ರಾಮಜನ್ಮ ಭೂಮಿ ಜಮೀನು ವಿವಾದ ವಿಚಾರಣೆಗೆ ಮುಹೂರ್ತ ನಿಗದಿ
ನವದೆಹಲಿ, ಸೆಪ್ಟೆಂಬರ್ 27 : ವಿವಾದಿತ ಸ್ಥಳದಲ್ಲಿ ಮುಸ್ಲಿಮರು ನಮಾಜು ಮಾಡುವ ಕುರಿತಂತೆ 1994ರಲ್ಲಿ ಕೆಳಹಂತದ ನ್ಯಾಯಾಲಯವು ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಇಂದು(ಸೆಪ್ಟೆಂಬರ್ 27) ಆದೇಶ ನೀಡಿದೆ.
'ನಮಾಜ್ ಮಾಡಲು ಮಸೀದಿಯೇ ಆಗಬೇಕೆಂದೇನಿಲ್ಲ' ಎಂದು 1994ರ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಜೊತೆಗೆ ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ತೀರ್ಮಾನಿಸಿದೆ.
ಅಕ್ಟೋಬರ್ 29ರಂದು ರಾಮ ಜನ್ಮಭೂಮಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ.
ಹಿರಿಯ ವಕೀಲ ರಾಜೀವ್ ಧವನ್ ಅವರು 1994ರ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿದ್ದರಿಂದ ಪೂರ್ವಭಾವಿ ವಿವಾದದ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿಜೆಐ ಮಿಶ್ರಾ ಹೇಳಿದ್ದರು.
ನ್ಯಾ. ದೀಪಕ್ ಮಿಶ್ರಾ ಹಾಗೂ ಜಸ್ಟೀಸ್ ಅಶೋಕ್ ಭೂಷಣ್ ಅವರು ವಿಸ್ತೃತ ಪೀಠಕ್ಕೆ ಕೇಸ್ ವರ್ಗಾವಣೆ ಬೇಡ ಎಂದರೆ, ನ್ಯಾ ಅಬ್ದುಲ್ ನಜೀರ್ ಅವರು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಒಲವು ತೋರಿದರು.
ಶಿಯಾ ಮುಸ್ಲಿಂ ಸಂಘಟನೆಯೊಂದು ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ನಮ್ಮ ಅಭ್ಯಂತರವೇನು ಇಲ್ಲ ಎಂದು ಕೋರ್ಟಿಗೆ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ, ಅಂತಿಮ ತೀರ್ಪಿಗೂ ಮುನ್ನ ಕೇಂದ್ರದ ಬಿಜೆಪಿ ಸರ್ಕಾರವು ತನ್ನ ಲಾಭಕ್ಕೆ ಈ ತೀರ್ಪನ್ನು ಬಳಸಿಕೊಳ್ಳಬಹುದು ಎಂದು ತರ್ಕಿಸಲಾಗಿದೆ. ತೀರ್ಪಿನ ಪ್ರಮುಖ ಅಂಶಗಳು ಮುಂದಿವೆ

1994ರ ಅಲಹಾಬಾದ್ ಹೈಕೋರ್ಟ್ ಆದೇಶ
1994ರ ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ ಹಾಗೂ ನಮಾಜ್ ಮಾಡಲು ಅದೇ ಜಾಗ ಆಗಬೇಕೆಂದೇನಿಲ್ಲ, ಬಯಲು ಪ್ರದೇಶವೊಂದರಲ್ಲೂ ಪ್ರಾರ್ಥನೆ ಸಲ್ಲಿಸಬಹುದು.
'ಮಸೀದಿಯನ್ನು ಇಸ್ಲಾಂನ ಅವಿಭಾಜ್ಯ ಅಂಗವೇ? ನಮಾಜು ಮಾಡಲು ಮಸೀದಿಯೇ ಆಗಬೇಕೇ? ಎಂಬುದರ ಬಗ್ಗೆ ಕೂಡಾ ಸುಪ್ರೀಂಕೋರ್ಟ್ ಇಂದು ತನ್ನ ತೀರ್ಪು ನೀಡಿದೆ.

ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ
1994ರ ಇಸ್ಮಾಯಿಲ್ ಫಾರೂಕಿ ಕೇಸಿಗೆ ಸಂಬಂಧಿಸಿದಂತೆ ಮಸೀದಿ ಕುರಿತು ಕೆಲ ಮುಸ್ಲಿಂ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಸಿಜೆಐ ದೀಪಕ್ ಮಿಶ್ರಾ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ, 1994ರ ಕೆಳ ಹಂತದ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ.
ಮಸೀದಿ ಕುರಿತ ಫಾರೂಕಿ ಕೇಸಿನ ತೀರ್ಪಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗಾಗಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ.

ಫಾರೂಕಿ ಕೇಸ್ -ಭೂ ಸ್ವಾದೀನ ಪಡೆದುಕೊಳ್ಳುವುದರ ಬಗ್ಗೆ
1994ರಲ್ಲಿ ಫಾರೂಕಿ ಕೇಸಿಗೆ ಸಂಬಂಧಿಸಿದಂತೆ ಮಾತ್ರ ಜಾಗ, ಜಮೀನಿನ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಆ ಪ್ರಕರಣ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಅಲ್ಲ, ಭೂ ಸ್ವಾದೀನ ಪಡೆದುಕೊಳ್ಳುವುದರ ಬಗ್ಗೆ ಇತ್ತು.

ಸರ್ಕಾರ ಭೂ ಸ್ವಾದೀನ ಮಾಡಿಕೊಳ್ಳಬಹುದು
ಆದರೆ, ಅಗತ್ಯಬಿದ್ದಾಗ ಸರ್ಕಾರವು ದೇಶದ ಯಾವುದೇ ದೇಗುಲ, ಮಸೀದಿ ಮತ್ತು ಚರ್ಚ್ಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು ಎಂದು ಇಬ್ಬರು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಸಿಜೆಐ ದೀಪಕ್ ಮಿಶ್ರಾ ಹಾಗೂ ನ್ಯಾ ಅಶೋಕ್ ಭೂಷಣ್ ಅವರು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದರೆ, ನ್ಯಾ ಅಬ್ದುಲ್ ನಜೀರ್ ಅಸಮ್ಮತಿ ವ್ಯಕ್ತಪಡಿಸಿದರು. 2:1 ರಂತೆ ಈ ಆದೇಶ ಹೊರ ಬಂದಿದೆ.

ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಆಗುವುದಿಲ್ಲ
ಅಯೋಧ್ಯೆ ರಾಮ ಮಂದಿರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 29ರಿಂದ ನಿರಂತರವಾಗಿ ವಿಚಾರಣೆ ನಡೆಯಲಿದೆ. ಈಗ ಇರುವ ನ್ಯಾಯಪೀಠದ ಬದಲು ಹೊಸ ಸಂವಿಧಾನಿಕ ನ್ಯಾಯಪೀಠ ರಚಿಸಿ, 7 ಸದಸ್ಯರ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸುವಂತೆ ಮನವಿ ಬಂದಿದೆ. ಆದರೆ, ಇಂದಿನ ಪ್ರಕರಣದ ಆದೇಶವನ್ನು ಗಮನಿಸಿದರೆ, ಭೂ ಸ್ವಾದೀನಕ್ಕೆ ಸಂಬಂಧಿಸಿದಂತೆ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಆಗುವುದಿಲ್ಲ

ಸಿಜೆಐ ದೀಪಕ್ ಮಿಶ್ರಾ ಹಾಗೂ ಅಶೋಕ್ ಭೂಷಣ್
ಸಿಜೆಐ ದೀಪಕ್ ಮಿಶ್ರಾ ಹಾಗೂ ನ್ಯಾ ಅಶೋಕ್ ಭೂಷಣ್ ಅವರು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದು, ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ, ನಮಾಜು ಮಾಡಲು ಮಸೀದಿಯೇ ಬೇಕಾಗಿಲ್ಲ. ಅದರಲ್ಲೂ ವಿವಾದಿತ ಮಸೀದಿ ಜಾಗದಲ್ಲಿ ನಮಾಜು ಮಾಡುವುದಕ್ಕಾಗಿ ಭೂ ಸ್ವಾದೀನ ಹಕ್ಕು ಮಂಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರೆ, ಈ ಅಂಶಗಳನ್ನು ನ್ಯಾ ಅಬ್ದುಲ್ ನಜೀರ್ ಒಪ್ಪಲಿಲ್ಲ.

'ಮಸೀದಿಯನ್ನು ಅವಿಭಾಜ್ಯ ಅಂಗ ಅಲ್ಲ'
'ಮಸೀದಿಯನ್ನು ಅವಿಭಾಜ್ಯ ಅಂಗ ಅಲ್ಲ' ಎನ್ನಲು ಸಾಧ್ಯವಿಲ್ಲ, ಎಂದು ವಾದಿಸಿದ್ದ ಸುನ್ನಿ ವಕ್ಫ್ ಬೋರ್ಡ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು 1994ರ ಇಸ್ಮಾಯಿಲ್ ಫಾರೂಕಿ ಕೇಸಿನ ತೀರ್ಪನ್ನು ಪ್ರಶ್ನಿಸಿ 7 ಸದಸ್ಯರ ವಿಸ್ತೃತ ಸಂವಿಧಾನ ಪೀಠ ರಚನೆ ಮಾಡಿ, ಪ್ರಕರಣವನ್ನು ವರ್ಗಾಯಿಸಲು ಕೋರಿದ್ದರು. ಆದರೆ, ಇದು ಧಾರ್ಮಿಕ ವಿಧಿ ವಿಧಾನಕ್ಕೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ, ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿಲ್ಲ.

ರಾಮಜನ್ಮ ಭೂಮಿ ಪರ ಇರುವವರಿಗೆ ಆಶಾಭಾವ
ರಾಮಜನ್ಮ ಭೂಮಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 29ರಿಂದ ನಿರಂತರವಾಗಿ ವಿಚಾರಣೆ ನಡೆಯಲಿದೆ. ಭೂ ಸ್ವಾದೀನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಅಧಿಕಾರವಿದೆ. ಅದು ಮಂದಿರ, ಮಸೀದಿ, ಚರ್ಚ್ ಏನೇ ಆಗಲಿ, ಎಲ್ಲೇ ಇರಲಿ ಸರ್ಕಾರ ಸ್ವಾದೀನ ಪಡಿಸಿಕೊಳ್ಳಬಹುದು. ವಿವಾದಿತ ಜಾಗ ಸದ್ಯ ತಲಾ ಮೂರನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ. ನಿರ್ಮೋಹಿ ಅಖಾರಕ್ಕೆ ಎಂದು ಹಂಚಿಕೆಯಾಗಿದೆ.












Click it and Unblock the Notifications