ಅಗ್ನಿಪಥ್ ಪ್ರತಿಭಟನಾಕಾರರಿಗೆ ಸೋನಿಯಾ ಗಾಂಧಿ ನೀಡಿದ ಸಂದೇಶವೇನು?
ನವದೆಹಲಿ, ಜೂನ್ 18: ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧದ ಪ್ರತಿಭಟನೆ ಎಂಟು ರಾಜ್ಯಗಳಿಗೆ ವ್ಯಾಪಿಸಿದೆ. ಕೇಂದ್ರ ಸರ್ಕಾರದ ಹೊಸ ವಿವಾದಾತ್ಮಕ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುವುದರಲ್ಲಿ ಪ್ರತಿಭಟನಾಕಾರರಿಗೆ ಕಾಂಗ್ರೆಸ್ ಬೆಂಬಲವಾಗಿ ನಿಲ್ಲಲಿದೆ ಎಂದು ಅಧ್ಯಕ್ಷೆ ಸೋನಿಯಾ ಗಾಂಧಿ ಭರವಸೆ ನೀಡಿದ್ದಾರೆ.
ಹೊಸ ಸೇನಾ ನೇಮಕಾತಿ ಯೋಜನೆಯಲ್ಲಿ ಯಾವುದೇ ದಿಕ್ಕುಗಳಿಲ್ಲ, ಸೇನಾ ಉದ್ಯೋಗದ ಆಕಾಂಕ್ಷಿಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳದೆ ಘೋಷಿಸಲಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಹಿಂದಿಯಲ್ಲಿ ಹೇಳಿಕೆ ಪ್ರಕಟಿಸಿದ್ದಾರೆ.
Explainer: ಅಗ್ನಿಪಥ್ ಯೋಜನೆಗೆ ವಿರೋಧವೇಕೆ? ಪ್ರತಿಭಟನಾಕಾರರ ಬೇಡಿಕೆಗಳೇನು?
"ಕೇಂದ್ರ ಸರ್ಕಾರವು ನಿಮ್ಮ ಧ್ವನಿಯನ್ನು ನಿರ್ಲಕ್ಷಿಸಿ "ಹೊಸ ಸೇನಾ ನೇಮಕಾತಿ ಯೋಜನೆಯನ್ನು" ಘೋಷಿಸಿದ್ದಕ್ಕಾಗಿ ನನಗೆ ತೀವ್ರ ನಿರಾಸೆಯಾಗಿದೆ, ಇದು ದಿಕ್ಕಿಲ್ಲದಂತಿದೆ. ಅನೇಕ ಮಾಜಿ ಸೈನಿಕರು ಸಹ ಹೊಸ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ," ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
|
ಸೋನಿಯಾ ಗಾಂಧಿ ಟ್ವೀಟ್ ಸಂದೇಶದಲ್ಲಿ ಏನಿದೆ?
"ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಯೋಜನೆಯ ವಿರುದ್ಧ ನಿಮ್ಮ ಹಿತಾಸಕ್ತಿಗಳನ್ನು ರಕ್ಷಿಸುವ ನಮ್ಮ ಭರವಸೆಯೊಂದಿಗೆ ಬಲವಾಗಿ ನಿಂತಿದೆ. ನಿಜವಾದ ದೇಶಪ್ರೇಮಿಯಾಗಿ, ನಾವು ಹಿಂಸಾಚಾರಯಿಲ್ಲದೇ, ತಾಳ್ಮೆ ಮತ್ತು ಶಾಂತಿಯಿಂದ ಯೋಜನೆಯ ವಿರುದ್ಧ ಧ್ವನಿ ಎತ್ತುತ್ತೇವೆ," ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದ ಎಂಟು ರಾಜ್ಯಗಳಲ್ಲಿ 600 ಪ್ರತಿಭಟನಾಕಾರರ ಬಂಧನ
ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧದ ಪ್ರತಿಭಟನೆಯು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಎಂಟು ರಾಜ್ಯಗಳಿಗೆ ಹರಡಿದೆ. ಇದರ ಮಧ್ಯೆ ಪ್ರತಿಭಟನೆ ನಡೆಸಿದ ಸುಮಾರು 600 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರು ಬಿದಿರಿನ ಕೋಲುಗಳನ್ನು ಹಿಡಿದು ರೈಲ್ವೆ ನಿಲ್ದಾಣಗಳಿಗೆ ನುಗ್ಗಿದರು. ನಗರದ ಹಲವು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದ್ದು, ಹೆದ್ದಾರಿಗಳಲ್ಲಿ ತಡೆ ನಡೆಸಲಾಯಿತು.
|
ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಸಂದೇಶದಲ್ಲಿ ಏನಿದೆ?
ಸತತ 8 ವರ್ಷಗಳಿಂದ ಬಿಜೆಪಿ ಸರ್ಕಾರ 'ಜೈ ಜವಾನ್, ಜೈ ಕಿಸಾನ್' ಮೌಲ್ಯಗಳಿಗೆ ಅಪಮಾನ ಮಾಡಿದೆ. ಕಪ್ಪು ಕೃಷಿ ಕಾಯ್ದೆಯನ್ನು ಪ್ರಧಾನಿ ಹಿಂಪಡೆಯಬೇಕು ಎಂದು ಈ ಹಿಂದೆಯೂ ಹೇಳಿದ್ದೆ. ಅದೇ ರೀತಿ 'ಮಾಫಿವೀರ್' ಆಗುವ ಮೂಲಕ ದೇಶದ ಯುವಕರನ್ನು ಪಾಲಿಸಬೇಕಾಗುತ್ತದೆ ಮತ್ತು 'ಅಗ್ನಿಪಥ್' ವಾಪಸು ಪಡೆಯಬೇಕಾಗುತ್ತದೆ," ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
ಏನಿದು ಅಗ್ನಿಪಥ್ ನೇಮಕಾತಿ ಯೋಜನೆ?
ಕೇಂದ್ರ ಸರ್ಕಾರವು ಮಂಗಳವಾರ ಅಗ್ನಿಪಥ್ ಅನ್ನು ಅನಾವರಣಗೊಳಿಸಿದ್ದು, ಇದನ್ನು "ಪರಿವರ್ತನೆ"ಯ ಯೋಜನೆ ಎಂದು ಕರೆದಿದೆ. ದೇಶದ ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೈನಿಕರ ನೇಮಕಾತಿಗಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ.
ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.