ಈಶಾನ್ಯದಲ್ಲಿ ಬಿಜೆಪಿಗೆ ಆಘಾತ: ಟಿಕೆಟ್ ಕೈತಪ್ಪುತ್ತಿದ್ದಂತೆ ಪಕ್ಷ ತೊರೆದ ನಾಯಕರು
Recommended Video

ಇಟಾನಗರ, ಮಾರ್ಚ್ 20: ಲೋಕಸಭೆ ಚುನಾವಣೆಗೂ ಮುನ್ನ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯುಂಟಾಗಿದೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯ ಇಬ್ಬರು ಸಚಿವರು ಮತ್ತು ಆರು ಮಂದಿ ಶಾಸಕರು ಮೇಘಾಲಯ ಮುಖ್ಯಮಂತ್ರಿ ಕೋನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಸೇರ್ಪಡೆಯಾಗಿದ್ದಾರೆ.
ಅತ್ತ ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಸೇರಿದಂತೆ ಮೂವರು ನಾಯಕರು ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜರ್ಪುಮ್ ಗಾಮ್ಲಿನ್, ರಾಜ್ಯ ಗೃಹಸಚಿವ ಕುಮಾರ್ ವಾಯಿ ಮತ್ತು ಪ್ರವಾಸೋದ್ಯಮ ಸಚಿವ ಜರ್ಕಾರ್ ಗಾಮ್ಲಿನ್ ಹಾಗೂ ಇತರೆ ಹಾಲಿ ಶಾಸಕರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ಇರುವುದು ಕಮಲ ಪಕ್ಷದಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

60 ಸದಸ್ಯರ ಅರುಣಾಚಲಪ್ರದೇಶ ವಿಧಾನಸಭೆಗೆ ಬಿಜೆಪಿಯ ಸಂಸದೀಯ ಮಂಡಳಿ 54 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿತ್ತು. ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 11ರಂದು ಲೋಕಸಭೆ ಚುನಾವಣೆಯ ಜತೆಗೇ ವಿಧಾನಸಭೆ ಚುನಾವಣೆಯೂ ನಡೆಯಲಿದೆ.
'ಸುಳ್ಳು ಭರವಸೆಗಳಿಂದಾಗಿ ಬಿಜೆಪಿ ಜನರ ಕಣ್ಣುಗಳಲ್ಲಿದ್ದ ಹಿಂದಿನ ಬೆಳಗನ್ನು ಕಳೆದುಕೊಂಡಿದೆ. ಈ ಚುನಾವಣೆಯಲ್ಲಿ ನಾವು ಹೋರಾಟ ಮಾಡಲಿರುವುದು ಮಾತ್ರವಲ್ಲ, ರಾಜ್ಯದಲ್ಲಿ ಎನ್ಪಿಪಿ ಸರ್ಕಾರವನ್ನು ರಚಿಸಲಿದ್ದೇವೆ' ಎಂದು ಕುಮಾರ್ ವಾಯಿ ತಿಳಿಸಿದ್ದಾರೆ.
ಒಟ್ಟು ಎಂಟು ಶಾಸಕರ ಜತೆಗೆ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶದ ಮತ್ತೊಬ್ಬ ಶಾಸಕ ಹಾಗೂ ಕೇಸರಿ ಪಡೆಯ ಇತರೆ 19 ಮುಖಂಡರು ಕೂಡ ಎನ್ಪಿಪಿ ಕೈಹಿಡಿದಿದ್ದಾರೆ.
ಮೇಘಾಲಯದಲ್ಲಿ ಬಿಜೆಪಿ ಜತೆಗೂಡಿ ಆಡಳಿತ ನಡೆಸುತ್ತಿರುವ ಎನ್ಪಿಪಿ, ಅರುಣಾಚಲ ಪ್ರದೇಶದ ಚುನಾವಣೆಯಲ್ಲಿ ಎಲ್ಲ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ತ್ರಿಪುರಾದಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಸುಬಾಲ್ ಭೌಮಿಕ್, ಹಿರಿಯ ನಾಯಕ ಪ್ರಕಾಶ್ ದಾಸ್ ಮತ್ತು ಬಿಜೆಪಿ ಕಿಸಾನ್ ಮೋರ್ಚಾದ ಉಪಾಧ್ಯಕ್ಷ ಪ್ರೇಮ್ತೋಷ್ ದೇವನಾಥ್ ಮಂಗಳವಾರ ಕಾಂಗ್ರೆಸ್ ಸೇರಿಕೊಂಡರು.
'ಇಂದು ಐತಿಹಾಸಿಕ ದಿನ. ಅವರು ಪಕ್ಷಕ್ಕೆ ಸೇರಿಕೊಳ್ಳುತ್ತಿರುವುದು ಕುಟುಂಬದ ಸದಸ್ಯರು ಅವರದೇ ಮನೆಗೆ ಬಂದಂತೆ ಆಗಿದೆ' ಎಂದು ಕಾಂಗ್ರೆಸ್ ತ್ರಿಪುರಾ ಘಟಕದ ಅಧ್ಯಕ್ಷ ಪ್ರದ್ಯೋತ್ ಕಿಶೋರ್ ದೇವವರ್ಮನ್ ಹೇಳಿದ್ದಾರೆ.
ಈ ಮೂವರೂ ನಾಯಕರು ಮೂಲತಃ ಕಾಂಗ್ರೆಸ್ನಿಂದಲೇ ಬಂದವರಾಗಿದ್ದಾರೆ.












Click it and Unblock the Notifications