ಪಶ್ಚಿಮ ಬಂಗಾಳದಲ್ಲಿ 34,000 ಕೆಜಿ ಸ್ಫೋಟಕ ವಶ, 100 ಜನರ ಬಂಧನ: ಪೊಲೀಸರು
ಕೋಲ್ಕತ್ತಾ, ಮೇ. 23: ಪಶ್ಚಿಮ ಬಂಗಾಳದ ಗ್ರಾಮಾಂತರದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕಗಳು ಮತ್ತು ನಿಷೇಧಿತ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಉತ್ಪಾದನಾ ಕಾರ್ಖಾನೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಕನಿಷ್ಠ 100 ಜನರನ್ನು ಬಂಧಿಸಿದ್ದಾರೆ ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸ್ಫೋಟಕಗಳು ಮತ್ತು ನಿಷೇಧಿತ ಪಟಾಕಿಗಳನ್ನು ವಶಪಡಿಸಿಕೊಂಡ ಪೊಲೀಸರು ಒಟ್ಟು 132 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸೋಮವಾರದಿಂದ ಪ್ರಾರಂಭವಾದ ದಾಳಿ ಸೋಮವಾರ ಮಧ್ಯರಾತ್ರಿ ಮತ್ತು ಮಂಗಳವಾರ ವಿವಿಧ ಸ್ಥಳಗಳಲ್ಲಿ ಮುಖ್ಯವಾಗಿ ನಾಡಿಯಾ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಮುಂದುವರೆದವು ಎಂದು ಹೇಳಿದ್ದಾರೆ.

"ಇದುವರೆಗೆ ನಾವು ಸುಮಾರು 34,000 ಕೆಜಿ ಸ್ಫೋಟಕಗಳನ್ನು ಮತ್ತು ನಿಷೇಧಿತ ಪಟಾಕಿಗಳನ್ನು ವಶಪಡಿಸಿಕೊಂಡಿದ್ದೇವೆ. ಅವುಗಳನ್ನು ಸಂಗ್ರಹಿಸಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಆರೋಪದಲ್ಲಿ ಕನಿಷ್ಠ 100 ಜನರನ್ನು ಬಂಧಿಸಿದ್ದೇವೆ. ಕಳೆದ ರಾತ್ರಿ ವಿವಿಧ ಜಿಲ್ಲೆಗಳಲ್ಲಿ ಮುಖ್ಯವಾಗಿ ನಾಡಿಯಾ, ದಕ್ಷಿಣ ಮತ್ತು ಉತ್ತರ 24 ಪರಗಣಗಳಲ್ಲಿ ನಡೆಸಿದ ದಾಳಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ವಿವಿಧ ಜಿಲ್ಲೆಗಳ ಪೊಲೀಸರಿಗೆ ಸ್ಫೋಟಕಗಳು ಮತ್ತು ಪಟಾಕಿಗಳನ್ನು ವಶಪಡಿಸಿಕೊಂಡ ಬಗ್ಗೆ ವರದಿಗಳನ್ನು ಮೇ 29 ರೊಳಗೆ ರಾಜ್ಯ ಸಚಿವಾಲಯಕ್ಕೆ ಸಲ್ಲಿಸಲು ತಿಳಿಸಲಾಗಿದೆ. ಎಂಟು ದಿನಗಳ ಅವಧಿಯಲ್ಲಿ ಬಂಗಾಳದ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಪಟಾಕಿ ತಯಾರಿಕಾ ಘಟಕಗಳಲ್ಲಿ ಸ್ಫೋಟದ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಈ ದಾಳಿಗಳನ್ನು ನಡೆಸಲಾಯಿತು.

ಬಂಗಾಳದಲ್ಲಿ ಮೂರು ಸ್ಫೋಟಗಳು ಮತ್ತು ರಾಜ್ಯದ ಗೋಡೌನ್ನಲ್ಲಿ ಸಂಭವಿಸಿದ ವಿನಾಶಕಾರಿ ಅಗ್ನಿ ಅವಘಡದಲ್ಲಿ 17 ಜನರು ಸಾವನ್ನಪ್ಪಿದ್ದಾರೆ. ಮೇ 16 ರಂದು ಪುರ್ಬಾ ಮೇದಿನಿಪುರದ ಎಗ್ರಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಪ್ರಮುಖ ಆರೋಪಿ ಸೇರಿದಂತೆ 12 ಜನರು ಸಾವನ್ನಪ್ಪಿದ್ದರೆ, ದಕ್ಷಿಣ 24 ಪರಗಣದ ಬಡ್ಜ್ ಬಡ್ಜ್ನಲ್ಲಿ ಸೋಮವಾರ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಅದೇ ದಿನ ಬಿರ್ಭಮ್ ಜಿಲ್ಲೆಯ ದುಬ್ರಾಜ್ಪುರದಲ್ಲಿ ಮತ್ತೊಂದು ಸ್ಫೋಟ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮಂಗಳವಾರ ಮಾಲ್ಡಾ ಜಿಲ್ಲೆಯ ಕಾರ್ಬೈಡ್ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು, ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ್ ಪ್ರದೇಶದ ಹರಾಲ್ನಲ್ಲಿರುವ 'ಬಾಜಿ (ಪಟಾಕಿ) ಬಜಾರ್' ಅನ್ನು ಮುಚ್ಚಲು ನಿರ್ಧರಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬಾಜಿ (ಪಟಾಕಿ) ಬಜಾರ್ ಅಲ್ಲಿನ ಎಲ್ಲಾ ವ್ಯಾಪಾರಿಗಳು ತಮ್ಮ ಬಳಿ ಇರುವ ಎಲ್ಲಾ ಕಚ್ಚಾ ಸಾಮಗ್ರಿಗಳನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಂದು ಒಪ್ಪಿಸುವಂತೆ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ಸಚಿವಾಲಯದಲ್ಲಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಲಿದ್ದು, ಪಟಾಕಿ ಉತ್ಪಾದನಾ ಘಟಕಗಳ ಕ್ಲಸ್ಟರ್ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.












Click it and Unblock the Notifications