Char Dham: ಚಾರ್ ಧಾಮ್ ಯಾತ್ರಿಕರೇ ಗಮನಿಸಿ: ನದಿಗಳಲ್ಲಿ ಬಟ್ಟೆ ಬಿಡುವ ಮುನ್ನ ಎಚ್ಚರ!
ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಚಾರ್ ಧಾಮ್ ಯಾತ್ರೆ ಕೂಡ ಒಂದಾಗಿದೆ. 6 ತಿಂಗಳಿಗೆ ಒಮ್ಮೆ ತೆರೆಯುವ ಈ ಯಾತ್ರಾ ಸ್ಥಳಗಳಿಗೆ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಚಾರ್ ಧಾಮ್ ಯಾತ್ರೆಗಳೆಂದರೆ, ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಹಾಗು ಬದರಿನಾಥ್. ಆದರೆ ಚಾರ್ ಧಾಮ್ನಲ್ಲಿ ಯಾತ್ರಿಕರು ಭಾರೀ ಸಂಖ್ಯೆಯಲ್ಲಿ ಬಟ್ಟೆಗಳನ್ನು ಎಸೆದಿರುವುದು ಕಂಡು ಬಂದಿದೆ. ಇದರಿಂದಾಗಿ ಚಾರ್ ಧಾಮ್ ದೇವಾಲಯಗಳ ಸಿಬ್ಬಂದಿ ನಿರಾಶೆಗೊಂಡಿದ್ದಾರೆ.
ಉತ್ತರಾಖಂಡದ ಚಾರ್ ಧಾಮ್ ಯಾತ್ರೆಯ ನಾಲ್ಕು ಪ್ರಮುಖ ಯಾತ್ರಾ ಸ್ಥಳಗಳ ಪೈಕಿ ಎರಡು ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳಲ್ಲಿ ಏಳು ಕ್ವಿಂಟಾಲ್ (700 ಕೆಜಿ) ಬಟ್ಟೆಗಳನ್ನು ಎಸೆದಿರುವುದು ಕಂಡು ಬಂದಿದೆ. ವಿಶೇಷವಾಗಿ ಸೀರೆಗಳನ್ನು ಯಾತ್ರಿಕರು ನದಿಗಳಲ್ಲಿ ಎಸೆದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಹಲವಾರು ಯಾತ್ರಾರ್ಥಿಗಳು ಎರಡು ದೇವಾಲಯಗಳಲ್ಲಿನ ನದಿಗಳಲ್ಲಿ ಬಟ್ಟೆಗಳನ್ನು ಎಸೆಯುತ್ತಿದ್ದಾರೆ. ಇದು ಈ ದೇವಾಲಯಗಳನ್ನು ನಿರ್ವಹಿಸುವ ಜವಾಬ್ದಾರಿಯುತ ಅಧಿಕಾರಿಗಳಿಗೆ ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡುತ್ತಿದೆ.
ನದಿಗಳಲ್ಲಿ ಬಟ್ಟೆ ಬಿಸಾಡಲು ಕಾರಣರಾದ ಯಾತ್ರಾರ್ಥಿಗಳಿಗೆ 1,000 ರೂ.ಗಳ ದಂಡ ವಿಧಿಸುವ ಕುರಿತು ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಲಿಖಿತ ಸೂಚನೆಗಳನ್ನು ನೀಡಲಾಗುತ್ತಿದೆ. ಅದಾಗ್ಯೂ ಈ ಎಚ್ಚರಿಕೆಗಳು ಯಾತ್ರಿಕರ ಗಮನಕ್ಕೆ ಹೆಚ್ಚಾಗಿ ಬಂದಿಲ್ಲ. ಸ್ವಚ್ಚತೆಯ ಬಗ್ಗೆ ಅಸಡ್ಡೆ ತೋರಿದ್ದಾರೆ.
ಗಂಗೋತ್ರಿ ದೇವಸ್ಥಾನದ ಕಾರ್ಯದರ್ಶಿ ಸುರೇಶ್ ಸೇಮ್ವಾಲ್ ಮಾತನಾಡಿ, ಅಲ್ಲಿನ ದೇವಾಲಯದ ಕಾರ್ಯಕರ್ತರು ಭಾಗೀರಥಿ ನದಿಯಿಂದ 4 ಕ್ವಿಂಟಾಲ್ ಬಟ್ಟೆಗಳನ್ನು ಸಂಗ್ರಹಿಸಿದ್ದಾರೆ. ಅದನ್ನು ವಿಲೇವಾರಿ ಮಾಡಲು ನಗರ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ.
ಯಮುನೋತ್ರಿ ದೇವಸ್ಥಾನದ ಮತ್ತೊಬ್ಬ ಅಧಿಕಾರಿ ಮಾತನಾಡಿ, ಪರಿಸ್ಥಿತಿಯು ಸ್ವಚ್ಛತಾ ಸಿಬ್ಬಂದಿಗೆ ತೀವ್ರ ಹೊರೆಯಾಗುತ್ತಿದೆ. ಯಾತ್ರಾರ್ಥಿಗಳಿಗೆ ಬಟ್ಟೆ ಬಿಸಾಡದಂತೆ ಸಿಬ್ಬಂದಿ ಮನವಿ ಮಾಡುತ್ತಿದ್ದು, ಹೆಚ್ಚಿನವರು ಸೀರೆಗಳನ್ನು ನದಿ ನೀರಿನಲ್ಲಿ ಎಸೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಯಾತ್ರಿಕರು ನೀರಿನಲ್ಲಿ ಸ್ನಾನ ಮಾಡುವಾಗ ಒದ್ದೆಯಾದ ನಂತರ ಈ ಬಟ್ಟೆಗಳು ಭಾರವಾಗುವುದರಿಂದ ಬಟ್ಟೆಗಳನ್ನು ಸಾಮೂಹಿಕವಾಗಿ ಎಸೆಯುವುದನ್ನು ರೂಢಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ನದಿಗಳಲ್ಲಿ ಬಟ್ಟೆ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದಾಗಿ ಅವರು ಒಣ ಬಟ್ಟೆಗಳನ್ನು ಧರಿಸಿ ಮತ್ತು ಒದ್ದೆ ಬಟ್ಟೆಗಳನ್ನು ಬೀಸಾಡುತ್ತಾರೆಂದು ತಿಳಿದು ಬಂದಿದೆ.
ಚಾರ್ ಧಾಮ್ ಯಾತ್ರೆಯು ಏಪ್ರಿಲ್ 22 ರಿಂದ ಪ್ರಾರಂಭವಾಗಿದೆ. ಈ ಮೊದಲೇ ಹೇಳಿದಂತೆ 6 ತಿಂಗಳಿಗೆ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ಅಂದರೆ ಏಪ್ರಿಲ್ನಿಂದ ನವೆಂಬರ್ ತಿಂಗಳವರೆಗೆ ಯಾತ್ರಾರ್ಥಿಗಳು ಯಾತ್ರೆ ಕೈಗೊಳ್ಳಬಹುದು. ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳು ಪ್ರತಿ ವರ್ಷ ಅಕ್ಷಯ ತೃತೀಯ ದಿನದಂದು ತೆರೆದರೆ, ಒಂದೆರಡು ದಿನಗಳ ನಂತರ ಕೇದಾರನಾಥ ದೇವಾಲಯ ಮತ್ತು ಬದರಿನಾಥ ದೇವಾಲಯದ ಪೋರ್ಟಲ್ ತೆರೆಯಲಾಗುತ್ತದೆ.
ಭಾರತದ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಕೈಗೊಳ್ಳುವ ಪ್ರಯಾಣದಲ್ಲಿ ಚಾರ್ಧಾಮ್ ಯಾತ್ರೆ (Char Dham Yatra) ಬಹುಮುಖ್ಯವಾಗಿದೆ. ನಾಲ್ಕು ಪುಣ್ಯ ಸ್ಥಳಗಳ ಯಾತ್ರೆಯನ್ನು ಚಾರ್ ಧಾಮ್ ಆಗಿದೆ. ಮೋಕ್ಷ (Moksha) ಸಾಧನೆಗೆ ಈ ಯಾತ್ರೆಗಳನ್ನು ಕೈಗೊಳ್ಳುವುದು ಅತಿ ಮುಖ್ಯವಾಗಿದೆ ಎಂಬ ನಂಬಿಕೆ ಇದೆ.
ಚಾರ್ದಾಮ್ನ ಈ ತೀರ್ಥಯಾತ್ರೆಯ ಪರಿಕಲ್ಪನೆಯು ಗುರು ಆದಿ ಶಂಕರಾಚಾರ್ಯರಿಂದ ಹೊರ ಹೊಮ್ಮಿದೆ. ಭಾರತದ ನಾಲ್ಕು ವಿವಿಧ ಮೂಲೆಗಳಲ್ಲಿ ನೆಲೆಗೊಂಡಿರುವ ಪವಿತ್ರ ಅಡಿಪಾಯದ ಕಲ್ಲುಗಳನ್ನು ಅವರು ಹಾಕಿದರು ಎಂದು ಹೇಳಲಾಗುತ್ತದೆ; ಅಂದರಂತೆ ಉತ್ತರದಲ್ಲಿ ಬದರಿನಾಥ, ದಕ್ಷಿಣದಲ್ಲಿ ರಾಮೇಶ್ವರ, ಪೂರ್ವದಲ್ಲಿ ಜಗನ್ನಾಥ ಪುರಿ ಮತ್ತು ಪಶ್ಚಿಮದಲ್ಲಿ ದ್ವಾರಕಾ ಎಂಬುದಾಗಿದೆ.












Click it and Unblock the Notifications