ಅಯ್ಯೋ ವಿಧಿಯೇ.. ಗೂಡು ಸೇರುವ ಮುನ್ನ ಶ್ರಮಿಕ್ ರೈಲಿನಲ್ಲಿ ಪ್ರಾಣ ಬಿಟ್ಟವರು 80 ಮಂದಿ!
ನವದೆಹಲಿ, ಮೇ 30: ತಾಯಿ ಸತ್ತಿದ್ದಾಳೆ ಎಂಬ ಪರಿವೆಯೇ ಇಲ್ಲದೆ, ಆಕೆಯನ್ನು ಎಬ್ಬಿಸುವ ವಿಫಲ ಪ್ರಯತ್ನ ನಡೆಸುತ್ತಿದ್ದ ಎರಡು ವರ್ಷದ ಕಂದಮ್ಮನ ವಿಡಿಯೋ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಈ ಮನಕಲಕುವ ಘಟನೆ ಮಾಸುವ ಮುನ್ನವೇ ಬೇಸರ ತರಿಸುವ ಮತ್ತೊಂದು ಮಾಹಿತಿಯನ್ನ ರೈಲ್ವೇ ಅಧಿಕಾರಿಗಳು ಹೊರಹಾಕಿದ್ದಾರೆ.
ಮೇ 9 ರಿಂದ ಮೇ 27 ರವೆರೆಗೂ ಶ್ರಮಿಕ್ ಸ್ಪೆಷಲ್ ರೈಲಿನಲ್ಲಿ ಸುಮಾರು 80 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿರುವ ಸಂಗತಿಯನ್ನು ರೈಲ್ವೇ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ. ಆ ಪೈಕಿ ಕೊರೊನಾ ವೈರಸ್ ಸೋಂಕಿನಿಂದ ಓರ್ವ ಸಾವನ್ನಪ್ಪಿದ್ದರೆ, ಇತರೆ ಆರೋಗ್ಯ ಸಮಸ್ಯೆಗಳಿಂದ 11 ಮಂದಿ ಜೀವ ಬಿಟ್ಟಿದ್ದಾರೆ.
'ಶ್ರಮಿಕ'ರ ಮನಕಲಕುವ ಘಟನೆ: ಹಾಲು ತರುವಷ್ಟರಲ್ಲಿ ಕೊನೆಯುಸಿರೆಳೆದ ಕಂದಮ್ಮ
ಮಹಾಮಾರಿ ಕೋವಿಡ್-19 ನ ತಡೆಗಟ್ಟಲು ಘೋಷಣೆಯಾದ ಲಾಕ್ ಡೌನ್ ನಿಂದಾಗಿ ದಿನಗೂಲಿಯನ್ನೇ ನೆಚ್ಚಿಕೊಂಡಿದ್ದ ಹಲವು ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಯಿತು. ಕೈಯಲ್ಲಿ ದುಡ್ಡಿಲ್ಲದೆ, ಹೊಟ್ಟೆಗೆ ಆಹಾರವಿಲ್ಲದೆ, ಸ್ವಗ್ರಾಮಕ್ಕೆ ತೆರಳಲು ಲೆಕ್ಕವಿಲ್ಲದಷ್ಟು ಕಾರ್ಮಿಕರು ಬರಿಗಾಲಲ್ಲೇ ಪ್ರಯಾಣ ಬೆಳೆಸಿದ್ದರು.
ರೈಲು ಶೌಚಾಲಯದಲ್ಲಿ ವಲಸೆ ಕಾರ್ಮಿಕನ ಮೃತದೇಹ ಪತ್ತೆ.!
ವಲಸೆ ಕಾರ್ಮಿಕರಿಗೆ ಸಹಕಾರಿ ಆಗುವ ನಿಟ್ಟಿನಲ್ಲಿ ಮೇ 1 ರಿಂದ ಶ್ರಮಿಕ್ ಸ್ಪೆಷಲ್ ರೈಲು ಸಂಚಾರ ಆರಂಭಿಸಿತ್ತು. ಲಕ್ಷಾಂತರ ಶ್ರಮಿಕರು ವಿಶೇಷ ರೈಲಿನ ಮುಖಾಂತರ ತಮ್ಮ ಸ್ವಗ್ರಾಮಗಳನ್ನು ಸೇರಿದ್ದಾರೆ. ಸ್ವಗ್ರಾಮಕ್ಕೆ ಸೇರುವ ಮುನ್ನವೇ ಕೆಲ ವಲಸೆ ಕಾರ್ಮಿಕರು ಕೊನೆಯುಸಿರೆಳೆದಿದ್ದು ಮಾತ್ರ ದುರಂತ.