ನಾವು ಸೈಕಲಿನ ಎರಡು ಗಾಲಿಗಳಿದ್ದಂತೆ-ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್
ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಪರವಾಗಿ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಲಕ್ನೊ, ಜನವರಿ 29: ಪ್ರತಿಷ್ಠಿತ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತ ಪ್ರಚಾರಕ್ಕೆ ಚಾಲನೆ ನೀಡುವ ಸಲುವಾಗಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ರವಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ್ದು ಐತಿಹಾಸಿಕ ಮೈತ್ರಿ ಎಂದು ಉಭಯ ನಾಯಕರು ಬಣ್ಣಿಸಿದರು.['ರಾಮ ಮಂದಿರ ಕಟ್ಟುತ್ತೇವೆ'... ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ]
ಪತ್ರಿಕಾಗೋಷ್ಠಿಗೆ ಬಂದ ರಾಹುಲ್ ಮತ್ತು ಅಖಿಲೇಶ್ ಪರಸ್ಪರ ಆಲಂಗಿಸಿಕೊಂಡು ಪುಷ್ಪಗುಚ್ಛ ವಿನಿಮಯ ಮಾಡಿಕೊಂಡರು. ನಂತರ ಪತ್ರಿಕಾಗೋಷ್ಠಿ ಆರಂಭವಾಯಿತು. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕಿಕ್ಕಿರುದು ತುಂಬಿದ್ದರು. ಎರಡೂ ಪಕ್ಷಗಳ ನಡುವೆ ಮೈತ್ರಿ ಗಟ್ಟಿಯಾಗಿದೆ ಎಂದು ಬಿಂಬಿಸುವ ಸಲುವಾಗಿ ಉಭಯ ಪಕ್ಷಗಳ ಕಡೆಯಿಂದ ಪತ್ರಿಕಾಗೋಷ್ಠಿ ನಡೆಸುವ ತೀರ್ಮಾನವನ್ನು ಕಳೆದವಾರ ತೆಗೆದುಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಭಾನುವಾರ ಇಬ್ಬರೂ ಯುವ ನಾಯಕರು ಪತ್ರಿಕಾಗೋಷ್ಠಿ ನಡೆಸಿದರು.[ಪಂಚರಾಜ್ಯ ಚುನಾವಣಾ ಪ್ರಚಾರಕ್ಕೆ ಮಹಿಳಾ ಮಣಿಗಳ ಗ್ಲಾಮರ್]

ಯುಪಿ ಜನತೆ ನಮ್ಮೊಂದಿಗಿದ್ದಾರೆ
"ದ್ವೇಷ ಮತ್ತು ಒಡೆಯುವ ರಾಜಕಾರಣಕ್ಕೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿಕೂಟ ಉತ್ತರ ನೀಡಿದೆ. ಬಿಜೆಪಿ ಮತ್ತು ಆರ್.ಎಸ್.ಎಸ್ ನ ಆಕ್ರಮಣಕಾರಿ ರಾಜಕೀಯವನ್ನು ನಾವು ಕೊನೆಗೊಳಿಸಲು ಬಯಸಿದ್ದೇವೆ," ಎಂದು ರಾಹುಲ್ ಗಾಂಧಿ ಹೇಳಿದರು. "ಇದೊಂದು ಅವಕಾಶವಾದಿ ಮೈತ್ರಿಯಲ್ಲ. ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್.ಎಸ್.ಎಸ್-ಬಿಜೆಪಿ ಯವರಿಗೆ ಉತ್ತರ ಪ್ರದೇಶದ ಜನ ನಮ್ಮ ಜತೆಗಿದ್ದಾರೆ ಎಂಬುದನ್ನು ತೋರಿಸುತ್ತೇವೆ," ಎಂದರು.

ಅಖೀಲೇಶ್ಗೆ ಕೆಲಸ ಮಾಡಲು ಬಿಡಲಿಲ್ಲ
"ನಾನು ಈ ಹಿಂದೆಯೂ ಹೇಳಿದ್ದೆ. ಅಖಿಲೇಶ್ ಒಬ್ಬ ಒಳ್ಳೆ ನಾಯಕ. ಆದರೆ ಆತನನ್ನು ಕೆಲಸ ಮಾಡಲು ಉತ್ತರ ಪ್ರದೇಶದಲ್ಲಿ ಬಿಡಲಿಲ್ಲ," ಎಂದು ಸಮಾಜವಾದಿ ಪಕ್ಷದ ಬಿಕ್ಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಅಚ್ಚೇದಿನ್ ಕಂಡಿದ್ದೀರಾ?
ಇನ್ನು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, " ನಾವು ಚಳಿಗಾಲ ನೋಡಿದ್ದೇವೆ, ಬೇಸಿಗೆ, ಮಳೆಯನ್ನೂ ನೋಡಿದ್ದೇವೆ. ಈ ಹಿಂದಿನ ಪ್ರಣಾಳಿಕೆಗಳನ್ನೂ ಕಂಡಿದ್ದೇವೆ. ಯಾರಾದರೂ ಒಳ್ಳೆ ದಿನಗಳನ್ನು ಕಂಡಿದ್ದಾರಾ?" ಎಂದು ನರೇಂದ್ರ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಸೈಕಲಿನ ಗಾಲಿಗಳಿದ್ದಂತೆ
"ನಾವು ಲೋಕಸಭೆಯಲ್ಲೂ ಜತೆಗಿದ್ದೆವು. ನಾವು ಒಬ್ಬರಿಗೊಬ್ಬರು ಚೆನ್ನಾಗಿ ಪರಿಚಯ. ನಾವಿಬ್ಬರು ಜತೆಗೆ ಕೆಲಸ ಮಾಡುವುದು ಉತ್ತಮ ವಿಚಾರ. ನಾವು ಸೈಕಲಿನ ಎರಡು ಚಕ್ರಗಳಿದ್ದಂತೆ. ನಮ್ಮ ನಡುವೆ ದೊಡ್ಡ ವಯಸ್ಸಿನ ಅಂತರವೂ ಇಲ್ಲ," ಎಂದು ಅಖಿಲೇಶ್ ಹೇಳಿದರು.

ಅಮೇಥಿ, ರಾಯ್ ಬರೇಲಿಯಲ್ಲಿ ಯಾರು ಸ್ಪರ್ಧೆ?
ಆದರೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರತಿನಿಧಿಸುವ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಯಾವ ಪಕ್ಷ ಸ್ಪರ್ಧಿಸಲಿದೆ ಎಂಬ ಪ್ರಶ್ನೆಗೆ ಎರಡೂ ನಾಯಕರು ನುಣುಚಿಕೊಂಡರು. "ಇದು ಪ್ರಾದೇಶಿಕ ವಿಚಾರ, ಕೇಂದ್ರೀಯ ವಿಚಾರವಲ್ಲ," ಅಂತ ರಾಹುಲ್ ಗಾಂಧಿ ಹೇಳಿದರು.

ಪ್ರಿಯಾಂಕಾ ಕಾಂಗ್ರೆಸ್ ಆಸ್ತಿ
ಇನ್ನು ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಪಾತ್ರ ಕುರಿತು ಕೇಳಿದ ಪ್ರಶ್ನೆಗೆ, "ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪಕ್ಷದ ಆಸ್ತಿ. ಆಕೆ ನನಗೆ ತುಂಬಾ ಸಹಾಯ ಮಾಡ್ತಾರೆ. ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕೋ ಬೇಡವೋ ಎನ್ನುವುದನ್ನು ಆಕೆಯೇ ನಿರ್ಧರಿಸುತ್ತಾರೆ," ಎಂದಿದ್ದಾರೆ.

ಹೆಂಡತಿ ಪ್ರಚಾರಕ್ಕೆ ಇಲ್ವಾ?
ಇನ್ನು ಚುನಾವಣೆಯಲ್ಲಿ ಡಿಂಪಲ್ ಯಾದವ್ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಅಖಿಲೇಶ್, "ಆಕೆ ಲೋಕಸಭಾ ಸದಸ್ಯೆ. ಪ್ರಚಾರಕ್ಕೆ ಬರುವುದನ್ನು ಆಕೆ ನಿರ್ಧರಿಸುತ್ತಾರೆ," ಎಂದಿದ್ದಾರೆ. ಪ್ರಿಯಾಂಕಾ ಮತ್ತು ಡಿಂಪಲ್ ಇಬ್ಬರೂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರಲಿಲ್ಲ. ಪತ್ರಿಕಾಗೋಷ್ಠಿಯ ನಂತರ ಉಭಯ ನಾಯಕರು ಜಂಟಿ ರ್ಯಾಲಿ ನಡೆಸಿದರು.
(ಚಿತ್ರ ಕೃಪೆ: ಪಿಟಿಐ, ಎಎನ್ಐ)












Click it and Unblock the Notifications