ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಡಿ ವಿಚಾರಣೆಗೆ ಹಾಜರಿಯಾಗುತ್ತೇನೆಂದ ಸಿಎಂ
ಹೊಸದಿಲ್ಲಿ ಮಾರ್ಚ್ 4: ದಿಲ್ಲಿಯ ಅಬಕಾರಿ ನೀತಿ ಪ್ರಕರಣದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಎಂಟನೇ ಸಮನ್ಸ್ಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಇಡಿ ಸಮನ್ಸ್ಗಳನ್ನು ಕಾನೂನುಬಾಹಿರವಾಗಿವೆ ಎಂದು ದೂರಿದ ದೆಹಲಿ ಸಿಎಂ ಕೇಜ್ರಿವಾಲ್ ಅವರು ತನಿಖಾ ಸಂಸ್ಥೆಯ ಪ್ರಶ್ನೆಗಳಿಗೆ ಉತ್ತರಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ವಿಚಾರಣೆ ಹಾಜರಾಗಲು ಮಾರ್ಚ್ 12 ರ ನಂತರ ದಿನಾಂಕವನ್ನು ಪ್ರಸ್ತಾಪಿಸಿದ್ದಾರೆಂದು ತಿಳಿದು ಬಂದಿದೆ.

ಕೇಜ್ರಿವಾಲ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ. ಆದರೆ ದೆಹಲಿ ಮುಖ್ಯಮಂತ್ರಿಯನ್ನು ದೈಹಿಕವಾಗಿ ಪ್ರಶ್ನಿಸಲು ತನಿಖಾ ಸಂಸ್ಥೆ ಹಠ ಹಿಡಿದಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಅವಕಾಶವಿಲ್ಲ ಎಂದು ಇಡಿ ಹೇಳಿದೆ.
ಫೆಬ್ರವರಿ 27 ರಂದು ED ತನ್ನ ಎಂಟನೇ ಸಮನ್ಸ್ ನೀಡಿದ ನಂತರ ಅರವಿಂದ್ ಕೇಜ್ರಿವಾಲ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದೇ ಮಾರ್ಚ್ 4 ರಂದು ಕೇಜ್ರಿವಾಲ್ ಏಜೆನ್ಸಿಯ ಪ್ರಧಾನ ಕಛೇರಿಯಲ್ಲಿ ಹಾಜರಾಗಲು ನಿಗದಿತ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಇದಕ್ಕೆ ಹಾಜರಾಗಲು ನಿರಾಕರಿಸಿ ಇಡಿಗೆ ಅರವಿಂದ್ ಕೇಜ್ರಿವಾಲ್ ದಿನಾಂಕವನ್ನು ನೀಡಿದ್ದಾರೆ. ಅದರಲ್ಲೂ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ದೆಹಲಿ ಅಬಕಾರಿ ನೀತಿ (2021-22) ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಲ್ಲಿ ದೆಹಲಿ ಮುಖ್ಯಂಮತ್ರಿ ಅರವಿಂದ್ ಭಾಗಿಯಾಗಿದ್ದಾರೆಂದು ಆರೋಪಿಸಿ ಈ ವಿಚಾರಣೆಗೆ ಇಡಿ ಸಮನ್ಸ ನೀಡಿದೆ. ನೀತಿ ನಿರೂಪಣೆ ಮತ್ತು ಲಂಚದ ಆರೋಪದಂತಹ ವಿಷಯಗಳ ಬಗ್ಗೆ ಇಡಿ ಕೇಜ್ರಿವಾಲ್ ಅವರ ಹೇಳಿಕೆಯನ್ನು ಕೇಳುತ್ತಿದೆ. ಆದರೆ ಇಡಿ ವಿಚಾರಣೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಹಾಜರಾಗುತ್ತಿಲ್ಲ.
ಕೇಜ್ರಿವಾಲ್ ಅವರು ಈ ಹಿಂದೆ ಇಡಿ ನೀಡಿದ ಏಳು ಸಮನ್ಸ್ಗಳನ್ನು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಎಎಪಿ ಹೇಳಿಕೆಯಲ್ಲಿ ಹೆಚ್ಚಿನ ಸಮನ್ಸ್ ಕಳುಹಿಸುವುದನ್ನು ತಡೆಯಲು ಮತ್ತು ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯುವಂತೆ ಇಡಿಗೆ ಒತ್ತಾಯಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಕಳೆದ ವರ್ಷ ಫೆಬ್ರವರಿ 26 ರಂದು ಬಂಧಿಸಿದ್ದರೆ, ರಾಜ್ಯಸಭಾ ಸದಸ್ಯರಾಗಿದ್ದ ಶ್ರೀ ಸಿಂಗ್ ಅವರನ್ನು ಅಕ್ಟೋಬರ್ 5 ರಂದು ಇಡಿ ಬಂಧಿಸಿತ್ತು.
ಆದರೆ ಇದು ರಾಜಕೀಯ ಪ್ರೇರಿತ ವಿಚಾರಣೆ ಎಂದು ಅರವಿಂದ್ ಕೇಜ್ರಿವಾಲ್ ದೂರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂಥಹ ವಿಚಾರಣೆಗಳನ್ನು ಕೇಂದ್ರ ಸರ್ಕಾರ ನಡೆಸುತ್ತದೆ. ಇದು ಬಿಜೆಪಿಗೆ ಇರುವ ಸೋಲಿನ ಭೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಎಎಪಿ ಆರೋಪ ಮಾಡಿದೆ.












Click it and Unblock the Notifications