ತಮಿಳುನಾಡಿನಲ್ಲಿ ಅಣ್ಣಾಮಲೈ ಕಂಟ್ರೋಲ್ ಮಾಡಲು ಬಿಜೆಪಿ ಹೈಕಮಾಂಡ್ ಫ್ಲ್ಯಾನ್: ನಿರ್ಮಲಾ ಸೀತಾರಾಮನ್ಗೆ ಉಸ್ತುವಾರಿ ಪಟ್ಟ
ಚೆನ್ನೈ, ಅಕ್ಟೋಬರ್ 03: ತಮಿಳುನಾಡಿನಲ್ಲಿ ಅಣ್ಣಾಮಲೈ ಕಿರಿಕ್ ಮಾಡುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಜೊತೆಗಿನ ಸ್ನೇಹವನ್ನು ಎಐಎಡಿಎಂಕೆ ಮುರಿದುಕೊಂಡಿದೆ. ಅಣ್ಣಾಮಲೈ ಅವರು ಸುಖಾಸುಮ್ಮನೇ ತಮ್ಮ ಪಕ್ಷದ ಮಹಾನಾಯಕರ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಎಐಎಡಿಎಂಕೆ ಆರೋಪಿಸಿದ್ದಾರೆ. ತಮಿಳುನಾಡಿನಲ್ಲಿ ಅಣ್ಣಾಮಲೈರನ್ನು ಕಂಟ್ರೋಲ್ ಮಾಡಲು ಬಿಜೆಪಿ ಹೈಕಮಾಂಡ್ ಮೆಗಾಪ್ಲ್ಯಾನ್ ಮಾಡಿದೆ. ಅದೇನೆಂದು ತಿಳಿಯಲು ಈ ವರದಿ ಓದಿ.
ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಎಐಎಡಿಎಂಕೆ ಕಳೆದುಕೊಂಡಿರುವುದು ಬಿಜೆಪಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರನ್ನು ದೆಹಲಿಗೆ ಕರೆಸಿರುವ ಬಿಜೆಪಿ ಹೈಕಮಾಂಡ್ ಹಲವು ಸುತ್ತಿನ ಮಾತುಕತೆ ನಡೆಸಿದೆ.

ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗೆ ಕಡಿವಾನ ಹಾಕಲು ಬಿಜೆಪಿ ಕೇಂದ್ರ ನಾಯಕತ್ವ ಮುಂದಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಮಿಳುನಾಡಿ ಉಸ್ತುವಾರಿ ನೀಡಲು ಬಿಜೆಪಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ಹಿರಿಯ ನಾಯಕಿ ನಿರ್ಮಲಾ ಸೀತಾರಾಮ್ ಅವರು ಮೂಲತಃ ತಮಿಳರು. ಈ ಹಿನ್ನೆಲೆ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ವಾರ ಬಿಜೆಪಿ ಮೈತ್ರಿಯನ್ನು ಎಐಎಡಿಎಂಕೆ ತೊರೆಯಿತು. ತಮ್ಮ ಪಕ್ಷದ ಮುಖಂಡರಾದ ಅಣ್ಣಾದೊರೈ, ಎಂಜಿಆರ್ ಹಾಗೂ ಜೈಲಲಿತಾ ವಿರುದ್ಧ ಅಣ್ಣಾಮಲೈ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಎಐಎಡಿಎಂಕೆ ಮುಖಂಡರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈರನ್ನು ಪಕ್ಷದಿಂದ ಹೊರಹಾಕಬೇಕು ಅಂದಾಗಿ ಮಾತ್ರ ಎನ್ಡಿಎ ಮೈತ್ರಿಕೂಟದಲ್ಲಿ ಮುಂದುವರಿಯಲು ಸಾಧ್ಯವೆಂದು ಎಐಎಡಿಎಂಕೆ ಹೇಳಿದೆ.
ನಿರ್ಮಲಾ ಸೀತಾರಾಮನ್ ಭೇಟಿಯಾದ ಅಣ್ಣಾಮಲೈ
ಅಣ್ಣಾಮಲೈ ಸೋಮವಾರ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾರೆ.

ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ರಾಷ್ಟ್ರೀಯ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆಗಿನ ಜಗಳದ ಕುರಿತು ಅವರು ವಿವರವಾಗಿ ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಎಐಎಡಿಎಂಕೆ ಮೈತ್ರಿ ಕುರಿತು ಬಿಜೆಪಿ ಹೈಕಮಾಂಡ್ ಚರ್ಚೆ ನಡೆಸಿದ್ದು, ಪಕ್ಷದ ನಿಲುವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಅಣ್ಣಾಮಲೈ ಅವರ ಭೇಟಿಯ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ಚೆನ್ನೈನಲ್ಲಿ ನಡೆಯಬೇಕಿದ್ದ ಪಕ್ಷದ ರಾಜ್ಯ ಜಿಲ್ಲಾ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳ ಘಟಕದ ಸಮಾಲೋಚನಾ ಸಭೆಯನ್ನು ಮುಂದೂಡಲಾಗಿದೆ.

ಅಣ್ಣಾಮಲೈ ಅವರ 'ಎನ್ ಮನ್ ಎನ್ ಮಕ್ಕಳ್' (ನನ್ನ ಭೂಮಿ, ನನ್ನ ಜನರು) ಯಾತ್ರೆಯ ಮೂರನೇ ಹಂತವನ್ನು ಅಕ್ಟೋಬರ್ 4 ರಿಂದ ಅಕ್ಟೋಬರ್ 6 ರ ವರೆಗೆ ಮುಂದೂಡಲಾಗಿದೆ.
ಪತ್ರಕರ್ತೆ ಜೊತೆ ಅಣ್ಣಾಮಲೈ ಕಿರಿಕ್
ಅಣ್ಣಾಮಲೈ ಅವರು ಪತ್ರಕರ್ತೆಯೊಬ್ಬರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಸಿಡಿಗೊಂಡ ಅಣ್ಣಾಮಲೈ ಆಕೆಯನ್ನು ಕ್ಯಾಮಾರಾದ ಮುಂದೆ ಬಂದು ಮಾತನಾಡುವಂತೆ ಹೇಳಿದ್ದಾರೆ. ನಾನು ನಿಮ್ಮಂತವರನ್ನು ಬಿಡುವುದಿಲ್ಲವೆಂದು ಬೆದರಿಕೆ ಒಡ್ಡಿದ್ದಾರೆ. ಇದು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ, ಅಣ್ಣಾಮಲೈ ಅವರು ಬಿಜೆಪಿಗೆ ನುಂಗಲಾಗದ ತುತ್ತಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ.












Click it and Unblock the Notifications