ಭಾರತದಲ್ಲಿ ಮುಸ್ಲಿಮರು ಸುರಕ್ಷಿತ: ಮೋದಿ ಕುರಿತ ಭುಟ್ಟೊ ಹೇಳಿಕೆಗೆ ಸೂಫಿ ಕೌನ್ಸಿಲ್ ಖಂಡನೆ
ಜೈಪುರ, ಡಿಸೆಂಬರ್ 17: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರ ಹೇಳಿಕೆಯನ್ನು ಅಖಿಲ ಭಾರತ ಸೂಫಿ ಕೌನ್ಸಿಲ್ ಅಧ್ಯಕ್ಷ ನಾಸಿರುದ್ದೀನ್ ಚಿಸ್ತಿ ಅವರು ಶನಿವಾರ ಖಂಡಿಸಿದ್ದಾರೆ.
ಬಿಲಾವಲ್ ಬಳಸಿದ ಭಾಷೆ ಅವರ ಸ್ಥಾನದ ಗೌರವಕ್ಕೆ ಮಾತ್ರವಲ್ಲದೇ, ಇಡೀ ಪಾಕಿಸ್ತಾನದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.
ನಮ್ಮ ಪ್ರಧಾನಿ ಮತ್ತು ನಮ್ಮ ತಾಯ್ನಾಡಿನ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವರು ಬಳಸಿರುವ ದ್ವೇಷಪೂರಿತ ಭಾಷೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

'ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಸಾಯಲಿಲ್ಲ. ಆದರೆ, ಪಾಕಿಸ್ತಾನ ಸರ್ಕಾರದ ಮೂಗಿನ ಕೆಳಗೆ ಅವಿತುಕೊಂಡಿದ್ದ ಆತನನ್ನು ಅಮೇರಿಕನ್ ಪಡೆಗಳು ಕೊಂದವು. ಇದನ್ನು ಬಿಲಾವಲ್ ಭುಟ್ಟೋ ಮರೆತಿದ್ದಾರೆ' ಎಂದು ಚಿಸ್ತಿ ಟೀಕಿಸಿದ್ದಾರೆ.
ತಮ್ಮ ಪಾಕಿಸ್ತಾನಿ ಸಹವರ್ತಿಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸುರಕ್ಷಿತ ಮತ್ತು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚಿಸ್ತಿ ಹೇಳಿದ್ದಾರೆ.
ಭಾರತವನ್ನು ತನ್ನ ಅಸ್ಥಿರ ದೇಶದೊಂದಿಗೆ ಬಿಲಾವಲ್ ಭುಟ್ಟೋ ಹೋಲಿಸಬಾರದು. ಏಕೆಂದರೆ ಭಾರತೀಯ ಸಂವಿಧಾನವು ಎಲ್ಲರಿಗೂ ಧರ್ಮದ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಎಂದು ತಿಳಿಸಿದ್ದಾರೆ.
ದೇಶದ ವಿವಿಧ ದರ್ಗಾಗಳ ಆಧ್ಯಾತ್ಮಿಕ ಮುಖ್ಯಸ್ಥರ ಸಂಘವಾಗಿ ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ ಅಸ್ತಿತ್ವಕ್ಕೆ ಬಂದಿದೆ.

ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ನೆರೆಯ ಪಾಕಿಸ್ತಾನ ಬೆಂಬಲವನ್ನು ನೀಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದರು. ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರವೆಂದು ಬಣ್ಣಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದರು. ಇದೇ ವೇಳೆ, ಆರ್ಎಸ್ಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.
'ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ, ಗುಜರಾತ್ನ ಕಟುಕ ಇನ್ನೂ ಬದುಕಿದ್ದಾನೆ. ಆತ ಭಾರತದ ಪ್ರಧಾನಿಯಾಗಿದ್ದಾನೆ' ಎಂದು ಭುಟ್ಟೊ ಹೇಳಿದ್ದರು.
ಭುಟ್ಟೊ ಹೇಳಿಕೆಗೆ ಭಾರತ ತಿರುಗೇಟು
ಬಿಲಾವಲ್ ಭುಟ್ಟೊ ಹೇಳಕೆಗೆ ತಿರುಗೇಟು ನೀಡಿರುವ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ,'ಭುಟ್ಟೊ ಹೇಳಿಕೆಗಳು ಪಾಕಿಸ್ಥಾನಕ್ಕೂ ಯೋಗ್ಯ ಅನ್ನಿಸದು. ಪಾಕಿಸ್ತಾನದ ವಿದೇಶಾಂಗ ಸಚಿವರು 1971 ರ ಈ ದಿನವನ್ನು ಮರೆತಿದ್ದಾರೆ. ಪಾಕಿಸ್ತಾನಿ ಆಡಳಿತಗಾರರು ಬಂಗಾಳಿಗಳು ಹಾಗೂ ಹಿಂದೂಗಳ ವಿರುದ್ಧ ನಡೆಸಿದ ನರಮೇಧಕ್ಕೆ ಸಾಕ್ಷಿಯಾದ ದಿನವಾಗಿದೆ. ದುರದೃಷ್ಟವಶಾತ್, ಪಾಕಿಸ್ತಾನಕ್ಕೆ ಯಾವುದೇ ಪಾಪಪ್ರಜ್ಞೆ ಇಲ್ಲ' ಎಂದು ತಿಳಿಸಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಬೆಂಬಲ ನೀಡುವವರ ಸಂಖ್ಯೆ ಎಚ್ಚುತ್ತಿದೆ. ಅವರನ್ನು ಹದ್ದುಬಸ್ತಿನಲ್ಲಿ ಇಡಲು ಸರ್ಕಾರಕ್ಕೆ ಆಗುತ್ತಿಲ್ಲ. ಈ ಸಮರ್ಥತೆಯನ್ನು ಮುಚ್ಚಿಕೊಳ್ಳಲು ಪಾಕಿಸ್ತಾನ ವಿದೇಶಾಂಗ ಸಚಿವ 'ಅನಾಗರಿಕೆ ಹೇಳಿಕೆ' ನೀಡುತ್ತಿದ್ದಾರೆ ಎಂದು ಹೇಳಿದೆ.
'ನ್ಯೂಯಾರ್ಕ್, ಮುಂಬೈ, ಪುಲ್ವಾಮಾ, ಪಠಾಣ್ಕೋಟ್ ಮತ್ತು ಲಂಡನ್ನಂತಹ ನಗರಗಳು ಪಾಕಿಸ್ತಾನ ಪ್ರಾಯೋಜಿತ, ಬೆಂಬಲಿತ ಮತ್ತು ಪ್ರಚೋದಿತ ಭಯೋತ್ಪಾದನೆಯ ಗಾಯದ ಗುರುತುಗಳನ್ನು ಹೊಂದಿವೆ. ಈ ಹಿಂಸಾಚಾರವು ಅವರ ವಿಶೇಷ ಭಯೋತ್ಪಾದಕ ವಲಯಗಳಿಂದ ಹೊರಹೊಮ್ಮಿದೆ. ಪ್ರಪಂಚದ ಎಲ್ಲಾ ಭಾಗಗಳಿಗೆ ರಫ್ತು ಮಾಡಿದೆ. ಮೇಕ್ ಇನ್ ಪಾಕಿಸ್ತಾನ್ ಭಯೋತ್ಪಾದನೆ ನಿಲ್ಲಬೇಕು' ಎಂದು ಭಾರತ ಒತ್ತಾಯಿಸಿದೆ.
ಲಖ್ವಿ, ಹಫೀಜ್ ಸಯೀದ್, ಮಸೂದ್ ಅಜರ್, ಸಾಜಿದ್ ಮಿರ್ ಮತ್ತು ದಾವೂದ್ ಇಬ್ರಾಹಿಂ ಅವರಂತಹ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ದೇಶ ಪಾಕಿಸ್ತಾನ. ಒಸಾಮಾ ಬಿನ್ ಲಾಡೆನ್ನನ್ನು ಹುತಾತ್ಮ ಎಂದು ವೈಭವೀಕರಿಸುವ ದೇಶ ಪಾಕಿಸ್ತಾನ ಎಂದು ಭಾರತ ವಾಗ್ದಾಳಿ ನಡೆಸಿದೆ.












Click it and Unblock the Notifications