ಭಾರತದ ಜತೆಗಿನ ಗಂಭೀರ ಸಂಘರ್ಷ ಚೀನಾಕ್ಕೆ ಒಳ್ಳೆಯದಲ್ಲ: ಏರ್ ಚೀಫ್ ಮಾರ್ಷಲ್
ನವದೆಹಲಿ, ಡಿಸೆಂಬರ್ 29: ಭಾರತದೊಂದಿಗಿನ ಗಂಭೀರ ಸಶಸ್ತ್ರ ಕಾದಾಟವು ಜಾಗತಿಕ ಮಟ್ಟದಲ್ಲಿ ಚೀನಾದ ಮುಖ್ಯ ಆಸಕ್ತಿಯಾಗಿಲ್ಲ ಎಂದು ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭಡೌರಿಯಾ ಹೇಳಿದ್ದಾರೆ. ಲಡಾಖ್ ಗಡಿ ಭಾಗದಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹಲವು ತಿಂಗಳಿಂದ ಮುಂದುವರಿದಿರುವ ಕುರಿತು ಅವರು ಚರ್ಚಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಜಾಗತಿಕ ಭೂರಾಜಕೀಯದಲ್ಲಿನ ಅಸ್ಥಿರತೆ ಮತ್ತು ಹೆಚ್ಚುತ್ತಿರುವ ಅನಿಶ್ಚಿತತೆಗಳು ಹಾಗೂ ಜಾಗತಿಕ ಭದ್ರತೆಗೆ ಮುಖ್ಯ ಶಕ್ತಿಗಳ ಅಸಮರ್ಪಕ ಕೊಡುಗೆಯ ಕುರಿತು ಪ್ರಸ್ತಾಪಿಸಿದ ಅವರು, ಚೀನಾ ತನ್ನ ಶಕ್ತಿಯನ್ನು ಪ್ರದರ್ಶಿಸಲು ಇವು ನೆರವಾಗಿವೆ ಎಂದರು.
ಚೀನಾದ ಕ್ರಮಗಳ ಹಿಂದಿನ ಕಾರಣಗಳನ್ನು ಅರಿತುಕೊಳ್ಳಲು ಇವು ಬಹು ಮುಖ್ಯವಾಗಿವೆ. ಯುದ್ಧ ರೀತಿಯ ಸನ್ನಿವೇಶದಿಂದ ಹೊಸ ಸಂರಚನೆ ಮತ್ತು ತಂತ್ರಜ್ಞಾನದ ಕ್ರೋಢೀಕರಣ ಅಥವಾ ಸೇನಾ ಪ್ರಾಬಲ್ಯದ ದುರದೃಷ್ಟವಶಾತ್ ಘಟನೆಗಳಾಗಿ ಇವು ಬದಲಾಗಿವೆ ಎಂದು ಹೇಳಿದರು.

'ಜಾಗತಿಕ ನೆಲೆಯಲ್ಲಿ ಯಾವುದೇ ಗಂಭೀರ ಸಂಘರ್ಷವು ಚೀನಾಕ್ಕೆ ಒಳಿತಲ್ಲ. ಚೀನಾದ ಆಕಾಂಕ್ಷೆಯು ಜಾಗತಿಕವಾಗಿದ್ದರೆ, ಗಡಿಯಲ್ಲಿನ ಬಿಕ್ಕಟ್ಟು ಅದರ ಭವ್ಯ ಯೋಜನೆಗೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ಅವರ ನಡೆಗಳ ಉದ್ದೇಶದ ಸಾಧ್ಯತೆಗಳೇನಾಗಿರಬಹುದು?' ಎಂದು ಪ್ರಶ್ನಿಸಿದರು.
'ಅದು ಸೂಕ್ತ ಬಲವರ್ಧನೆ ನಿಯಂತ್ರಣಗಳೊಂದಿಗೆ ನೀಡುತ್ತಿರುವ ಸೇನಾ ಸೂಚನೆ ಅಥವಾ ಪ್ರಾಬಲ್ಯದ ಪ್ರಯತ್ನಗಳೇ? ಯುದ್ಧದಂತಹ ಸನ್ನಿವೇಶಗಳಿಗೆ ವೆಸ್ಟರ್ನ್ ಥಿಯೇಟರ್ ಪಡೆಗಳನ್ನು ನಿಯೋಜಿಸುವ ಮತ್ತು ತರಬೇತಿ ನೀಡುವ ಕಾರ್ಯವೇ? ಗಲ್ವಾನ್ ಸಂಘರ್ಷದ ಘಟನೆ ಅದರ ಒಂದು ಹಂತವೇ? ತನ್ನ ಹೊಸ ಸಂರಚನೆಗಳು ಮತ್ತು ತಂತ್ರಜ್ಞಾನಗಳೊಂದಿಗೆ ತಮ್ಮ ಪಡೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಅಂತರಗಳನ್ನು ಗುರುತಿಸುವ ಹಾಗೂ ತುಂಬಿಸುವ ಉದ್ದೇಶವೇ? ಅಥವಾ ಗಡಿ ಮಾತುಕತೆಗಳನ್ನು ಆರಂಭಿಸುವ ಉದ್ದೇಶವೇ?' ಎಂದು ಹೇಳಿದರು.












Click it and Unblock the Notifications