ಕೇಂದ್ರದ ವಿರುದ್ಧ 'ಭಾರತ ರತ್ನ' ಭುಪೇನ್ ಹಜಾರಿಕಾ ಪುತ್ರನ ಅಸಮಾಧಾನ
ನವದೆಹಲಿ, ಫೆಬ್ರವರಿ 12: ಖ್ಯಾತ ಸಂಗೀತಗಾರ ಭುಪೇನ್ ಹಜಾರಿಕಾ ಅವರನ್ನು ಹಿಂದಿನ ಸರ್ಕಾರ ಕಡೆಗಣಿಸಿತ್ತು. ಅವರನ್ನು ಎನ್ಡಿಎ ಸರ್ಕಾರ ನೆನಪಿಸಿಕೊಂಡು ಭಾರತ ರತ್ನ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟೂರು ಅಸ್ಸಾಂನಲ್ಲಿ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಭುಪೇನ್ ಅವರ ಮಗ ತೇಜ್ ಹಜಾರಿಕಾ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ತಂದೆಗೆ ಭಾರತ ರತ್ನ ನೀಡುವ ಸರ್ಕಾರದ ನಡೆಯನ್ನು ಅವರು 'ಅಲ್ಪಕಾಲ ಬಾಳುವ ಅಗ್ಗದ ಪ್ರಚಾರ ತಂತ್ರ' ಎಂದು ಕಿಡಿಕಾರಿದ್ದಾರೆ.
ಪೌರತ್ವ (ತಿದ್ದುಪಡಿ) ಮಸೂದೆ ವಿರುದ್ಧ ಹರಿಹಾಯ್ದಿರುವ ಅವರು, ವಾಸ್ತವವಾಗಿ ಈ ಮಸೂದೆ ತಂದೆಯವರ ಆಶಯಗಳನ್ನು ಕಡೆಗಣಿಸುವಂತಿದೆ. ಇದು ಜನಪರವಲ್ಲದೆ ಇರುವುದು ನೋವಿನ ಸಂಗತಿ. ವಾಸ್ತವವಾಗಿ ಅದು ಅವರು ತಮ್ಮ ಹೃದಯಗಳ ಹೃದಯಗಳಲ್ಲಿ ನಂಬಿದ್ದ ತತ್ವಗಳಿಗೆ ಸಂಪೂರ್ಣ ತದ್ವಿರುದ್ಧವಾಗಿದೆ ಎಂದು ಅಮೆರಿಕದಲ್ಲಿ ನೆಲೆಸಿರುವ ಅವರು ಆರೋಪಿಸಿದ್ದಾರೆ.

'ಭಾರತ ರತ್ನಗಳು ಮತ್ತು ಅತಿ ಉದ್ದನೆಯ ಸೇತುವೆಗಳು ಅಗತ್ಯವಾದರೂ, ದೇಶದ ನಾಗರಿಕರ ನಡುವೆ ಅವು ಶಾಂತಿ ಮತ್ತು ಸಮೃದ್ಧಿಯನ್ನು ಬಿತ್ತಲಾರವು. ಕೇವಲ ಜನಪ್ರಿಯ ಕಾನೂನುಗಳು ಮತ್ತು ದೂರದೃಷ್ಟಿಯ ನಾಯಕತ್ವದಿಂದ ಮಾತ್ರ ಅದು ಸಾಧ್ಯ. ನನ್ನ ತಂದೆಗೆ ನೀಡುವ ಭಾರತ ರತ್ನವನ್ನು ಸ್ವೀಕರಿಸುತ್ತೀರೋ ಅಥವಾ ಇಲ್ಲವೋ ಎಂದು ಈಗ ಅನೇಕ ಮಾಧ್ಯಮಗಳು ನನ್ನನ್ನು ಪ್ರಶ್ನಿಸುತ್ತಿವೆ. ಅದಕ್ಕೆ ಇಲ್ಲಿ ಉತ್ತರ ನೀಡುತ್ತಿದ್ದೇನೆ.
ಎ) ನನಗೆ ಇದುವರೆಗೂ ಈ ಸಂಬಂಧ ಯಾವುದೇ ಆಹ್ವಾನ ಬಂದಿಲ್ಲ. ಹೀಗಾಗಿ ತಿರಸ್ಕರಿಸುವ ವಿಷಯವೇ ಎದುರಾಗುವುದಿಲ್ಲ.
ಬಿ) ಇಂತಹ ರಾಷ್ಟ್ರೀಯ ಮಾನ್ಯತೆಯನ್ನು ನೀಡುವುದು ಮತ್ತು ಪಡೆದುಕೊಳ್ಳುವುದು ಬಹಳ ಮುಖ್ಯವಾದದ್ದು ಎಂದು ಕೇಂದ್ರ ಸರ್ಕಾರ ಬಿಂಬಿಸಿಕೊಳ್ಳುವುದು ಅಲ್ಪ ಕಾಲಾವಧಿಯ ಅಗ್ಗದ ಪುಳಕದ ಪ್ರದರ್ಶನವಾಗುತ್ತದೆ ಎಂದು ಹಜಾರಿಕಾ 'ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಗೆ ಇಮೇಲ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
'ಭುಪೇನ್ ಅವರ ಕುಟುಂಬ ಈಗಾಗಲೇ ಹೃದಯಪೂರ್ವಕವಾಗಿ ಪುರಸ್ಕಾರವನ್ನು ಸ್ವೀಕರಿಸಿದೆ ಮತ್ತು ಅದನ್ನು ಸಾರ್ವಜನಿಕವಾಗಿ ಸ್ವಾಗತಿಸಿದೆ. ಅದನ್ನು ತಿರಸ್ಕರಿಸುವ ಮೂಲಕ ತಂದೆಯವರು ಈ ಗೌರವಕ್ಕೆ ಅರ್ಹರಲ್ಲ ಎಂದು ಮಗ ಹೇಳುತ್ತಿದ್ದಾರೆಯೇ? ಅಮೆರಿಕದಲ್ಲಿ ಕುಳಿತು ಅವರೇಕೆ ಈ ಮಸೂದೆ ಬಗ್ಗೆ ಮಾತನಾಡುತ್ತಿದ್ದಾರೆ?' ಎಂದು ಅಸ್ಸಾಂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹೃಷಿಕೇಶ್ ಗೋಸ್ವಾಮಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಗೃಹಸಚಿವಾಲಯದ ಅಧಿಕಾರಿಗಳು ನಿರಾಕರಿಸಿದ್ದಾರೆ. ಹಜಾರಿಕಾ ಅವರ ಕುಟುಂಬದಿಂದ ಇನ್ನೂ ಔಪಚಾರಿಕ ಸಂವಹನ ಬರಬೇಕಿದೆ ಎಂದು ತಿಳಿಸಿದ್ದಾರೆ.












Click it and Unblock the Notifications