ಮೋದಿ ಸರ್ಕಾರ ಮತ್ತೆ ಬರಲಿದೆ: ನಿತೀಶ್ ಕುಮಾರ್ ವಿಶ್ವಾಸ
ನವದೆಹಲಿ, ಮೇ 22: ನಾಳೆ ಪ್ರಕಟವಾಗಲಿರುವ ಚುನಾವಣೆ ಫಲಿತಾಂಶದಲ್ಲಿ ಎನ್ಡಿಎ ಮತ್ತೆ ಸರ್ಕಾರ ರಚಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡು ಮಹಾಘಟಬಂಧನದೊಂದಿಗೆ ಸೇರಿದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಬಳಿಕ ಮತ್ತೆ ಬಿಜೆಪಿಯೊಂದಿಗೆ ಕೈ ಜೋಡಿಸಿ ಬಿಹಾರದಲ್ಲಿ ಸರ್ಕಾರ ರಚಿಸಿತ್ತು. ಈ ಬಾರಿ ಅದು ಎನ್ಡಿಎ ಸರ್ಕಾರದ ಭಾಗವಾಗಲು ಬಯಸಿರುವುದಾಗಿ ನಿತೀಶ್ ಸುಳಿವು ನೀಡಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ನಿತೀಶ್ ಕುಮಾರ್, ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಸರ್ಕಾರದೊಂದಿಗೆ ಪ್ರಸ್ತಾಪಿಸಿದ್ದಾರೆ.

ಎಕ್ಸಿಟ್ ಪೋಲ್ನಲ್ಲಿ ಏನೇ ಫಲಿತಾಂಶ ಬಂದಿರಲಿ, ನರೇಂದ್ರ ಮೋದಿ ಅವರ ಸರ್ಕಾರ ಮರಳಿ ಬರುವುದರ ಬಗ್ಗೆ ನಾವು ಆಶಾವಾದ ಹೊಂದಿದ್ದೇವೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಮಿತ್ರಪಕ್ಷಗಳು ಎನ್ಡಿಎ ಸರ್ಕಾರದ ಭಾಗವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯೊಂದಿಗೆ ತಮಿಳುನಾಡಿನಲ್ಲಿ ಹೊಂದಾಣಿಕೆ ಮಾಡಿಕೊಂಡಿರುವ ಎಐಎಡಿಎಂಕೆ ಕೂಡ ಎನ್ಡಿಎ ಸರ್ಕಾರದ ಭಾಗವಾಗಲು ಬಯಸಿದೆ.
ಎಕ್ಸಿಟ್ ಪೋಲ್ಗಳು ದೇಶದ ಜನರ ಮನೋಭಾವವನ್ನು ಪ್ರತಿಬಿಂಬಿಸುತ್ತಿದೆ. ಇದರ ಅರ್ಥ ಅವರು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಎರಡನೆಯ ಅವಧಿಗೆ ಬಯಸಿದ್ದಾರೆ ಎಂದು ಎಂಬುದಾಗಿ ತಮಿಳುನಾಡು ಉಪಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಹೇಳಿದ್ದಾರೆ.
ಮೇ 23ರಂದು ಫಲಿತಾಂಶ ಬಂದ ಬಳಿಕ ನಮ್ಮ ಕಚೇರಿಯಲ್ಲಿ ಸಭೆ ನಡೆಸಲಾಗುತ್ತದೆ. ಇಲ್ಲಿ ಎನ್ಡಿಎ ಸರ್ಕಾರದೊಂದಿಗೆ ಸೇರಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications