ಉತ್ತರ ಪ್ರದೇಶ ಚುನಾವಣೆ: 'ಎಸ್ಪಿ'ಗೂ ಮೊದಲೇ ಮೈತ್ರಿ ಘೋಷಿಸಿದ ಕಾಂಗ್ರೆಸ್
ಲಕ್ನೋ, ಜನವರಿ 17: ಬಹು ನಿರೀಕ್ಷಿತ ಉತ್ತರ ಪ್ರದೇಶ ಚುನಾವಣೆಯಲ್ಲಿ ಕೊನೆಗೂ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಅಂತಿಮವಾಗಿದೆ. ಈ ಕುರಿತು ಗುಲಾಬ್ ನಬಿ ಅಜಾದ್ ಹೇಳಿಕೆ ನೀಡಿದ್ದು ಕಾಂಗ್ರೆಸ್ ಮತ್ತು ಎಸ್ಪಿ ಒಟ್ಟಾಗಿ ಚುನಾವಣೆ ಎದುರಿಸಲಿವೆ ಎಂದಿದ್ದಾರೆ. ಮಾತ್ರವಲ್ಲ ಮಂದಿನ ಐದು ದಿನಗಳಲ್ಲಿ ಮಹಾಮೈತ್ರಿ ನಡೆಯುವ ಸಾಧ್ಯತೆ ಇದೆ ಎನ್ನುವ ಸೂಚನೆಯನ್ನು ಬಿಟ್ಟುಕೊಟ್ಟಿದ್ದಾರೆ.
ಕಾಂಗ್ರೆಸ್ ಜತೆಗಿನ ಮೈತ್ರಿ ನಿರ್ಧಾರ ಒಂದೆರಡು ದಿನಗಳಲ್ಲಿ ಹೊರಬೀಳಲಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಗುಲಾಬ್ ನಬಿ ಅಜಾದ್ ಮೈತ್ರಿ ನಿರ್ಧಾರವನ್ನು ಹೊರ ಹಾಕಿದ್ದಾರೆ.
ಬಹುಜನ ಸಮಾಜವಾದಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಕಾಂಗ್ರೆಸ್ ಜತೆಗಿನ ಮೈತ್ರಿ ಸಮಾಜವಾದಿ ಪಕ್ಷಕ್ಕೆ ಸಹಾಯ ಮಾಡಲಿದೆ ಎಂದು ಅವರು ವಿಶ್ಲೇಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಜಾದ್ ಮೈತ್ರಿಯ ಅಂತಿಮ ತೀರ್ಮಾನಗಳನ್ನು ಒಂದೆರಡು ದಿನಗಳಲ್ಲಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಅಖಿಲೇಶ್ ನಾಯಕತ್ವದಲ್ಲಿ ಎಸ್ಪಿ ಮತ್ತು ಕಾಂಗ್ರೆಸ್ ಚುನಾವಣೆ ಎದುರಿಸಲಿದೆ ಎಂಬುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ.
ಸೋಮವಾರವಷ್ಟೆ ಅಖಿಲೇಶ್ ಯಾದವ್ ಬಣ ನಿಜವಾದ ಸಮಾಜವಾದಿ ಪಕ್ಷ ಎಂದು ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದುಕೊಂಡಿತ್ತು. ಜತೆಗೆ ಸೈಕಲ್ ಚಿನ್ಹೆ ಕೂಡಾ ಅಖಿಲೇಶ್ ಬಣದ ಪಾಲಾಗಿತ್ತು. ಇದೀಗ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿ ನಿರ್ಧಾರ ಹೊರ ಬಿದ್ದಿದೆ. (ಒನ್ ಇಂಡಿಯಾ ಸುದ್ದಿ)