ಮೃತ ಯೋಧರ ಕುಟುಂಬಗಳಿಗೆ 1 ಕೋಟಿ ರು. ದಾನ ನೀಡಿದ ಅಕ್ಷಯ್
ಇದೇ ತಿಂಗಳ 11ರಂದು ಚತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದ್ದ ನಕ್ಸಲರ ದಾಳಿಯಲ್ಲಿ 9 ಯೋಧರು ಅಸುನೀಗಿ, 7 ಯೋಧರು ಗಾಯಗೊಂಡಿದ್ದರು.
ನವದೆಹಲಿ, ಮಾರ್ಚ್ 16: ಯೋಧರ ಕುಟುಂಬಗಳಿಗೆ ನೆರವಾಗುವ ನಟ ಅಕ್ಷಯ್ ಕುಮಾರ್ ಅವರ ಕಾಯಕ ಮುಂದುವರಿದಿದೆ.
ಇತ್ತೀಚೆಗಷ್ಟೇ ಚತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ ಹುತಾತ್ಮರಾದ ಕೇಂದ್ರೀಯ ಮೀಸಲು ಪಡೆಯ (ಸಿಆರ್ ಪಿಎಫ್) 219 ಬೆಟಾಲಿಯನ್ ನ ಯೋಧರ ಕುಟುಂಬಗಳಿಗೆ ಅವರು ನೆರವಿನ ಹಸ್ತ ಚಾಚಿದ್ದಾರೆ. ಹುತಾತ್ಮ ಯೋಧರ ಕುಟುಂಬಗಳಿಗೆ ಅಕ್ಷಯ್ ಸುಮಾರು 1.08 ಕೋಟಿ ರು. ಆರ್ಥಿಕ ಸಹಾಯ ನೀಡಿದ್ದಾರೆಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಇದೇ ತಿಂಗಳ 11ರಂದು ಚತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಯೋಧರು ಎಂದಿನಂತೆ ತಮ್ಮ ದೈನಂದಿನ ಪಥಸಂಚಲನದಲ್ಲಿ ನಿರತಾರಾಗಿದ್ದಾಗ ನಕ್ಸಲರು ದಾಳಿ ನಡೆಸಿದ್ದರು. ಆ ದಾಳಿಯಲ್ಲಿ 9 ಯೋಧರು ಅಸುನೀಗಿ, 7 ಯೋಧರು ಗಾಯಗೊಂಡಿದ್ದರು.
ಘಟನೆಯಿಂದ ವಿಚಲಿತರಾಗಿದ್ದ ಅಕ್ಷಯ್, ಆಗಿನಿಂದಲೂ ಆ ಪ್ರಾಂತ್ಯದ ಐಪಿಎಸ್ ಅಧಿಕಾರಿ ಅಮಿತ್ ಲೋಧಾ ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ನಕ್ಸಲರೊಂದಿಗೆ ಸುಕ್ಮಾಲದಲ್ಲಿ ಮಡಿದ ಯೋಧರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವುದಾಗಿ ಅವರು ಅಧಿಕಾರಿಗಳ ಬಳಿ ತಿಳಿಸಿದ್ದರೆಂದು ವರದಿಯಲ್ಲಿ ಹೇಳಲಾಗಿದೆ.