲೋಕಸಭೆ ಚುನಾವಣೆ ಹತ್ತಿರ ಬರುತ್ತಲೂ ರಾಮಮಂದಿರ ಕೂಗು ಜೋರಾಗಿ ಕೇಳಿಬರುತ್ತಿದೆ. ಬಿಜೆಪಿಯ ಮಾತೃ ಸಂಸ್ಥೆ ಆರ್ಎಸ್ಎಸ್ ಸೇರಿದಂತೆ ಮಿತ್ರ ಪಕ್ಷಗಳು ಸಹ ಬಿಜೆಪಿ ಮೇಲೆ ರಾಮಮಂದಿರ ನಿರ್ಮಾಣಕ್ಕೆ ಭಾರಿ ಒತ್ತಡ ಹೇರುತ್ತಿವೆ.
ಇಂದು ಅಯೋಧ್ಯೆಯಲ್ಲಿ ಧರ್ಮಸಭೆ ನಡೆಯುತ್ತಿದ್ದು 2 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಇದರಲ್ಲಿ ಭಾಗವಹಿಸಿ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಸಹ ಧರ್ಮಸಭೆಯಲ್ಲಿ ಭಾಗವಹಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಮುಂಚೆ ರಾಮಮಂದಿರ ನಿರ್ಮಿಸಬೇಕು, ಕೋರ್ಟ್ ತೀರ್ಪಿಗೆ ಕಾಯದೆ ರಾಮಮಂದಿರಕ್ಕಾಗಿ ಪ್ರತ್ಯೇಕ ಮಸೂದೆ ರಚಿಸಬೇಕು ಎಂದು ಇಂದು ಸೇರಿರುವ ಧರ್ಮಸಭೆಯಲ್ಲಿ ನಿರ್ಣಯಿಸುವ ಸಾಧ್ಯತೆ ದಟ್ಟವಾಗಿದೆ.

ಹಿಂದೂ ಮತಗಳನ್ನು ಕಳೆದುಕೊಳ್ಳುವ ಭೀತಿ
ಕೇಂದ್ರ ಸರ್ಕಾರ ಸಹ ತನ್ನ ಈ ಅವಧಿಯ ಕೊನೆಯ ಚಳಿಗಾಲದ ಅಧಿವೇಶನದಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದಂತೆ ಮಸೂದೆಯನ್ನು ರಚಿಸುವ ಬಗ್ಗೆ ಗಂಭೀರವಾಗಿ ಚಿಂತಿಸಿದೆ. ಮಸೂದೆ ರಚಿಸಿದೇ ಹೋದಲ್ಲಿ ತನ್ನ ಬತ್ತಳಿಕೆಯ ಹಿಂದೂ ಮತಗಳನ್ನು ಕಳೆದುಕೊಳ್ಳುವ ಭಯ ಸಹ ಬಿಜೆಪಿಗೆ ಇದೆ.

ಸುಗ್ರೀವಾಜ್ಞೆ ಹೊರಡಿಸಲು ಬಿಜೆಪಿ ಸಂಸದರ ಪಟ್ಟು
ಇದಕ್ಕೆ ತಕ್ಕಂತೆ ಬಿಜೆಪಿ ಸಂಸದ ರವೀಂದ್ರಾ ಕುಶ್ವಾನಾ ಅವರು, ರಾಮಮಂದಿರ ನಿರ್ಮಿಸುವ ಸಲುವಾಗಿ 'ರಾಮ್ ಟೆಂಪಲ್' ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದಿದ್ದಾರೆ. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಆಗದಿದ್ದರೆ ಸುಗ್ರೀವಾಜ್ಞೆಗೆ ಬೇಡಿಕೆ ಇಡುತ್ತೇವೆ ಎಂದಿದ್ದಾರೆ.

'ಮಸೀದಿ ಒಡೆದವರಿಗೆ ಮಸೂದೆ ಮಾಡಲಾಗುವುದಿಲ್ಲವೇ'
ಇದಕ್ಕೆ ಸರಿಯಾಗಿ ಶಿವಸೇನೆಯ ಹಿರಿಯ ಮುಖಂಡ ರಾವತ್ ಅವರು, 17 ನಿಮಿಷದಲ್ಲಿ ಮಸೀದಿ ಒಡೆದವರಿಗೆ ರಾಮಮಂದಿರಕ್ಕಾಗಿ ಮಸೂದೆ ತರಲು ಆಗುವುದಿಲ್ಲವೇ ಎಂದು ಬಿಜೆಪಿ ಸರ್ಕಾರವನ್ನು ಕುಟುಕಿದ್ದಾರೆ.

ಡಿಸೆಂಬರ್ 11 ರಿಂದ ಸಂಸತ್ ಚಳಿಗಾಲದ ಅಧಿವೇಶನ
ಡಿಸೆಂಬರ್ 11 ರಂದು ಸಂಸತ್ನ ಚಳಿಗಾಲದ ಅಧಿವೇಶನದ ಆರಂಭವಾಗಲಿದೆ. ರಾಮ್ ಟೆಂಪಲ್ ಮಸೂದೆಯನ್ನು ಕೇಂದ್ರ ಮಂಡಿಸುತ್ತದೆಯೇ ಅದಕ್ಕೆ ಯಾವ ಪಕ್ಷ ಬೆಂಬಲ ನೀಡುತ್ತದೆ, ಯಾವುದು ನೀಡುವುದಿಲ್ಲ, ಮಸೂದೆ ಏನಾಗುತ್ತದೆ ಕಾದು ನೋಡಬೇಕು.











Click it and Unblock the Notifications