'ಇಡಿ'ಯಿಂದ ಸತತ ಆರು ಗಂಟೆ ಪಿ. ಚಿದಂಬರಂ ವಿಚಾರಣೆ
ನವದೆಹಲಿ, ಜೂನ್ 5: ತನಿಖಾಧಿಕಾರಿಗಳ ಮುಂದೆ ಇಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗೆ ಸತತ ಆರು ಗಂಟೆ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಏರ್ಸೆಲ್ - ಮ್ಯಾಕ್ಸಿಸ್ ಪ್ರಕರಣದಲ್ಲಿ ವಿಚಾರಣೆಗಾಗಿ ತನಿಖಾಧಿಕಾರಿಗಳ ಮುಂದೆ ಇಂದು (ಜೂನ್ 5) ಹಾಜರಾಗುವಂತೆ ಅವರಿಗೆ ಸೋಮವಾರ ನೋಟಿಸ್ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾದ ಅವರು ತನಿಖಾಧಿಕಾರಿಗಳ ಪ್ರಶ್ನೆಗಳನ್ನು ಎದುರಿಸಿದರು.
ಈ ಹಿಂದೆ ಮೇ 30ರಂದು ಏರ್ಸೆಲ್ - ಮಾಕ್ಸಿಸ್ ಪ್ರಕರಣದಲ್ಲಿ ತಮ್ಮನ್ನು ಜಾರಿ ನಿರ್ದೇಶನಾಲಯ ಬಂಧಿಸದಂತೆ ಕೋರಿ ಚಿದಂಬರಂ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಸಂದರ್ಭ ಹೈಕೋರ್ಟ್ ಜೂನ್ 5ರ ವರೆಗೆ ಚಿದಂಬರಂ ಅವರನ್ನು ಬಂಧಿಸದಂತೆ ನಿರ್ದೇಶನ ನೀಡಿತ್ತು.
ಇದೀಗ ಮತ್ತೆ ಅವರು ಏರ್ಸೆಲ್ - ಮಾಕ್ಸಿಸ್ ಪ್ರಕರಣದಲ್ಲಿ ತಮ್ಮನ್ನು ಜಾರಿ ನಿರ್ದೇಶನಾಲಯ ಬಂಧಿಸದಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಅವರಿಗೆ ನ್ಯಾಯಾಲಯ ಜುಲೈ 10ರವರೆಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಸದ್ಯಕ್ಕೆ ಅವರಿಗೆ ಬಂಧನ ಭೀತಿ ದೂರವಾಗಿದೆ.