ಬಿಜೆಪಿ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಅಣ್ಣಾ ಹಜಾರೆ
ರಾಳೇಗಣ ಸಿದ್ಧಿ, ಜುಲೈ 30: ಕೇಂದ್ರ ಮಟ್ಟದಲ್ಲಿ ಲೋಕಪಾಲ ನೇಮಕದ ವಿಚಾರದಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 2ರಿಂದ ಕೇಂದ್ರ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದ್ದಾರೆ.
ಭ್ರಷ್ಟಾಚಾರಮುಕ್ತ ದೇಶ ನಿರ್ಮಾಣಕ್ಕಾಗಿ ತಮ್ಮ ಚಳವಳಿಗೆ ಕೈಜೋಡಿಸುವಂತೆ ಅವರು ಜನರಿಗೆ ಮನವಿ ಮಾಡಿದ್ದಾರೆ.
'ಮಹಾತ್ಮ ಗಾಂಧಿ ಅವರ ಜನ್ಮದಿನೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದ ಅಹ್ಮದ್ನಗರದಲ್ಲಿರುವ ನನ್ನ ಊರಾಗ ರಾಳೇಗಣ ಸಿದ್ಧಿಯಲ್ಲಿ ನಿರಶನ ಆರಂಭಿಸಲಿದ್ದೇನೆ' ಎಂದು ಅಣ್ಣಾ ಹಜಾರೆ ತಿಳಿಸಿದ್ದಾರೆ.

ಲೋಕಪಾಲರನ್ನು ನೇಮಿಸಿ, 2014 ಜನವರಿಯಲ್ಲಿ ಸಂಸತ್ನಿಂದ ಅನುಮೋದನೆ ಪಡೆದು ರಾಷ್ಟ್ರಪತಿಯ ಸಹಿಯನ್ನೂ ಪಡೆದುಕೊಂಡಿರುವ ಲೋಕಪಾಲ ಮಸೂದೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದ ಎನ್ಡಿಎ ಸರ್ಕಾರ ಮಾತು ತಪ್ಪಿದೆ.
ಭ್ರಷ್ಟಾಚಾರವನ್ನು ಹತ್ತಿಕ್ಕುವ ವಿಚಾರದಲ್ಲಿ ಈ ಸರ್ಕಾರದಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ. ಲೋಕಪಾಲರ ನೇಮಕದಲ್ಲಿನ ವಿಳಂಬದ ಕಾರಣಕ್ಕೆ ಅನೇಕ ಕಾರಣಗಳನ್ನು ನೀಡುತ್ತಿದೆ ಎಂದು ಅಣ್ಣಾ ಹಜಾರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನೇತೃತ್ವದ ಲೋಕಪಾಲ ಆಯ್ಕೆ ಸಮಿತಿಯು ಭ್ರಷ್ಟಾಚಾರ ನಿಗ್ರಹ ಓಂಬುಡ್ಸ್ಮನ್ ಮತ್ತು ಸದಸ್ಯರನ್ನು ನೇಮಿಸಲು ಅನುಕೂಲವಾಗುವಂತೆ ಹೆಸರುಗಳನ್ನು ಶಿಫಾರಸು ಮಾಡಲು ಹುಡುಕಾಟದ ಸಮಿತಿಯೊಂದರ ನೇಮಕಕ್ಕೆ ಸಭೆ ನಡೆಸಲಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ಗೆ ತಿಳಿಸಿತ್ತು.
ಕೇಂದ್ರ ಸರ್ಕಾರದ ಈ ವಿವರಣೆ ಬಗ್ಗೆ ಸುಪ್ರೀಂಕೋರ್ಟ್ ಕಳೆದ ವಾರ ಅತೃಪ್ತಿ ವ್ಯಕ್ತಪಡಿಸಿತ್ತು.
ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲರ ನೇಮಕಕ್ಕೆ ಆಗ್ರಹಿಸಿ ಅಣ್ಣಾ ಹಜಾರೆ ನೇತೃತ್ವದಲ್ಲಿ 2011ರಲ್ಲಿ ಉಪವಾಸ ಸತ್ಯಾಗ್ರಹ ನಡೆದಿತ್ತು. 12 ದಿನ ನಡೆದಿದ್ದ ಈ ಹೋರಾಟಕ್ಕೆ ದೇಶದಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿತ್ತು.
ಕೊನೆಗೆ ಒತ್ತಡಕ್ಕೆ ಮಣಿದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಲೋಕಪಾಲ ಮಸೂದೆಯನ್ನು ಅಂಗೀಕರಿಸಿತ್ತು.












Click it and Unblock the Notifications