ಅಮಿತ್ ಶಾ ಭೇಟಿ; ಪಹಾಡಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಘೋಷಣೆ ಸಾಧ್ಯತೆ
ಶ್ರೀನಗರ, ಅ.04: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿದ್ದಾರೆ. ಅವರು ಮೂರು ದಿನಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವೇಳೆ ಪಹಾಡಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನದ ವಿಷಯದ ಕುರಿತು ಅಮಿತ್ ಶಾ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರಾಡಳಿತ ಪ್ರದೇಶ (ಯುಟಿ) ಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಹೇಳಿದ್ದಾರೆ.
ಅಮಿತ್ ಶಾ ಭೇಟಿ ಮುನ್ನ ನಡೆದ ಅವಳಿ ಸ್ಫೋಟದ ಹಿಂದೆ ಲಷ್ಕರ್-ಎ-ತೊಯ್ಬಾ ಕೈವಾಡ!
"ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿಗಾಗಿ ಇಂದು ಜಮ್ಮು ತಲುಪಿದೆ. ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಸಂವಹನ ನಡೆಸಲು ಉತ್ಸುಕನಾಗಿದ್ದೇನೆ" ಎಂದು ಗೃಹ ಸಚಿವರು ಸೋಮವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಅವರು ಇಮ್ಮು ಕಾಶ್ಮೀರದಲ್ಲಿ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಂಗಳವಾರ ಜಮ್ಮು ಪ್ರದೇಶದ ರಾಜೌರಿ ಜಿಲ್ಲೆಯಲ್ಲಿ ಮತ್ತು ಇನ್ನೊಂದು ಬುಧವಾರ ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆಯಲಿದೆ.
ಆರ್ಟಿಕಲ್ 370 ರದ್ದತಿ ಮತ್ತು ಹಿಂದಿನ ರಾಜ್ಯದ ವಿಭಜನೆಯ ನಂತರ ಅಮಿತ್ ಶಾ ಜಮ್ಮುವಿಗೆ ಮೊದಲ ಭೇಟಿ ಮತ್ತು ಕಾಶ್ಮೀರಕ್ಕೆ ಅವರ ಎರಡನೇ ಭೇಟಿಯಾಗಿದೆ.
ಜೆ & ಕೆ ಬಿಜೆಪಿ ಪದಾಧಿಕಾರಿಗಳ ಪ್ರಕಾರ, ಪಹಾಡಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನದ ವಿಷಯವು ಗೃಹ ಸಚಿವರ ಭೇಟಿಯ ಸಮಯದಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.
ಎಸ್ಟಿ ಸ್ಥಾನಮಾನವನ್ನು ಹೊಂದಿರುವ ಗುಜ್ಜರ್ ಸಮುದಾಯವು ಪಹಾಡಿಗಳಿಗೆ ಸ್ಥಾನಮಾನ ನೀಡುವ ಕ್ರಮವನ್ನು ವಿರೋಧಿಸುತ್ತಿದೆ. ಏಕೆಂದರೆ, ಈ ಕ್ರಮವು ತಮ್ಮ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತದೆ ಎಂದು ಅವರು ನಂಬಿದ್ದಾರೆ. ಪಹಾಡಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನವನ್ನು ವಿರೋಧಿಸಿ ರಜೌರಿ, ಪೂಂಚ್ ಮತ್ತು ಜಮ್ಮು ಪ್ರದೇಶಗಳಲ್ಲಿ ಕಳೆದ ವಾರದಿಂದ ಗುಜ್ಜರ್ ಜನಾಂಗದವರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಮಿತ್ ಶಾ ಭೇಟಿಯ ವೇಳೆ ಸಮುದಾಯದ ಎಸ್ಟಿ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಘೋಷಣೆ ಮಾಡಲಾಗುವುದು ಎಂದು ಆಲ್ ಜೆ & ಕೆ ಪಹಾಡಿ ಸಾಂಸ್ಕೃತಿಕ ಮತ್ತು ಕಲ್ಯಾಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಫ್ಜಲ್ ಖಾನ್ ಹೇಳಿದ್ದಾರೆ. "ನಮ್ಮ ಸಮುದಾಯದ ಸದಸ್ಯರು ವರ್ಷಗಳಿಂದ ಈ ಸ್ಥಾನಮಾನದಿಂದ ವಂಚಿತರಾಗಿದ್ದಾರೆ. ಈಗ, ನಮಗೆ ಎಸ್ಟಿ ಸ್ಥಾನಮಾನ ಸಿಗುವ ಸಮಯ ಬಂದಿದೆ, ಅದು ನಮ್ಮ ಹಕ್ಕು" ಎಂದಿದ್ದಾರೆ.
ಈ ಹಿಂದೆ, ಜೆ & ಕೆ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಅವರು ತಮ್ಮ ಭೇಟಿಯ ಸಮಯದಲ್ಲಿ ಷಾ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಎಂದು ಸೂಚಿಸಿದ್ದರು. "ಹೌದು, ಅಮಿತ್ ಶಾ ಅವರು ಯುಟಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪಹಾಡಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನದ ಬಗ್ಗೆ ಪ್ರಮುಖ ಘೋಷಣೆ ಮಾಡುತ್ತಾರೆ" ಎಂದು ಅವರು ಕಳೆದ ವಾರ ಹೇಳಿದ್ದರು.
ರಾಜ್ಯ ಬಿಜೆಪಿ ನಾಯಕರೊಬ್ಬರ ಪ್ರಕಾರ, ಪಹಾಡಿ ಸಮುದಾಯದವರು ಪ್ರಭಾವ ಹೊಂದಿರುವ ಪ್ರದೇಶಗಳಲ್ಲಿ ಗೃಹ ಸಚಿವರ ್ಯಾಲಿಗಳನ್ನು ನಿಗದಿಪಡಿಸಲಾಗಿದೆ.
ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಶಾಸಕ ಸುರೀಂದರ್ ಅಂಬರದಾರ್ ಅವರು ಹಲವಾರು ಅಭಿವೃದ್ಧಿ ಯೋಜನೆಗಳ ಘೋಷಣೆಯನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.