ಸೋನಿಯಾ ಗಾಂಧಿ ಪಾತ್ರೆ ತೊಳೆಯುವ ಚಿತ್ರ: ಘರ್ಷಣೆಗೆ 1 ಸಾವು
ಜಬಲ್ಪುರ (ಮ.ಪ್ರ), ಜೂ 16 (ಪಿಟಿಐ) : ಕಿಡಿಗೇಡಿಯೊಬ್ಬ ವಾಟ್ಸಾಪ್ ಗ್ರೂಪಿನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಕ್ಷೇಪಾರ್ಹ ಚಿತ್ರ ಪ್ರಕಟಿಸಿದ ನಂತರ ಉಂಟಾದ ಘರ್ಷಣೆಯಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ.
ವಿಜಯನಗರ ಫ್ರೆಂಡ್ಸ್ ಹೆಸರಿನ ವಾಟ್ಸಾಪ್ ಗ್ರೂಪ್ ಸೋನಿಯಾ ಗಾಂಧಿಯವರು ಪಾತ್ರೆ ತೊಳೆಯುವ ಚಿತ್ರವನ್ನು ಪ್ರಕಟಿಸಿತ್ತು. (ಸಿದ್ದು ಸಂಪುಟ ಸೇರಲಿರುವ ಅದೃಷ್ಟವಂತರು)
ಈ ಬಗ್ಗೆ ದೂರು ನೀಡಲು ಕಾಂಗ್ರೆಸ್ ನಗರಪಾಲಿಕೆ ಸದಸ್ಯ ಜತಿನ್ ರಾಜ್ ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಸ್ಟೇಷನಿಗೆ ಹೋದಾಗ, ಠಾಣೆಯಲ್ಲೇ ವಿರೋಧಿಗಳ ಗುಂಪು ಮತ್ತು ಪಾಲಿಕೆ ಸದಸ್ಯರ ಗುಂಪಿನ ನಡುವೆ ಘರ್ಷಣೆ ಸಂಭವಿಸಿ, ಒಬ್ಬ ಸಾವನ್ನಪ್ಪಿ ಇತರ ಆರು ಜನ ಗಾಯಗೊಂಡಿದ್ದಾರೆ.
ನಗರದ ವಿಜಯನಗರ ಪೊಲೀಸ್ ಠಾಣೆಯೊಳಗೆ ಚಾಕುವಿನಿಂದ ನಮ್ಮ ತಂಡದ ಸದಸ್ಯನ ಮೇಲೆ ಹಲ್ಲೆ ನಡೆಸಲಾಗಿದೆ. ಪೊಲೀಸರು ದೂರು ಸ್ವೀಕರಿಸುವ ಬದಲು, ಇತರ ಠಾಣೆಗಳಿಂದ ಪೊಲೀಸರನ್ನು ಸ್ಥಳಕ್ಕೆ ಕರೆತರುವ ಕೆಲಸಕ್ಕೆ ಮುಂದಾದರು ಎಂದು ಪಾಲಿಕೆ ಸದಸ್ಯ ಜತಿನ್ ಆರೋಪಿಸಿದ್ದಾರೆ.
ಪ್ರಶಾಂತ್ ರಾಜ್ ಎನ್ನುವ ವ್ಯಕ್ತಿ ಈ ವಾಟ್ಸಾಪ್ ಗ್ರೂಪಿನಲ್ಲಿ ಸೋನಿಯಾ ಪಾತ್ರೆ ತೊಳೆಯುವ ಚಿತ್ರ ಪ್ರಕಟಿಸಿ, ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಅವರನ್ನು ಈ ಮಟ್ಟಕ್ಕೆ ಇಳಿಸಿದ್ದಾರೆ ಎನ್ನುವ ಕ್ಯಾಪ್ಸನ್ ನೀಡಿ ಚಿತ್ರ ಪ್ರಕಟಿಸಿದ್ದಾನೆಂದು ಪೊಲೀಸ್ ವರಿಷ್ಠ ಬಲಾಸವರ್ ಹೇಳಿದ್ದಾರೆ.
ಬುಧವಾರ (ಜೂ 15) ತಡರಾತ್ರಿಯೇ ಈ ಸಂಬಂಧ ಇತ್ತಂಡಗಳ ನಡುವೆ ಭಾರೀ ವಾಗ್ಯುದ್ದ ನಡೆದಿತ್ತು, ಆದರೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. (ಯಾರ ಕೈ ತಪ್ಪಲಿದೆ ಸಚಿವ ಸ್ಥಾನ)
ಇದಾದ ನಂತರ ಪೊಲೀಸ್ ಠಾಣೆಯಲ್ಲಿ ನಡೆಯಲ್ಲಿ ನಡೆದ ಘರ್ಷಣೆಯಲ್ಲಿ ಉಮೇಶ್ ವರ್ಮ ಎನ್ನುವ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿತ್ತು. ಪೊಲೀಸರು ಈ ವಿಡಿಯೋ ಫೂಟೇಜನ್ನು ಸಾರ್ವಜನಿಕಗೊಳಿಸಬೇಕೆಂದು ಕಾಂಗ್ರೆಸ್ ನಗರಪಾಲಿಕೆ ಸದಸ್ಯ ಜತಿನ್ ರಾಜ್ ಆಗ್ರಹಿಸಿದ್ದಾರೆ.