Lawrence Bishnoi: ಬಿಷ್ಣೋಯ್ ಗ್ಯಾಂಗ್ನ ನೆಸ್ಟ್ ಟಾರ್ಗೇಟ್ ಸಲ್ಮಾನ್ ಖಾನ್..! ಈ ಗ್ಯಾಂಗ್ ಹಿನ್ನೆಲೆ ಏನು?
ಮುಂಬೈ ಅಕ್ಟೋಬರ್ 13: ಅಜಿತ್ ಪವಾರ್ ಗುಂಪಿನ ನಾಯಕ ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಬಿಷ್ಣೋಯ್ ಗ್ಯಾಂಗ್ ಪಾತ್ರವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮುಂಬೈ ಪೊಲೀಸರು ಪ್ರತಿಯೊಂದು ಕೋನದಿಂದ ತನಿಖೆ ನಡೆಸುತ್ತಿದ್ದಾರೆ. ಹಾಗಾದರೆ ಯಾರೀ ಬಾಬಾ ಸಿದ್ದಿಕಿ? ಈತನ ಹತ್ಯೆಗೆ ಕಾರಣ ಏನು? ಬಿಷ್ಣೋಯ್ ಗ್ಯಾಂಗ್ಗೂ ಸಿದ್ದಿಕಿ ಹತ್ಯೆಗೂ ಏನು ಸಂಬಂಧ? ಅಷ್ಟಕ್ಕೂ ಯಾರಿದು ಬಿಷ್ಣೋಯ್? ಇದೆಲ್ಲದರ ಬಗ್ಗೆ ವಿವರವಾಗಿ ತಿಳಿಯೋಣ.
ಬಾಬಾ ಸಿದ್ದಿಕಿ ಯಾರು?
ಎನ್ಸಿಪಿಯ ಹಿರಿಯ ನಾಯಕ ಬಾಬಾ ಸಿದ್ದಿಕಿ. ಬಾಬಾ ಸಿದ್ದಿಕಿ ಅವರು ಅಜಿತ್ ಪವಾರ್ ಕಾಂಗ್ರೆಸ್ ತೊರೆದು ಫೆಬ್ರವರಿ 2024ರಲ್ಲಿ ಅಜಿತ್ ಪವಾರ್ ಅವರ ಪಕ್ಷಕ್ಕೆ ಸೇರಿದ್ದರು. ಪಕ್ಷ ಬದಲಾಯಿಸಿದ ಕೆಲವೇ ತಿಂಗಳುಗಳಲ್ಲಿ ಬಾಬಾ ಸಿದ್ದಿಕಿ ಹತ್ಯೆ ಮಾಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಬಾಬಾ ಸಿದ್ದಿಕಿ ರಾಜ್ಯ ಸಚಿವರಾಗಿದ್ದರು. ಹಾಗಾದರೆ ಬಾಬಾ ಸಿದ್ದಿಕಿ ಹತ್ಯೆ ನಡೆದಿದ್ದು ಎಲ್ಲಿ ಯಾವಾಗಾ?

ಬಾಬಾ ಸಿದ್ದಿಕಿ ಅವರನ್ನು ಶನಿವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಂಬೈನ ವಂಡ್ರೆ ವೆಸ್ಟ್ನ ನಿರ್ಮಲ್ ನಗರ ಪ್ರದೇಶದಲ್ಲಿ ಸಿದ್ದಿಕಿ ಮೇಲೆ 9.9 ಎಂಎಂ ಪಿಸ್ತೂಲ್ ಬಳಸಿ ಗುಂಡಿನ ದಾಳಿ ಮಾಡಲಾಗಿದೆ. ಈ ವೇಳೆ ಆತನ ಎದೆಗೆ ಗುಂಡು ತಗುಲಿ ಅವರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಅವರ ಸಹಚರರೊಬ್ಬರು ಗಾಯಗೊಂಡಿದ್ದಾರೆ. ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ. ಹಾಗಾದರೆ ಬಾಬಾ ಸಿದ್ದಿಕಿ ಟಾರ್ಗೇಟ್ ಆಗಿದ್ದು ಯಾಕೆ?
ಬಾಬಾ ಸಿದ್ದಿಕಿ ಟಾರ್ಗೇಟ್ ಆಗಿದ್ದು ಯಾಕೆ?
ಬಾಬಾ ಸಿದ್ದಿಕಿ ಹತ್ಯೆಯಾಗುವ ಮುನ್ನ ಅವರಿಗೆ 15 ದಿನಗಳ ಹಿಂದೆ ಬೆದರಿಕೆ ಬಂದಿತ್ತು. ಆದರೆ ಬಾಬಾ ಸಿದ್ದಿಕಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಿದ್ದಿಕಿ ಬಾಲಿವುಡ್ನ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ಹತ್ತಿರವಾಗಿದ್ದರು. ಇವರಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಪ್ರಮುಖರಾಗಿದ್ದಾರೆ.
ಈ ಹಿಂದೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ಗೂ ಈ ಬೆದರಿಕೆ ಸಂದೇಶ ಬಂದಿತ್ತು. ಅಲ್ಲದೆ ಅವರ ಮನೆ ಮೇಲೆ ದಾಳಿ ಕೂಡ ಮಾಡಲಾಗಿತ್ತು. ಸಲ್ಮಾನ್ ಖಾನ್ ಅನ್ನು ಟಾರ್ಗೇಟ್ ಮಾಡಿದ ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ದಿಕಿ ಹತ್ಯೆ ಮಾಡಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ. ದಾಳಿಕೋರರು ಉತ್ತರ ಪ್ರದೇಶ ಮತ್ತು ಹರಿಯಾಣ ನಿವಾಸಿಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಾಗಾದರೆ ಬಿಷ್ಣೋಯ್ ಗ್ಯಾಂಗ್ಗೂ ಬಾಬಾ ಸಿದ್ದಿಕಿಗೂ ಏನ್ ಸಂಬಂಧ?

ಬಿಷ್ಣೋಯ್ ಗ್ಯಾಂಗ್ ಕೈವಾಡ..
ಇಂಟರೆಸ್ಟಿಂಗ್ ವಿಷಯವೆಂದರೆ ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಮನೆಯ ಮೇಲೂ ಬಿಷ್ಣೋಯ್ ಗ್ಯಾಂಗ್ ಗುಂಡಿನ ದಾಳಿ ನಡೆಸಿತ್ತು. ಸಲ್ಮಾನ್ ಖಾನ್ ಅವರೊಂದಿಗೆ ಸಿದ್ದಿಕಿ ನಿಕಟ ಸಂಬಂಧವನ್ನು ಹೊಂದಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಈ ಕೋನದಿಂದಲೂ ತನಿಖೆ ನಡೆಸುತ್ತಿದ್ದಾರೆ.
ಇದಲ್ಲದೆ, ಪುಣೆಯ ವ್ಯಕ್ತಿಯೊಬ್ಬರು ಸಿದ್ದಿಕಿಯನ್ನು ಕೊಲ್ಲಲು ಮೂವರು ದಾಳಿಕೋರರಿಗೆ ಸುಪಾರಿ ನೀಡಿದ್ದರು ಎಂಬ ವರದಿಗಳೂ ಇವೆ. ಹೀಗಾಗಿ ಎಲ್ಲಾ ಕೋನಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಷ್ಟಕ್ಕೂ ಈ ಬಿಷ್ಣೋಯ್ ಯಾರು? ಈತನ ದಾಳಿಗೆ ಕಾರಣವೇನು? ಸಲ್ಮಾನ್ ಖಾನ್ ಯಾಕೆ ಟಾರ್ಗೇಟ್ ಮಾಡಿದ್ದಾರೆ? ಈ ಹಿಂದೆ ಯಾರನ್ನು ಹತ್ಯೆ ಮಾಡಲಾಗಿತ್ತು? ಎಲ್ಲವನ್ನೂ ತಿಳಿಯೋಣ.

ಲಾರೆನ್ಸ್ ಬಿಷ್ಣೋಯ್ ಯಾರು?
ಬಿಷ್ಣೋಯ್ ಗ್ಯಾಂಗ್ ಬಗ್ಗೆ ತಿಳಿಯಬೇಕು ಅಂದರೆ ಮೊದಲು ನಾವು ಲಾರೆನ್ಸ್ ಬಿಷ್ಣೋಯ್ ಬಗ್ಗೆ ತಿಳಿದುಕೊಳ್ಳಬೇಕು. 12 ಫೆಬ್ರವರಿ 1993 ಲಾರೆನ್ಸ್ ಬಿಷ್ಣೋಯ್ ಜನಿಸಿದರು. ಇವರು ಪಂಜಾಬ್ನ ಫಿರೋಜ್ಪುರದ ನಿವಾಸಿಯಾಗಿದ್ದಾರೆ. ಹುಟ್ಟಿದಾಗ ತೇಜಸ್ಸಿನ ಮುಖವನ್ನು ನೋಡಿ ಅವರ ತಾಯಿ ಲಾರೆನ್ಸ್ ಎಂದು ಹೆಸರಿಟ್ಟರು. ತನ್ನ ಮಗ ಐಪಿಎಸ್ ಅಧಿಕಾರಿಯಾಗುವುದಾಗಿ ಆತನ ತಂದೆ ಅಂದುಕೊಂಡಿದ್ದರು.
ಲಾರೆನ್ಸ್ ತಂದೆ 1992ರಲ್ಲಿ ಹರಿಯಾಣ ಪೊಲೀಸ್ ಪೇದೆಯಾಗಿ ಸೇರಿದ್ದರು. ಆದರೆ ಐದು ವರ್ಷಗಳ ನಂತರ ಕೆಲಸ ಬಿಟ್ಟು ಬೇಸಾಯ ಆರಂಭಿಸಿದರು. ತಮ್ಮ ವೃತ್ತಿಯನ್ನು ಮುಂದೆ ತಮ್ಮ ಮಗ ಮುಂದುವರೆಸುತ್ತಾನೆಂಬ ಕನಸು ತಂದೆಗಿತ್ತು. ಲಾರೆನ್ಸ್ ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪೂರ್ಣಗೊಳಿಸಿದರು. 2009 ರಲ್ಲಿ ಅವರ ಅಧ್ಯಯನದ ಸಮಯದಲ್ಲಿ, ಅವರು ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯನ್ನು ಸೇರಿದರು. ಆ ಸಮಯದಲ್ಲಿ ಅವರು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಗೋಲ್ಡಿ ಬ್ರಾರ್ ಅವರನ್ನು ಭೇಟಿಯಾದರು.

ಬಿಷ್ಣೋಯ್ ವಿದ್ಯಾರ್ಥಿ ರಾಜಕೀಯದಿಂದ ಅಪರಾಧದವರೆಗೆ
ಗೋಲ್ಡಿಯನ್ನು ಭೇಟಿಯಾದ ನಂತರ ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರಾಜಕೀಯದಲ್ಲಿ ತೊಡಗಿಸಿಕೊಂಡ ಬಳಿಕ ಲಾರೆನ್ಸ್ ಬಿಷ್ಣೋಯ್ ಅವರ ಹೆಜ್ಜೆಗಳು ಅಪರಾಧದ ಪ್ರಪಂಚದತ್ತ ಹೊರಳಿದವು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಲು ಆರಂಭಿಸಿದರು. ಹೀಗೆ ಸುಮಾರು ಮೂರು ದಶಕಗಳ ನಂತರ, ಲಾರೆನ್ಸ್ ಬಿಷ್ಣೋಯ್ ಒಬ್ಬ ಭಯೋತ್ಪಾದಕನಾಗಿ ಬದಲಾದನು.
ಹೀಗಾಗಿ ಆತನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಲಾರೆನ್ಸ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನ ಜೈಲು ಸಂಖ್ಯೆ 8 ರ ಹೈ ಸೆಕ್ಯುರಿಟಿ ವಾರ್ಡ್ನಲ್ಲಿ ಬಂಧಿಯಾಗಿದ್ದಾನೆ. ಲಾರೆನ್ಸ್ ಬಿಷ್ಣೋಯ್ ವಿರುದ್ಧ ಕೊಲೆ ಮತ್ತು ಸುಲಿಗೆ ಪ್ರಕರಣಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಹಾಗಾದರೆ ಲಾರೆನ್ಸ್ ಬಿಷ್ಣೋಯ್ ಭಯೋತ್ಪಾದಕನಾಗಿ ಬದಲಾಗಿದ್ದು ಹೇಗೆ?

ಚುನಾವಣೆಯಲ್ಲಿ ಸೋತಿರುವುದು ಮಹತ್ವದ ತಿರುವು
ಬಿಷ್ಣೋಯ್ ಅವರನ್ನು ಹತ್ತಿರದಿಂದ ಬಲ್ಲ ಜನರಿಗೆ ಅವರ ಗುಣಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಕಾಲೇಜಿನಲ್ಲಿರುವಾಗ ಲಾರೆನ್ಸ್ ಬಿಷ್ಣೋಯ್ ಒಬ್ಬ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಕಾಲೇಜು ಚುನಾವಣೆಗಳಲ್ಲಿ ಅವರನ್ನು ಸ್ಪರ್ಧಿಸಲು ನಿಲ್ಲಿಸಲಾಗಿತ್ತು. ಅವರು ಪಂಜಾಬ್ ವಿಶ್ವವಿದ್ಯಾಲಯದ (SOPU) ವಿದ್ಯಾರ್ಥಿಗಳ ಸಂಘಟನೆಯನ್ನು ರಚಿಸಿದರು. ಅದು ಇಂದಿಗೂ ಅಸ್ತಿತ್ವದಲ್ಲಿದೆ.
ಒಂದು ದಿನ ಕಾಲೇಜು ಚುನಾವಣೆಯಲ್ಲಿ ಗೆಲ್ಲಲು ಹಗಲು ರಾತ್ರಿ ಒಳ್ಳೆಯ ಯೋಜನೆ ಮತ್ತು ಪ್ರಚಾರದ ಹೊರತಾಗಿಯೂ ಬಿಷ್ಣೋಯ್ ಚುನಾವಣೆಯಲ್ಲಿ ಸೋತರು. ಕಾಲೇಜು ಚುನಾವಣೆಯ ಸೋಲು ಬಿಷ್ಣೋಯ್ ಅವರ ಜೀವನದಲ್ಲಿ ಒಂದು ತಿರುವು ಪಡೆದುಕೊಂಡಿತು. ಅವರು ಬಾಲ್ಯದಿಂದಲೂ ಸೋಲನ್ನು ಒಪ್ಪಿಕೊಂಡ ವ್ಯಕ್ತಿಯಾಗಿರಲಿಲ್ಲ.
ಎದುರಾಳಿ ಗೆಲುವಿನ ಸಂಭ್ರಮದಿಂದ ಬಿಷ್ಣೋಯ್ ಅವರು ಅವಮಾನವನ್ನು ಅನುಭವಿಸಿದನು. ಹೀಗೆ ಚುನಾವಣೆ ಸೋತ ನಂತರ ಅವರು ಮೊದಲ ಬಾರಿಗೆ ರಿವಾಲ್ವರ್ ಖರೀದಿಸಿದನು. ಫೆಬ್ರವರಿ 2011 ರಲ್ಲಿ ಗಲಾಟೆಯ ಸಮಯದಲ್ಲಿ ಬಿಷ್ಣೋಯ್ ತನ್ನ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿದನು.
ದರೋಡೆಕೋರರ ಸಹವಾಸ
ಈ ಘಟನೆಯ ನಂತರ ಬಿಷ್ಣೋಯ್ ವಿರುದ್ಧ ಮೊದಲ ಎಫ್ಐಆರ್ ದಾಖಲಾಗಿತ್ತು. ನಂತರ 19 ವರ್ಷದ ಬಿಷ್ಣೋಯ್ ದರೋಡೆಕೋರರಾದ ಜಗ್ಗು ಭಗವಾನ್ ಪುರಿಯಾ ಮತ್ತು ರಾಕಿ ಫಾಜಿಲ್ಕಾ ಅವರ ಬೆಂಬಲವನ್ನು ಕೋರಿದನು. ಹೀಗೆ ಯುವ ಲಾರೆನ್ಸ್ ಅಪರಾಧದ ಜಗತ್ತನ್ನು ಪ್ರವೇಶಿಸಿದನು. ಅವನ ಸಂಘಟನೆ ಮಾರಣಾಂತಿಕವಾಗಿ ಬದಲಾಯಿತು.
ಗುರುದಾಸ್ಪುರದ ನಿವಾಸಿಯಾದ ಭಗವಾನ್ಪುರಿಯವರು ಬಿಷ್ಣೋಯ್ ಮತ್ತು ಫಾಜಿಲ್ಕಾ ಅವರಿಗೆ ಒಂದು ರೀತಿಯ ಗುರುವಾಗಿದ್ದರು. ಇವರು ಬಿಷ್ಣೋಯ್ಗೆ ಅಪರಾಧ ಕೃತ್ಯಗಳನ್ನು ಕಲಿಸಿದರು. ಬಿಷ್ಣೋಯ್ ವೇಗವಾಗಿ ಪ್ರಗತಿ ಸಾಧಿಸಿದ. ಹೀಗೆ ಲಾರೆನ್ಸ್ ಬಿಷ್ಣೋಯ್ ಪಂಜಾಬ್ನ ಅಪರಾಧ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲಾರಂಭಿಸಿದನು.
ಬೇರೆ ರಾಜ್ಯಗಳಲ್ಲೂ ಕಾಲಿಟ್ಟ ಬಿಷ್ಣೋಯ್
ಹೀಗೊಂದು ದಿನ ಲಾರೆನ್ಸ್ ಅವರ ಆಪ್ತ ಸ್ನೇಹಿತ ಸಂಪತ್ ನೆಹ್ರಾ ಅವರನ್ನು ಭೇಟಿ ಮಾಡಿದ. ಸಂಪತ್ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ನ ಮಗ ಮತ್ತು ಒಬ್ಬ ಶ್ರೇಷ್ಠ ಕ್ರೀಡಾಪಟು. ಬಿಷ್ಣೋಯ್ ಯೋಜಕ ಮತ್ತು ಬಲವಾದ ನಾಯಕ. ಉತ್ತರ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಅಪಾಯಕಾರಿ ಗ್ಯಾಂಗ್ಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಪಾಯಕಾರಿ ಕಲ್ಪನೆಯನ್ನು ಬಿಷ್ಣೋಯ್ ಹೊಂದಿದ್ದನು. ಇದರ ಮೂಲಕ ತನ್ನ ಗ್ಯಾಂಗ್ ಬಲಗೊಳಿಸುವ ಚಿಂತನೆಯಲ್ಲಿ ಬಿಷ್ಣೋಯ್ ಇದ್ದನು.
ಇದಕ್ಕಾಗಿ ಪಂಜಾಬ್ನ ಹೊರಗೆ ಕಾಲಿಟ್ಟ ಬಿಷ್ಣೋಯ್ ಹರಿಯಾಣದಲ್ಲಿ ಕಲಾ ಜಥೇಡಿ ಮತ್ತು ದೆಹಲಿಯಲ್ಲಿ ಜಿತೇಂದ್ರ ಗೋಗಿ ಅವರೊಂದಿಗೆ ಮೈತ್ರಿ ಮಾಡಿಕೊಂಡ. ರಾಜಸ್ಥಾನದಲ್ಲಿ ಆನಂದಪಾಲ್ ಮತ್ತು ನಂತರ ಅವರ ಶಿಷ್ಯೆ ಅನುರಾಧ ಬಿಷ್ಣೋಯ್ನ ಪಾಲುದಾರರಾದರು. ಭಗವಾನ್ಪುರಿಯವರು ಬಿಷ್ಣೋಯ್ ಅವರನ್ನು ಪರಿಚಯಿಸಿದ ನಂತರ, ಉತ್ತರ ಪ್ರದೇಶದ ನಾಯಕರೂ ಅವರನ್ನು ಬೆಂಬಲಿಸಿದರು.
ಬಿಷ್ಣೋಯ್ ಗ್ಯಾಂಗ್ ಈಗ ಹೇಗಿದೆ?
ಹೀಗೆ ತನ್ನ ಗ್ಯಾಂಗ್ ಅನ್ನು ವಿಸ್ತರಿಸಿಕೊಂಡ ಬಿಷ್ಣೋಯ್ ತುಂಬಾ ಬಲವಾದ ನೆಟ್ವರ್ಕ್ ಹೊಂದಿದ್ದಾನೆ. ಬಿಷ್ಣೋಯ್ ಗ್ಯಾಂಗ್ ವೃತ್ತಿಪರ ಶೂಟರ್ಗಳನ್ನು ಒಳಗೊಂಡಿದೆ. ಆ ಶೂಟರ್ಗಳು ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶದಿಂದ ಬಿಷ್ಣೋಯ್ ಆದೇಶದಂತೆ ಕಾರ್ಯನಿರ್ವಹಿಸುತ್ತಾರೆ. ಹೀಗೆ ಬಿಷ್ಣೋಯ್ ಅವರ ನೆಟ್ವರ್ಕ್ ಪ್ರಪಂಚದಾದ್ಯಂತ ಹರಡಿದೆ. ಈತನ ಗ್ಯಾಂಗ್ ನಲ್ಲಿ 700ಕ್ಕೂ ಹೆಚ್ಚು ಶೂಟರ್ ಗಳಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಈತನ ಸಹಚರ ಸಂದೀಪ್ ಅಲಿಯಾಸ್ ಕಲಾ ಜಥೇಡಿಯನ್ನು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಪ್ರಕರಣದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕವು 5 ಲಕ್ಷ ರೂಪಾಯಿ ಬಹುಮಾನದೊಂದಿಗೆ ಬಂಧಿಸಿದ್ದು, ಪ್ರಸ್ತುತ ಆತ ಜೈಲಿನಲ್ಲಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯ
ಈ ಮೈತ್ರಿಗಳು ಬಿಷ್ಣೋಯ್ ಗೆ ಆನೆ ಬಲ ತಂದುಕೊಟ್ಟಿವೆ. ಈ ಮೈತ್ರಿಗಳಿಂದಾಗಿ ಬಿಷ್ಣೋಯ್ ಜೈಲಿನಲ್ಲಿದ್ದರೂ ತನ್ನ ಕೆಲಸ ಮಾಡಿಸುತ್ತಿದ್ದಾನೆ. ಉದ್ದೇಶಿತ ಹತ್ಯೆಗಳು ಮತ್ತು ಸುಲಿಗೆಯಿಂದ ಬಂದ ಲಾಭವನ್ನು ಎಲ್ಲರಿಗೂ ಹಂಚಲಾಗುತ್ತದೆ. ತಮ್ಮ ಹಾಗೂ ತಮ್ಮ ಸಮುದಾಯಕ್ಕೆ ಎದುರಾದವರನ್ನು ಹತ್ಯೆ ಮಾಡುವ ಪಟ್ಟಿ ತಯಾರಿಸುವ ಈ ಗ್ಯಾಂಗ್ ಈವರೆಗೂ ಹಲವರನ್ನು ಹತ್ಯೆ ಮಾಡಿದೆ.
ಬೊದಲ ಬಾರಿಗೆ ಬಿಷ್ಣೋಯ್ ಅನ್ನು 2014-15ರಲ್ಲಿ ಬಂಧಿಸಲಾಗಿತ್ತು. ಬಳಿಕ ಆತನ ಬಂಧನದಿಂದ ತಪ್ಪಿಸಿಕೊಂಡು ನೇಪಾಳ ತಲುಪಿದ್ದ. ಕೆಲವೇ ತಿಂಗಳುಗಳಲ್ಲಿ ಮತ್ತೆ ಆತನನ್ನು ಬಂಧಿಸಲಾಯಿತು. ಬಿಷ್ಣೋಯ್ ತಮ್ಮ ಗ್ಯಾಂಗ್ನ ಲಾಭಕ್ಕಾಗಿ ಫೇಸ್ಬುಕ್ ಮತ್ತು ಯೂಟ್ಯೂಬ್ ಅನ್ನು ಬಳಸಲು ಆರಂಭಿಸಿದನು.
ಜಿಮ್ನಲ್ಲಿರುವ ಅವರ ಚಿತ್ರದಿಂದ ಹಿಡಿದು ಅವರ ಕಸ್ಟಡಿಯಲ್ ನ್ಯಾಯಾಲಯದ ಭೇಟಿಯವರೆಗೆ ಎಲ್ಲವೂ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ ಆಗುತ್ತಿತ್ತು. ಲಕ್ಷಾಂತರ ವೀಕ್ಷಣೆಗಳು ಅವರ ಇಮೇಜ್ ಅನ್ನು ಬಲಪಡಿಸಿತು. ಇದು ಸುಲಿಗೆ ಬೇಡಿಕೆಗಳನ್ನು ಹೆಚ್ಚಿಸಲು ಸಹಾಯ ಮಾಡಿತು. ಇದನ್ನು ನೋಡಿ ದೆಹಲಿ ಮತ್ತು ಹರಿಯಾಣದ ಆತನ ಸಹಚರರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ಹಿಟ್ ಲಿಸ್ಟ್ ನಲ್ಲಿ ಸಲ್ಮಾನ್ ಖಾನ್ ಹೆಸರು...
ಇದಾದ ನಂತರವೇ ಬಿಷ್ಣೋಯ್ ಹಿಟ್ ಲಿಸ್ಟ್ ಬಿಡುಗಡೆ ಮಾಡಿದ್ದು, ಅದರಲ್ಲಿ ನಟ ಸಲ್ಮಾನ್ ಖಾನ್ ಹೆಸರೂ ಇತ್ತು. ರಾಜಸ್ಥಾನದ ಬಿಷ್ಣೋಯ್ ಸಮುದಾಯಕ್ಕೆ ಅಗೌರವ ತೋರಿದ್ದಾರೆ ಎಂಬ ಕಾರಣಕ್ಕೆ ಸಲ್ಮಾನ್ ಖಾನ್ ಅನ್ನು ಹತ್ಯೆ ಮಾಡುವ ಕಾರಣವನ್ನು ಬಿಷ್ಣೋಯ್ ಗ್ಯಾಂಗ್ ನೀಡಿದೆ.
ಬಿಷ್ಣೋಯ್ ಸಮುದಾಯ ಕೃಷ್ಣಮೃಗವನ್ನು ಪವಿತ್ರ ಎಂದು ಭಾವಿಸುತ್ತದೆ. ಆದರೆ ನಟ ಸಲ್ಮಾನ್ ಖಾನ್ ಈ ಕೃಷ್ಣಮೃಗವನ್ನು ಒಮ್ಮೆ ಬೇಟೆಯಾಡಿದ್ದರು. ಬಿಷ್ಣೋಯ್ ಸಮುದಾಯ ಈ ಜಿಂಕೆಯನ್ನು ಪವಿತ್ರವೆಂದು ಪರಿಗಣಿಸಿರುವುದರಿಂದ ಸಲ್ಮಾನ್ ಖಾನ್ ಬೇಟೆಯನ್ನು ಖಂಡಿಸಿ ಅವರ ಹತ್ಯೆಗೆ ಸಂಚು ರೂಪಿಸಿದೆ.
ಗಾಯಕ ಸಿಧು ಮೂಸೆವಾಲಾ ಹತ್ಯೆ ಕಾರಣವೇನು?
ಪಂಜಾಬ್ನ ಸಿಧು ಮೂಸೆವಾಲಾ ಸಂಗೀತ ಸಂಯೋಜನೆ ಹಾಗೂ ನಿರ್ಮಾಣದ ಹಾಡುಗಳ ಮೂಲಕ ಖ್ಯಾತಿ ಗಳಿಸಿದ್ದರು. ಸಿಧು ಮೂಸೆ ವಾಲಾ ಅವರು ಪಂಜಾಬ್ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ 2022ರ ಮೇ 29ರಂದು ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳ ಗುಂಪು ಮನಬಂದಂತೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿತ್ತು. ಸಿಧು ಗನ್ ಸಂಸ್ಕೃತಿ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ.
ಹೀಗೆ ದೇಶದಲ್ಲಿ ದೊಡ್ಡದಾಗಿ ನೆಟ್ವರ್ಕ್ ಹೊಂದಿರುವ ಬಿಷ್ಣೋಯ್ ಗ್ಯಾಂಗ್ ಒಬ್ಬರಾದ ಒಬ್ಬರಂತೆ ಹತ್ಯೆ ಮಾಡುತ್ತಲೇ ಇದೆ. ಬಾಲಿವುಡ್ ನಟ ಸಲ್ಮಾನ್ ಹತ್ಯೆಗೆ ಹಲವಾರು ಬಾರಿ ಪ್ರಯತ್ನಗಳು ನಡೆದಿವೆಯಾದರೂ ಬಿಷ್ಣೋಯ್ ಗ್ಯಾಂಗ್ ತಾವಂದುಕೊಂಡಂತೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲಾಗಿಲ್ಲ. ಆದರೂ ಇದಕ್ಕಾಗಿ ದೊಡ್ಡ ಸಂಚು ರೂಪಿಸಿರುವುದಂತೂ ನಿಜ. ಹೀಗಾಗಿ ಸಲ್ಮಾನ್ ಖಾನ್ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಆದರೂ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಖಾನ್ಗೆ ಅಪಾಯ ಕಟ್ಟಿಟ್ಟಬುತ್ತಿ ಎನ್ನಲಾಗುತ್ತಿದೆ.












Click it and Unblock the Notifications