ಪ್ರಧಾನಿ ಮೋದಿಯಿಂದ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ, ದಿನಾಂಕ ವಿವರ
ನವದೆಹಲಿ, ಸೆಪ್ಟೆಂಬರ್ 9: 2024 ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದು, ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯನ್ನು ಅದೇ ದಿನಾಂಕದಂದು ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರಾಮಲಲ್ಲಾ ಮೂರ್ತಿಯನ್ನು ರಚಿಸಿದ್ದು ಈಗಾಗಲೇ ಅವರು ಅಯೋಧ್ಯೆಯಲ್ಲಿದ್ದಾರೆ. ಅಯೋಧ್ಯೆ ಪ್ರವೇಶ ದ್ವಾರ ರಾಮ ಮಂದಿರ ಮಾದರಿಯಲ್ಲಿ ನಿರ್ಮಾಣವಾಗಲಿದ್ದು, ರಾಷ್ಟ್ರೀಯ ಹೆದ್ದಾರಿ 28ರ ದ್ವಾರಕ್ಕೆ ಶ್ರೀ ರಾಮ ದ್ವಾರ ಎಂದು ಹೆಸರನ್ನು ಇಡಲು ಯೋಗಿ ಸರ್ಕಾರ ನಿರ್ಧಾರ ಕೈಗೊಂಡಿದೆ.

ಅಯೋಧ್ಯೆಯಲ್ಲಿ ರಾಮಮಂದಿರದ ಮೊದಲ ಹಂತದ ನಿರ್ಮಾಣ ಕಾರ್ಯ ಡಿಸೆಂಬರ್ 30ರೊಳಗೆ ಪೂರ್ಣಗೊಳ್ಳಲಿದ್ದು, ದರ್ಶನ ಮಾಡಲು ಭಕ್ತರಿಗೆ ಅನುವು ಮಾಡಿಕೊಡಲಾಗುವುದು ಎಂದು ರಾಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಈ ಹಿಂದೆ ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣದ ಮೊದಲ ಹಂತವನ್ನು 2023ರ ಡಿಸೆಂಬರ್ 30 ರೊಳಗೆ ಪೂರ್ಣಗೊಳಿಸಲು ದೇವಸ್ಥಾನದ ಟ್ರಸ್ಟ್ ನಿರ್ಧರಿಸಿದೆ. ಮೊದಲ ಹಂತದಲ್ಲಿ, ನೆಲ ಮಹಡಿಯಲ್ಲಿ ಐದು 'ಮಂಟಪಗಳು' ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಗರ್ಭಗುಡಿ. ಗರ್ಭಗುಡಿಯಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಐದು ಮಂಟಪಗಳ ನಿರ್ಮಾಣದಲ್ಲಿ ಸುಮಾರು 160 ಕಂಬಗಳನ್ನು ಬಳಸಲಾಗಿದೆ.
ದೇವಾಲಯದ ಕೆಳಗಿನ ಸ್ತಂಭದಲ್ಲಿ ಶ್ರೀರಾಮನ ಸಂಕ್ಷಿಪ್ತ ವಿವರಣೆಯನ್ನು ಪ್ರಾರಂಭಿಸಲಾಗುವುದು. ವಿದ್ಯುತ್ ಸೌಲಭ್ಯ ಮತ್ತು ಇತರ ಸೌಲಭ್ಯಗಳನ್ನು ಪೂರ್ಣಗೊಳಿಸಬೇಕು. ಈ ಎಲ್ಲಾ ಕಾಮಗಾರಿಗಳು ಡಿಸೆಂಬರ್ 30 ರೊಳಗೆ ಪೂರ್ಣಗೊಳ್ಳಲಿವೆ. ಎರಡನೇ ಮಹಡಿಗಳನ್ನು 2024ರ ಡಿಸೆಂಬರ್ 30 ರೊಳಗೆ ಪೂರ್ಣಗೊಳಿಸಲಾಗುತ್ತದೆ.
ಏಪ್ರಿಲ್ನಲ್ಲಿ ನಡೆದ ಸಭೆಯಲ್ಲಿ ರಾಮಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಉಡುಪಿ ಪೇಜವಾಮಠದ ಪೀಠಾಧೀಶ್ವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಮೇಶ್ವರ ಚೌಪಾಲ್, ಅಯೋಧ್ಯೆ ರಾಜ ವಿಮಲೇಂದ್ರ ಮೋಹನ್ ಮಿಶ್ರಾ, ಡಾ. ಅನಿಲ್ ಮಿಶ್ರಾ ಮತ್ತು ನಿರ್ಮೋಹಿ ಅಖಾಡದ ಮಹಾಂತ ದಿನೇಂದ್ರ ದಾಸ್ ಭಾಗವಹಿಸಿದ್ದರು.
ಅಯೋಧ್ಯೆಯ ರಾಮಮಂದಿರಕ್ಕೆ ಭೂಮಿ ಪೂಜೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರೇ ಪ್ರಾಣಪ್ರತಿಷ್ಠೆ ಮತ್ತು ದೇಗುಲ ಉದ್ಘಾಟನೆ ಕಾರ್ಯಕ್ರಮದ ನೇತೃತ್ವವಹಿಸಲಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜೂನ್ ಮಧ್ಯಬಾಗದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದರು.
ಪ್ರಾಣ ಪ್ರತಿಷ್ಠಾ ಕಾರ್ಯಕ್ಕೆ ಸಂಬಂಧಿಸಿ ವಿದ್ವಾಂಸರಿಂದ ಅಭಿಪ್ರಾಯ ಕೇಳಲಾಗಿದೆ. ರಾಮಲಲ್ಲಾ ವಿಗ್ರಹವನ್ನು ಮಾಡಲು ಸಹ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಶಿಲ್ಪಿಗಳು ಅಯೋಧ್ಯೆಗೆ ತಲುಪಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದು ಟ್ರಸ್ಟ್ ತಿಳಿಸಿದೆ.












Click it and Unblock the Notifications