ಇನ್ನು ಕಾಂಗ್ರೆಸ್ ವಿರುದ್ಧ ಆಮ್ ಆದ್ಮಿ ಸ್ಪರ್ಧಿಸುವುದಿಲ್ವಾ?
ಆದರೆ ಈ ಗುಮಾನಿ/ಅನುಮಾನಗಳನ್ನೆಲ್ಲಾ ಪಕ್ಕಕ್ಕೆ ತಳ್ಳಿರುವ AAP, ಈಗಾಗಲೇ ದಿಲ್ಲಿಯಲ್ಲೇ ಕಾಂಗ್ರೆಸ್ಸಿನ 15 ವರ್ಷದ ದುರಾಡಳಿತದ ಮೇಲೆ ಕ್ಷಕಿರಣ ಬೀರುವುದಾಗಿ ಘೋಷಿಸಿದೆ. AAP ಮುಂದುವರಿದು ಉತ್ತರ ಪ್ರದೇಶದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನ್ನ ಕೈಚಳಕ ತೋರಲು ಈಗಿಂದಲೇ ಸಿದ್ಧತೆ ನಡೆಸಿದೆ.
ತತ್ಸಂಬಂಧ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅವರು ಶುಕ್ರವಾರ ಜಾಡು ಸಂದೇಶ್ ಯಾತ್ರಾ ನಡೆಸಿದ್ದಾರೆ.
ಇದು ಕೇವಲ ಯಾತ್ರೆಗೆ ಮಾತ್ರ ಸೀಮಿತವಾಗಿರದೆ ಆಮ್ ಆದ್ಮಿ ಪಕ್ಷವನ್ನು ಕ್ಷೇತ್ರದಲ್ಲಿ ಬಲಗೊಳಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ರಾಜಕೀಯ ನೆಲಗಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಪ್ರತಿಸ್ಫರ್ಧಿಯಾಗಿ ಕುಮಾರ್ ವಿಶ್ವಾಸ್ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಮನೀಷ್ ಸಿಸೋಡಿಯಾ ಅವರು ಇತ್ತೀಚೆಗಷ್ಟೇ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆಯುತ್ತಿರುವುದು ಕಾಂಗ್ರೆಸ್ನಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಒಟ್ಟಾರೆಯಾಗಿ, ಪ್ರತಿಷ್ಠಿತ ವ್ಯಕ್ತಿಗಳ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮಹಾನ್ ನಾಯಕರುಗಳಿಗೆ ಮಣ್ಣುಮುಕ್ಕಿಸುವುದು AAP ಅಜೆಂಡಾವಾಗಿದೆ ಎನಿಸುತ್ತಿದೆ. ಆದರೆ ಉತ್ತರ ಪ್ರದೇಶದ ಲೋಕೋಪಯೋಗಿ ಸಚಿವ ಶಿವಪಾಲ್ಸಿಂಗ್ ಯಾದವ್ ಅವರು ದೆಹಲಿಯಲ್ಲಿ ಕಂಡುಬಂದಂತೆ ಉತ್ತರ ಪ್ರದೇಶದಲ್ಲೂ AAP ಜಾದೂ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.